ಚಂದ್ರಗೌಡ ಕುಲಕರ್ಣಿಯವರಿಗೆ
2024 ರ ಕಲಾಶಿಸಂ ಪ್ರತಿಷ್ಠಾನ ಗೌರವ ಪ್ರಶಸ್ತಿ
e- ಸುದ್ದಿ ಮುಂಡರಗಿ
ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಕೊಡುವ 2024 ರ ಗೌರವ
ಪ್ರಶಸ್ತಿಗೆ ಹುಡುಗಾಟ-ಹುಡುಕಾಟ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದ ಚಿಲಿಪಿಲಿ ಶ್ರೀಗಂಧದ ಮಕ್ಕಳ ಕವಿ ಚಂದ್ರಗೌಡ ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಇದೇ ರೀತಿ 2024ರ ಪುಸ್ತಕ ಪ್ರಶಸ್ತಿಗೆ ಬೆಂಗಳೂರಿನ ವಸು ವತ್ಸಲೆಯವರ ‘ಅಂತರಿಕ್ಷದಲ್ಲಿ ವಿಹಾ’ ಮಕ್ಕಳ ಕಥಾ ಕೃತಿ ಆಯ್ಕೆಯಾಗಿದೆ ಎಂದು ಕಲಾಶಿಸಂ ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ತಿಳಿಸಿದ್ದಾರೆ.
ಆದರ್ಶ ಶಿಕ್ಷಕಿಯಾಗಿದ್ದ ಕಲಾ ಸೊಲಗಿಯವರ ಸ್ಮರಣೆಯಲ್ಲಿ 2023ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು 2023 ರಲ್ಲಿ ಕತೆಗಾರರಾದ ಮತ್ತೂರ ಸುಬ್ಬಣ್ಣ ಹಾಗೂ ಡಾ. ಬಸು ಬೇವಿನಗಿಡದ ಪ್ರಶಸ್ತಿಗೆ ಭಾಜನರಾಗಿದ್ದರು.
ಗೌರವ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದರೆ, ಪುಸ್ತಕ ಪ್ರಶಸ್ತಿಯು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯಲ್ಲಿ ಶಂಕರ ಹಲಗತ್ತಿ, ಬಸವರಾಜ ಗಾರ್ಗಿ, ಗುಂಡುರಾವ್ ದೇಸಾಯಿ, ವಿವೇಕಾನಂದಗೌಡ ಪಾಟೀಲ ಇದ್ದರು.
ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 16 ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯುತ್ತಿದ್ದು ನಾಡಿನ ಹೆಸರಾಂತ ಮಕ್ಕಳ ಸಾಹಿತಿಗಳು ಭಾಗವಹಿಸಲಿದ್ದಾರೆ.
ಈ ವರ್ಷ ಕೇವಲ ಪ್ರಶಸ್ತಿ ಪ್ರದಾನ ಮಾಡಿ ಮುಗಿಸದೇ ಧಾರವಾಡ ಚಿಲಿಪಿಲಿ ಸಹಯೋಗದಲ್ಲಿ ಗೌರವ ಪ್ರಶಸ್ತಿಗೆ ಭಾಜನರಾದ ಚಂದ್ರಗೌಡ ಕುಲಕರ್ಣಿಯವರ ಸಾಹಿತ್ಯದ ಕುರಿತು ಇಡೀ ದಿನ ವಿಚಾರ ಸಂಕಿರಣ ಜರುಗಲಿದೆ ಎಂದು ಡಾ. ನಿಂಗು ಸೊಲಗಿ ತಿಳಿಸಿದ್ದಾರೆ.