ಬಸವ ಹೆಮ್ಮರ
ಭಕ್ತಿಯ ಬೀಜ ಬಿತ್ತಿದಿರಿ ಅಂದು
ಹೆಮ್ಮರವಾಗಿ ಬೆಳೆದಿಹುದು ಇಂದು
ಕವಲೊಡೆದು ಅರಿವಿನಾ ಕಣ್ಣಾಗಿ
ವೈಚಾರಿಕ ಬೇರಬಿಟ್ಟಿಹುದು
ಮೌಢ್ಯವನು ಸೀಳಿ ಆಳಕ್ಕೆ ಇಳಿದಿಹುದು||
ಶರಣ ಸುಮವಾಗಿ ಲಿಂಗ ಕಾಯಾಗಿ
ಪಂಚಾಚಾರದಿ ಮೆಲ್ಲನೆ ಪಲ್ಲವಿಸಿ
ಷಟ್ಥ್ಸಲವು ಅಂತರಂಗದಿ ಸಾಗಿ ಘಮಘಮಿಸಿ
ಅಷ್ಟಾವರಣದಿ ಜಗವ ಆವರಿಸಿಹುದು ||
ಸೀಮಾತೀತವಾಗಿ ಬೆಳೆದಿಹುದು
ಜ್ಞಾನಜ್ಯೋತಿಯ ಬಸವಮರವು
ಅದನಾಶ್ರಯಿಸಿ ಅರಿತವರಿಗೆ
ಅನುಗಾಲವು ಅನಂತ ಸುಖವು ||
ಲಿಂಗದ ನೆಲೆಯನರಿದು
ವಚನ ರಸ ಸವಿದು
ಶರಣ ಮಾರ್ಗದಿ ನಡೆಸು
ತವನಿಧಿ ವಿಜಯಮಹಾಂತೇಶ ||
–ಸವಿತಾ ಮಾಟೂರು ಇಲಕಲ್ಲ