ಮೌನ ಕಾಲ್ನಡಿಗೆ ಜಾಥಾ ಮತ್ತು ಆಮರಣಾಂತ ಉಪವಾಸ ಸತ್ಯಾಗ್ರಹ
ನಮ್ಮ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ ನಗರ ನಿಡಗುಂದಿ ಶಾಲೆಗೆ ನಾಲ್ಕು ತರಗತಿ ಕೋಣೆಗಳ ಮಂಜೂರಾತಿಗೆ ಆಗ್ರಹಿಸಿ ಶಾಲೆಯಿಂದ ಬಿಇಒ ಕಛೇರಿವರೆಗೆ
ಆತ್ಮೀಯರೇ,
ಸರಕಾರಿ ಶಾಲೆಗಳು ಉಸಿರಾಡುವುದಕ್ಕೂ ಕಷ್ಟಪಡುತ್ತಿರುವ ಕಾಲದಲ್ಲಿ ನಾವಿದ್ದೇವೆ. ಇಂದು ಶಾಲೆಗಳಿವೆ, ಮಕ್ಕಳಿವೆ ಆದರೆ ಎಷ್ಟೋ ಶಾಲೆಗಳಲ್ಲಿ ಒಬ್ಬರೂ ಶಿಕ್ಷಕರಿಲ್ಲ. ಶಿಕ್ಷಕರಿಲ್ಲದೆ ಮಕ್ಕಳು ಹೇಗೆ ಓದಿಯಾರು? ಶಾಲೆಗಳು ಹೇಗೆ ಉಳಿದಾವು? ಒಂದು ಕಡೆ ಮಕ್ಕಳಿಲ್ಲ ಅಂತ ನೆಪವೊಡ್ಡಿ ಸರಕಾರಿ ಸರಕಾರಿ ಶಾಲೆಗಳ ಕುತ್ತಿಗೆ ಹಿಚುಕಿ ಸಾಯಿಸಲು ತುದಿಗಾಲಲ್ಲಿ ನಿಂತಿದ್ದರೆ, ಮತ್ತೊಂದು ಕಡೆ ಖಾಯಂ ಶಿಕ್ಷಕರೇ ಇಲ್ಲದೇ ರಾಜ್ಯದ ಅನೇಕ ಶಾಲೆಗಳು ಉಸಿರು ಹಿಡಿದುಕೊಳ್ಳಲು ಪರದಾಡುತ್ತಿವೆ.
ಈ ಬಾರಿಯ ಬಜೆಟ್ ನಲ್ಲಿ ಸರಕಾರಿ ನಮ್ಮ ಶಿಕ್ಷಣ ಇಲಾಖೆಗೆ ಅತಿಹೆಚ್ಚು ಅನುದಾನ ನೀಡಿದೆ. ಆದರೆ ಆ ಅನುದಾನ ಯಾವುದಕ್ಕೆ ಬಳಕೆಯಾಗುತ್ತಿದೆ? ಹೇಗೆ ಮಕ್ಕಳಿಗೆ ಉಪಯೋಗವಾಗುತ್ತಿದೆ ? ಎಂಬ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಜಾತಿ ಬಲ, ಅಧಿಕಾರದ ಬಲ, ಹಣದ ಬಲ ಇದ್ದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಕೊಠಡಿಗಳನ್ನು ಕಟ್ಟಿ ಕೊಡುತ್ತಿದ್ದರೆ ನಾವು ಜನರ ಪ್ರೀತಿ ಮತ್ತು ನಂಬಿಕೆಯಿAದ ಮಾನ್ಯ ರಾಜ್ಯಪಾಲರ ಹೆಸರಿಗೆ ಹತ್ತುಗುಂಟೆ ಜಮೀನನ್ನು ಖರೀದಿಸಿದರೂ ನಮಗೆ ಅಗತ್ಯ ತರಗತಿ ಕೋಣೆಗಳಿಲ್ಲ. ಶಿಕ್ಷಣ ಪ್ರೇಮಿಗಳಾದ ರಾಮಮೋಹನ್ ಕೆ ಎನ್ ರವರು ನಮ್ಮ ಶಾಲೆಗೆ ಒಂದು ಬಹುಭಾಷಾ ಪ್ರಯೋಗಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ. ಆದರೆ ಕಳೆದ ಒಂಭತ್ತು ವರುಷಗಳಿಂದ ಬೇಡಿಕೆ ಇಡುತ್ತ ಬಂದಿದ್ದರೂ ನಮ್ಮ ಶಾಲೆಗೆ ಒಂದೇ ಒಂದು ಸುಸಜ್ಜಿತವಾದ ತರಗತಿ ಕೊಠಡಿ ಮಂಜೂರಾಗಲಿಲ್ಲ, ಸರಕಾರ, ಇಲಾಖೆ ಕಟ್ಟಿಸಿಕೊಡಲಿಲ್ಲ.
ನಾನು ಈ ಶಾಲೆಗೆ ಬಂದಾಗ ೭೬ ಮಕ್ಕಳಿದ್ದ ಕಿರಿಯ ಪ್ರಾಥಮಿಕ ಶಾಲೆ ಇಂದು ಉನ್ನತೀಕರಣಗೊಂಡು ಹಿರಿಯ ಪ್ರಾಥಮಿಕ ಶಾಲೆಯಾಗಿ ೧೫೦ ಮಕ್ಕಳು ಓದುತ್ತಿದ್ದಾರೆ. ನಮಗಿರುವುದು ಅದೇ ಚಿಕ್ಕ ಹಳೆಯ ಎರಡು ಕೊಠಡಿಗಳು. ಈಗ ಒಂದರಿAದ ಏಳನೇ ತರಗತಿಯ ಮಕ್ಕಳನ್ನು ನಾವು ಎಲ್ಲಿ ಕೂರಿಸುವುದು? ಹೇಗೆ ಕಲಿಸುವುದು? ಮಳೆ, ಬಿಸಿಲಲ್ಲಿ ನಮ್ಮ ಮಕ್ಕಳು ಅಂಗಳದಲ್ಲಿ ಕೂತು ಕಲಿಯಬೇಕೆ?
ಒಂದರಿAದ ಏಳನೇ ತರಗತಿಯ ಈ ಶಾಲೆಯಲ್ಲಿ ನಾನೊಬ್ಬನೇ ಖಾಯಂ ಶಿಕ್ಷಕ. ನಾವು ಶಿಕ್ಷಕರಾದವರು ಪ್ರಾಥಮಿಕ ಶಿಕ್ಷಣದ ಬಲವರ್ಧನೆಗಾಗಿ ತರಗತಿಗೊಬ್ಬ ಶಿಕ್ಷಕರನ್ನು ಕೇಳುತ್ತಿದ್ದೇವೆ. ಆದರೆ ವಾಸ್ತವ ದುರಂತವೆAದರೆ ಈಗೀಗ ರಾಜ್ಯದ ಅನೇಕ ಶಾಲೆಗಳಲ್ಲಿ ಶಾಲೆಗೊಬ್ಬ ಶಿಕ್ಷಕರೂ ಇಲ್ಲ. ಎಸ್ ಎಸ್ ಎಲ್ ಸಿ ಫಲಿತಾಂಶ ಕುಂಠಿತಗೊಂಡಿರುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಒಬ್ಬ ಖಾಯಂ ಶಿಕ್ಷಕರೂ ಇಲ್ಲದ ಶಾಲೆಗಳಿಂದ ಬರುವ ಮಕ್ಕಳು ಫೇಲಾಗದೆ ಇನ್ನೇನು ಹತ್ತನೇ ತರಗತಿ ಪರೀಕ್ಷೆಯಲ್ಲಿ ರ್ಯಾಂಕ್ ಬರುತ್ತಾರೆಯೇ?
ಸಮಾಜವಾದಿ, ಸಮಾನತಾವಾದಿ, ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವವಾದಿ ಎಂದು ಹೇಳಿಕೊಳ್ಳುವ ಸರಕಾರಗಳೇ ಸರಕಾರಿ ಶಾಲೆಗಳಿಗೊಂದು ನೀತಿ ಮತ್ತು ಬೋಧನಾ ಪದ್ಧತಿ ಮತ್ತು ಅನುದಾನಿತ ಶಾಲೆಗಳಿಗೊಂದು ನೀತಿ ಮತ್ತು ಬೋಧನಾ ಪದ್ಧತಿ ಮಾಡಿದರೆ ಬಡವ ದಲಿತ ಅಲ್ಪಸಂಖ್ಯಾತ ಮಕ್ಕಳ ಭವಿಷ್ಯದ ಜವಾಬ್ದಾರಿ ಯಾರದ್ದು? ಒಂದು ಕಡೆ ಸರಕಾರವೇ ಅನುಮತಿಸಿರುವ ಅತ್ಯಾಧುನಿಕ ಅಂತರಾಷ್ಟ್ರೀಯ ಶಾಲೆಗಳು ಮತ್ತೊಂದು ಕಡೆ ಮೂಲಭೂತ ಸೌಲಭ್ಯಗಳೂ ಇಲ್ಲದ ಸರಕಾರಿ ಶಾಲೆಗಳು ಈ ಭೇದ ಸರಿಯೇ? ಬರೀ ಉಳ್ಳವರ ಶ್ರೀಮಂತರ ಅಧಿಕಾರಸ್ತರ ರಾಜಕಾರಣಿಗಳ ಮಕ್ಕಳು ಮಾತ್ರ ಉನ್ನತಮಟ್ಟದ ಗುಣಮಟ್ಟದ ಶಿಕ್ಷಣ ಪಡೆಯಬೇಕೆ? ಬಡವರ ಮಕ್ಕಳು ಸಮಾನ ಶಿಕ್ಷಣಕ್ಕೆ ಅರ್ಹರಲ್ಲವೇ?
ಹಳ್ಳಿಗಾಡ ದಮನಿತ ಬಡವರ ಮಕ್ಕಳ ಬದುಕು ರೂಪಿಸಬೇಕಾದ ಸರಕಾರಿ ಶಾಲೆಗಳು ಶಿಕ್ಷಕರಿಲ್ಲದೆ, ತರಗತಿ ಕೋಣೆಗಳಿಲ್ಲದೆ ನರಳುತ್ತಿವೆ. ಮಹಾತ್ವಾಕಾಂಕ್ಷೆಯಿAದ ನಡೆದುಕೊಳ್ಳಬೇಕಾದ ಅಧಿಕಾರಿಗಳು ಭ್ರಷ್ಟರೂ ದರಿದ್ರರೂ ಪೀಡಕರೂ ಆಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹಳ್ಳಿಗಾಡ ಮಕ್ಕಳನ್ನು ಕಾಪಾಡುವವರಾರು?
ಈ ಎಲ್ಲ ಕಾರಣಗಳಿಂದಾಗಿ ಕಳೆದ ಒಂಭತ್ತು ವರುಷಗಳಿಂದ ಎಲ್ಲ ರೀತಿಯಿಂದ ಬೇಡಿಕೊಂಡ ಮೇಲೂ ನಮ್ಮ ಇಲಾಖೆ ಅಧಿಕಾರಿಗಳು ನಮ್ಮ ಬಡವರ ಮಕ್ಕಳ ಕನಸಿನ ಶಾಲೆ ರೂಪಿಸಲು ಸಹಕಾರ ಸಹಾಯ ನೀಡದೇ ಹೋದದ್ದರಿಂದ ಈ ಕಾಲ್ನಡಿಗೆ ಜಾಥಾ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದೇನೆ.
ಯಾವ ಯಾವುದಕ್ಕೋ ಬಾಯಿ ತೆರೆಯುವ ಜನರು ಈ ಸಮಾನ ಶಿಕ್ಷಣದ ಕೂಗಿಗೆ ದನಿಗೂಡಿಸಲಿ.
ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಯಾಗಲಿ.
ಸಮಾಜವಾದದ ಸದ್ಯದ ಬಲವಾದ ಕೊಂಡಿ ಎಂದು ನಾವು ಭಾವಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಂದ ಸಮಾನ ಶಿಕ್ಷಣ ಸಾಧ್ಯವಾಗದೇ ಹೋದರೆ… ಇನ್ನಾರಿಂದ ಸಾಧ್ಯ?
ಬಡತನದ ಅಜ್ಞಾನದ ದೌರ್ಜನ್ಯದ ಕರಿನೆರಳಲ್ಲಿ ಅಕ್ಷರಕ್ಕಾಗಿ ಹಸಿದ ಮಕ್ಕಳನ್ನ ಈ ಕೂಪಗಳಿಂದ ಮೇಲೆತ್ತುವವರಾರು? ಅವರ ಭವಿಷ್ಯದ ಹೊಣೆ ಯಾರದ್ದು?
ನಮ್ಮ ನಿಡಗುಂದಿಯ ಅಂಬೇಡ್ಕರ್ ನಗರದ ಶಾಲಾ ಮಕ್ಕಳಿಗೆ ನಾಲ್ಕು ತರಗತಿ ಕೊಠಡಿಗಳ ಮಂಜೂರಾತಿ ಆಗುವವರೆಗೆ ನನ್ನ ಆಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ… ನಮ್ಮ ಶಾಲಾ ಮಕ್ಕಳಿಗೆ ತರಗತಿ ಕೋಣೆಗಳು ಸಿಗಲಿ, ಇಲ್ಲವೇ ನನ್ನ ಉಸಿರುನಿಲ್ಲಲಿ.
–ವೀರಣ್ಣ ಮಡಿವಾಳರ
ಪ್ರಧಾನ ಗುರುಗಳು
ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ ನಗರ ನಿಡಗುಂದಿ ತಾ: ರಾಯಬಾಗ ಶೈ.ಜಿ: ಚಿಕ್ಕೋಡಿ