ಬಯಲ ರೂಪ ಮಾಡಬಲ್ಲಾತನೇ ಶರಣನು

ಬಯಲ ರೂಪ ಮಾಡಬಲ್ಲಾತನೇ ಶರಣನು

 

 

 

 

 

 

 

 

 

 

ಬಯಲ ರೂಪ ಮಾಡಬಲ್ಲಾತನೆ ಶರಣನು .
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯ್ದಿದ್ದಡೆ ಎಂತು ಶರಣನೆಂಬೆ ?
ಆ ರೂಪ ಬಯಲು ಮಾಡಲರಿಯ್ದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೇ
ಕೂಡಲಸಂಗಮದೇವ.
ಬಸವಣ್ಣನವರು. ಸಮಗ್ರ ವಚನ ಸಂಪುಟ ಸಂಖ್ಯೆ 923 ಪುಟ 243

ಬಸವಣ್ಣನವರ ಐಕ್ಯನ ಜ್ಞಾನಿಸ್ಥಲ ವಚನ . ಬಯಲ ಅಂದರೆ ಸೃಷ್ಟಿ ಸಮಷ್ಟಿ ಬ್ರಹ್ಮಾಂಡ .ಇಂತಹ ಬಯಲನ್ನು ಒಂದು ರೂಪ ಮಾಡಬಲ್ಲಾತನೆ ಶರಣನು.
ಕರಸ್ಥಲಕ್ಕೆ ಅರಿವಿನ ಕುರುಹಾಗಿ ಪಡೆದು ಅಂಗ ಲಿಂಗ ಸಂಧಾನ ನಡೆಸುವ ಅರಿವಿನದ್ಯೋತಕವಾದ ಶಿವಾನುಭ ಕ್ರಿಯೆ. ಸಮಷ್ಟಿಯ ಭಾವವನ್ನು ಅಂಗೈಯಲ್ಲಿ ಅರಿವಿನ ಕುರುಹಾಗಿ ಮಾಡಬಲ್ಲವನೆ ಶರಣನು. ಶರಣ ಪರಿಪೂರ್ಣತೆಯ ಸಂಕೇತ ಪ್ರತಿನಿಧಿ. ಅನ್ಯ ಧರ್ಮದಲ್ಲಿ ಇದಕ್ಕೆ ಪರ್ಯಾಯ ಪದಗಳಿಲ್ಲ.ಭಿಕ್ಷು ಮಾಂಕ್ ಫಕೀರ ಮುನಿ ಇವು ಶರಣ ಪದಕ್ಕೆ ಸಮಬಾರವು.
ಕರಸ್ಥಲದ ರೂಪವನ್ನು ಮತ್ತೆ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ . ಬಯಲ ರೂಪಗೊಂಡ ಕರಸ್ಥಲದ ಲಿಂಗವು ಬ್ರಹ್ಮಾಂಡವೆಂದು ತಿಳಿದು ನಡೆಯುವವನೇ ಲಿಂಗಾನುಭಾವಿ. ಅಂದರೆ ವಸ್ತಿ ಸಮಷ್ಟಿಯ ಮಧ್ಯದ ನೇರ ಕೊಂಡಿ ಭಕ್ತ. ಅಂತರಂಗ ಬಹಿರಂಗಗಳ ಸಮಾಗಮಕ್ಕೆ ಕೇಂದ್ರ ಬಿಂದುವೇ ಇಷ್ಟಲಿಂಗ ಅರಿವಿನ ಕುರುಹು. ಆದರೆ ಅರಿವನ್ನು ಕೇವಲ ಕುರುಹು ರೂಪದಲ್ಲಿ ಬಂದಿಸಲ್ಪಟ್ಟರೆ ಆಡು ಆಚರಣೆ ಸಂಪ್ರದಾಯ ಪೂಜೆಯಾಗುತ್ತದೆ.ಕಾರಣ ಲಿಂಗವೆಂಬ ರೂಪವನ್ನು ಸಮಷ್ಟಿಯೆಂದು ತಿಳಿದು ಅದರ ರೂಪವನ್ನು ಬಯಲು ಮಾಡಬಲ್ಲಾತ ಲಿಂಗಾನುಭಾವಿ.ಲಿಂಗವೆಂಬ ರೂಪದ ರಹಸ್ಯವನ್ನು ಹೊರ ಹಾಕುವವನು ತಿಳಿಯುವವನು ಬಯಲು ಮಾಡುವವನು ಲಿಂಗಾನುಭಾವಿಯಾಗುತ್ತಾನೆ.

ಬಯಲ ರೂಪ ಮಾಡಲರಿಯ್ದಿದ್ದಡೆ ಎಂತು ಶರಣನೆಂಬೆ ?

ಬಯಲ ಸಮಷ್ಠಿ ಸೃಷ್ಟಿಯನ್ನು ರೂಪಮಾಡಲರಿಯದವನು ಅದನ್ನು ಸಂಕೇತವಾಗಿ ಕಾಣದವನು
ಹೇಗೆ ಶರಣನಾಗಬಲ್ಲ ಇದು ಬಸವಣ್ಣನವರ ಪ್ರಶ್ನೆಯಾಗಿದೆ, ಸೃಷ್ಟಿಯೊಳಗಿನ ಚರಾಚರ ಜೀವಿಗಳು ಕಾಡು ಗುಡ್ಡ ಬೆಟ್ಟ ನದಿ ಸರೋವರಸಮುದ್ರ ಮುಗಿಲು ಮೋಡ ಕಣವಿ ಹೀಗೆ ಬೇರೆ ಬೇರೆ ಚಿತ್ರಣಗಳಿದ್ದರೂ ನಮ್ಮ ಅರಿವಿಗೆ ಸರಳವಾಗಿ ಗೋಚರಿಸಲೆಂದೇ ಅಪ್ಪ ಬಸವಣ್ಣನವರು ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಕುರುಹಾಗಿ ರೂಪವಾಗಿ ಕರಸ್ಥಲಕೆ ಲಿಂಗವಾಗಿ ಕೊಟ್ಟರು.ಲಿಂಗವೆಂಬ ರೂಪದಲ್ಲಿ ಬಯಲ ಕಾಣುವವನೆ ಶರಣನು.

ಆ ರೂಪ ಬಯಲು ಮಾಡಲರಿಯ್ದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?

ಕರಸ್ಥಲಕ್ಕೆ ಚುಳುಕಾದ ಇಷ್ಟಲಿಂಗವನ್ನು ಧ್ಯಾನಕ್ಕೆ ಅಧ್ಯಾತ್ಮಕ್ಕೆ ಪ್ರಾರ್ಥನೆ ಪೂಜೆಗೆ ಮಾತ್ರ ಸೀಮಿತಗೊಳಿಸಿದರೆ ಅದು ಅಪರಾಧವಾಗುತ್ತದೆ.
ಲಿಂಗವು ಸಮಷ್ಟಿಯ ಪ್ರತೀಕವಾದ ಕಾರಣ ಭಕ್ತನಿಗೆ ಸಮಷ್ಟಿಯನ್ನು ಕಾಪಾಡುವ ರಕ್ಷಿಸುವ ಹೊಣೆಗಾರಿಕೆಯಿರುತ್ತದೆ. ಕೈಯೊಳಗಿನ ಲಿಂಗವೆಂಬ ರೂಪವು ಸಮಷ್ಟಿಯೆಂದು ಅದರ ರಹಸ್ಯವನ್ನು ಬಿಚ್ಚುಡುವವನು ಬಯಲು ಮಾಡುವವನೇ ನಿಜವಾದ ಲಿಂಗಾನುಭಾವಿ. ಲಿಂಗ ನಿರುಪಾಧಿತ ಯೋಗ ಮಾರ್ಗದ ಗಟ್ಟಿ ಮುಟ್ಟಾದ ಸಂಕೇತ . ಆ ಕುರುಹಿನ ಉದ್ದೇಶವನ್ನು ಬಯಲು ಮಾಡುವುದೆ ಲಿಂಗಾನುಭಾವಿಯ ಶಿವಯೋಗದ ನಿರಂತರ ಪ್ರಯತ್ನವಾಗಿರುತ್ತದೆ.

ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ.
ಬಯಲ ಮತ್ತು ರೂಪ, ಬ್ರಹ್ಮಾಂಡ ಮತ್ತು ಪಿಂಡಾಂಡ .ವ್ಯಕ್ತಿ ಮತ್ತು ಸಮಷ್ಟಿ ಇವು ಅಂಗ ಲಿಂಗದ ಪ್ರತೀಕಗಳು. ಅಂಗ ಲಿಂಗ ಒಂದಾಗಿ ಜಂಗಮ ಸಮಾಜಕ್ಕೆ
ದುಡಿಯ ಬಲ್ಲವನೇ ಭಕ್ತನು .ಇಂತಹ ಉಭಯ ಭಾವ ದ್ವಂದ್ವಗಳನ್ನು ಕಳೆದು ನಿಜ ಪರಮಸುಖ ಪಡೆಯುವುದೇ ಶಿವಯೋಗವಾಗಿದೆ.
ಅಲ್ಲಿ ಶಬ್ದ ಸ್ಪರ್ಶ ರೂಪ ರಸ ಗಂಧ ಗೌಣವಾಗುತ್ತವೆ. ಅಂತಃಚಕ್ಷುವಿನ ಮೂಲಕ ನಮ್ಮ ಒಳಗಣ ಪಯಣಕ್ಕೆ ಹೋದಾಗ ಮಾತ್ರ ಇಂತಹ ಅನುಭವ ಬರುತ್ತದೆ.
ಉಭಯ ಭಾವ ಒಂದೇ ಎಂದು ತಿಳಿದರೆ ಸೃಷ್ಟಿಕರ್ತನಲ್ಲಿ ಮತ್ತೆ ಬೇರೆ ತೆರಹು ಸ್ಥಾನವುಂಟೆ ಎಂದು ಬಸವಣ್ಣನವರು ತನ್ನೊಳಗಿನ ಪಾರಮಾತ್ಮನನ್ನು ಕೇಳಿಕೊಳ್ಳುತ್ತಾರೆ.ಇದನ್ನು ಪ್ರತಿಯೊಬ್ಬ ಭಕ್ತ ಅನುಭವಿಸಬೇಕು ಆಗ ಮಾತ್ರ ಲಿಂಗಾನುಭಾವದ ಸಾರ್ಥಕತೆ ಅರಿವಾಗುವುದು.

 

 

 

 

 

 

 

 

 

 

-ಡಾ.ಶಶಿಕಾಂತ ಪಟ್ಟಣ ಪುಣೆ

Don`t copy text!