ಮುಂಡರಗಿಯಲ್ಲಿ 11ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ
e- ಸುದ್ದಿ ಮುಂಡರಗಿ
ಒಂದು ಭೂಮಿಗಾಗಿ ಸಮಗ್ರ ಆರೋಗ್ಯಕ್ಕಾಗಿ’ ಎಂಬ ಘೋಷ ವಾಕ್ಯವನ್ನು ಅನುರಣಿಸುವ ನಿಟ್ಟಿನಲ್ಲಿ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಠದ ಆವರಣದಲ್ಲಿ 11ನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ಅತ್ಯಂತ ಅರ್ಥಪೂರ್ಣವಾಗಿ ನಡೆದಿದ್ದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಂಸ್ಥೆ, ಚೈತನ್ಯ ಶಿಕ್ಷಣ ಸಂಸ್ಥೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಪತಂಜಲಿ ಯೋಗ ಸಂಸ್ಥೆಯ ಸಾಧಕರು, ಅನ್ಮೋಲ್ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ಸಾಧಕರು, ತಾಲೂಕ ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ತಾಲೂಕಿನ ಹಲವಾರು ಶಿಕ್ಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ. ನಿ. ಪ್ರ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾ ಸ್ವಾಮೀಜಿಯವರು ವಹಿಸಿದ್ದು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಆಶೀರ್ವಚನ ನೀಡಿದ ಪೂಜ್ಯರು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಪ್ರಸ್ತುತ 11ನೇ ವರ್ಷದಲ್ಲಿ ಕಾಲಿಟ್ಟಿದ್ದು ಜಗತ್ತಿನ ಸರಿಸುಮಾರು ಇನ್ನೂರಕ್ಕೂ ಹೆಚ್ಚು ದೇಶಗಳು ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಪತಂಜಲಿ ಮಹರ್ಷಿಯು ಜಗತ್ತಿಗೆ ನೀಡಿರುವ ಅತ್ಯಮೂಲ್ಯವಾದ ಕಾಣಿಕೆ ಅಷ್ಟಾಂಗ ಯೋಗ. “ಯೋಗಃ ಚಿತ್ತವೃತ್ತಿ ನಿರೋಧಃ” ಎಂಬ ಮಾತಿನಂತೆ ನಮ್ಮ ಮನಸ್ಸಿನ ಎಲ್ಲ ವ್ಯವಹಾರಗಳನ್ನು ನಿಯಂತ್ರಿಸುವ ಶಕ್ತಿ ಯೋಗಕ್ಕೆ ಇದೆ. ಈ ಯೋಗದ ಅಭ್ಯಾಸವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿದಿನವೂ ಯೋಗ ದಿನವನ್ನಾಗಿ ಆಚರಿಸಿ ನಮ್ಮ ಮಾನಸಿಕ,ದೈಹಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಅವರು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಅಳವಂಡಿಯವರು ಯೋಗವು ನಮ್ಮ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುತ್ತದೆ. ಸಾವಿರಾರು ವರ್ಷಗಳ ಹಿಂದಿನಿಂದಲೇ ಯೋಗವು ಭಾರತೀಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಭಾರತೀಯ ಜೀವನ ಪದ್ಧತಿಗೆ ಯೋಗವು ಮೂಲ ಆಕರವಾಗಿದ್ದು ಅದೆಷ್ಟೋ ಕಾಯಿಲೆಗಳಿಗೆ ಯೋಗವು ರಾಮಬಾಣವಾಗಿದೆ ಎಂದು ಹೇಳಿದರು.
ಅನ್ಮೋಲ್ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ನಿರ್ದೇಶಕಿ ಡಾ.ಮಂಗಳ ಚಂದ್ರಕಾಂತ್ ಇಟಗಿ ಅವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಪ್ರತಿಯೊಂದು ಆಸನಗಳನ್ನು ಮಾಡಿಸುವಾಗ ಆಯಾ ಆಸನಗಳನ್ನು ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಕುರಿತು ಅವರು ವಿವರಿಸುತ್ತಾ ಯೋಗಾಸನವನ್ನು ಮಾಡಿಸಿದರು.
ವೇದಿಕೆಯ ಮೇಲೆ ಮುಂಡರಗಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್ ಎಂ ಪಡ್ನೇಶಿ, ಅನ್ನದಾನೀಶ್ವರ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ
ಡಾ. ಬಿ ಜಿ ಜವಳಿ, ಕರ ಬೆಲ್ಲದ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸಂತೋಷ್ ಹಿರೇಮಠ್, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಅಳವಂಡಿ, ಪತಂಜಲಿ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ಇಟಗಿ, ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಚಂದ್ರಕಾಂತ್ ಇಟಗಿ, ಅನ್ಮೋಲ್ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ನಿರ್ದೇಶಕರಾದ ಡಾ.ಮಂಗಳ ಚಂದ್ರಕಾಂತ್ ಇಟಗಿ, ಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವೀಣಾ ಹೇಮಂತ್ ಗೌಡ ಪಾಟೀಲ್, ಪುರಸಭೆ ಉಪಾಧ್ಯಕ್ಷರಾದ ನಾಗೇಶ್ ಹುಬ್ಬಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಹೇಮಗಿರೀಶ ಹಾವಿನಾಳ, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಇಟಗಿ, ಜಗದ್ಗುರು ಅನ್ನದಾನೀಶ್ವರ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕರಾದ ರಾಜಶೇಖರ್ ಕಡಿವಾಳ ಮತ್ತು ಪ್ರತಿದಿನವೂ ಶ್ರೀ ಮಠದ ಆವರಣದಲ್ಲಿ ಯೋಗ ತರಬೇತಿಯನ್ನು ನೀಡುವ ವೆಂಕಟಗಿರಿ ಭದ್ರಾವತಿ ಅವರು ಉಪಸ್ಥಿತರಿದ್ದರು.
ಪ್ರಾತ್ಯಕ್ಷಿಕೆಯ ನಂತರ ಯೋಗ ಬಳಗದವರಿಂದ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟ ಡಾ. ಮಂಗಳ ಇಟಗಿ ಅವರಿಗೆ ಸನ್ಮಾನಿಸಲಾಯಿತು. ಮುಂಡರಗಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎಮ್ ಪಡ್ನೇಶಿಯವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗದ ಅಭ್ಯಾಸವನ್ನು ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮಾಡಲಿ ಎಂಬ ಅಪೇಕ್ಷೆಯಿಂದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ತಮಗೆ ಸಂತಸವನ್ನು ತಂದಿದೆ ಎಂದು ಹೇಳಿದರು.
ವಿದ್ಯುಕ್ತವಾಗಿ ಕಾರ್ಯಕ್ರಮವು ಪ್ರಾರಂಭವಾಗುವ ಮುನ್ನ ಯೋಗದ ಕುರಿತು ಮಂಜುನಾಥ್ ಅಳವಂಡಿ ಅವರು ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಗಳನ್ನು ಮಾಡಲಾಯಿತು.
ರೇಖಾ ಹಿರೇಮಠ್, ಸವಿತಾ ಗೋಡಿ ಮತ್ತು ಕಾಮಾಕ್ಷಿ ಹೆಗ್ಗಡಾಳ್ ಅವರಿಂದ ಪ್ರಾರ್ಥನೆ ಜರುಗಿತು
ಮಂಜುಳಾ ಇಟಗಿ ಅವರು ಎಲ್ಲರನ್ನು ಸ್ವಾಗತಿಸಿದರು.
ವೀಣಾ ಹೇಮಂತ್ ಗೌಡ ಪಾಟೀಲ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ ಸಚಿನ್ ಉಪ್ಪಾರ್ ರವರು ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ವಂದಿಸಿದರು.