ಚದುರಂಗದ ಕಾಲಾಳು ಮತ್ತು ನಮ್ಮ ಬದುಕು
ಚದುರಂಗದಾಟದಲ್ಲಿ ರಾಜ, ಮಂತ್ರಿ,ಒಂಟೆ,ಕುದುರೆ, ಆನೆ ಮತ್ತು ಸೈನಿಕ ಅಥವಾ ಕಾಲಾಳು ಎಂದು ಕರೆಯಲ್ಪಡುವ ಕಾಯಿಗಳು ಇರುತ್ತವೆ. ಚದುರಂಗದ ಕಪ್ಪು ಬಿಳಿ ಚೌಕಳಿ ನೆಲಹಾಸಿನ ಪ್ರತಿ ಸಾಲಿಗೂ ಎಂಟರಂತೆ ಒಟ್ಟು ಎಂಟು ಸಾಲುಗಳ 64 ಚೌಕಳಿಗಳಲ್ಲಿ ಒಂದೆಡೆ ಬಿಳಿ ಬಣ್ಣದ ಕಾಯಿಗಳು ಇದ್ದು ಮತ್ತೊಂದೆಡೆ ಕಪ್ಪು ಬಣ್ಣದ ಕಾಯಿಗಳನ್ನು ಜೋಡಿಸಲಾಗುತ್ತದೆ. ಹಿಂದಿನ ಸಾಲಿನ ಮಧ್ಯದಲ್ಲಿ ರಾಜ ಮತ್ತು ಮಂತ್ರಿ ಇದ್ದರೆ ಅವೆರಡರ ಎಡ ಬಲ ಬದಿಗಳಲ್ಲಿ ಒಂಟೆ ಕುದುರೆ ಮತ್ತು ಕೊನೆಯಲ್ಲಿ ಆನೆಯ ಕಾಯಿಗಳನ್ನು ಜೋಡಿಸಲಾಗುತ್ತದೆ. ಮುಂದಿನ ಸಾಲಿನಲ್ಲಿ ಸಾಲಾಗಿ ಎಂಟು ಜನ ಕಾಲಾಳುಗಳನ್ನು ಜೋಡಿಸಲಾಗಿರುತ್ತದೆ.
ಪ್ರತಿಯೊಂದು ಕಾಯಿಯನ್ನು ಕೂಡ ತನ್ನದೇ ಆದ ನಿಗದಿತ ರೀತಿಯಲ್ಲಿ ಚಲಾಯಿಸಬೇಕು. ಪರಸ್ಪರ ಎದುರಾಳಿಗಳು ಒಬ್ಬರ ನಂತರ ಒಬ್ಬರು ತಮ್ಮ ಕಾಯಿಗಳನ್ನು ಚಲಾಯಿಸುತ್ತಾ ಬೇರೊಬ್ಬರ ಕಾಯಿಗಳನ್ನು ಕಡಿದು ಹಾಕುತ್ತಾ ತಮ್ಮ ಕಾಯಿಗಳನ್ನು ಉಳಿಸಿಕೊಳ್ಳುತ್ತಾ ಸಾಗುತ್ತಾರೆ ಅಂತಿಮವಾಗಿ ಅವರ ಗುರಿ ರಾಜನ ಕಾಯಿಯನ್ನು ಉಳಿಸಿಕೊಳ್ಳುವುದು. ‘ಚಾಣಾಕ್ಷರ ಆಟ’ಎಂದೇ ಪರಿಗಣಿಸಲ್ಪಡುವ ಚದುರಂಗದಾಟ ಕೆಲವೊಮ್ಮೆ ವೈಪರೀತ್ಯಕ್ಕೂ ಎಡೆ ಮಾಡಿ ಕೊಡುತ್ತದೆ.
ಕಾಲಕಾಲಕ್ಕೆ ಚದುರಂಗದಾಟದ ನಿಯಮಗಳಲ್ಲಿ ಹತ್ತು ಹಲವು ಬದಲಾವಣೆಗಳಾಗಿದ್ದರೂ ಪ್ರತಿಯೊಂದು ಕಾಯಿಯ ನಡೆ ಮಾತ್ರ ಹಾಗೆಯೇ ಉಳಿದುಕೊಂಡು ಬಂದಿರುವುದು ಇಂದಿಗೂ ಜನರು ಸಮಯದ ಸದುಪಯೋಗ ಮಾಡಿಕೊಳ್ಳಲು ಮತಿಯನ್ನು ಚುರುಕುಗೊಳಿಸಲು ಚದುರಂಗದಾಟದ ಮೊರೆ ಹೋಗುತ್ತಾರೆ.
ಇಂತಹ ಚದುರಂಗದಾಟದಲ್ಲಿ ಕಾಲಾಳು ನಗಣ್ಯ ಎಂದು ನಮಗೆ ತೋರಬಹುದು. ಪ್ರತಿ ಬಾರಿಯೂ ಕೇವಲ ಒಂದು ಹೆಜ್ಜೆ ಮಾತ್ರ ಮುನ್ನಡೆಯುವ ಬೇರೊಂದು ಕಾಯಿಯನ್ನು ಕಡಿಯುವಾಗ ಎದುರು ಭಾಗದಲ್ಲಿ ಕವಲೊಡೆದು ಪಕ್ಕದ ಚೌಕಳಿಯ ಮುಂದಿನ ಚೌಕಕ್ಕೆ ಸಾಗುತ್ತದೆ. ನಡೆಯಲು ಸೀಮಿತವಾದ ಅವಕಾಶ ಇರುವ ಕಾಲಾಳಿನ ಮಹತ್ವ ನಮಗೆ ಗೊತ್ತಿಲ್ಲದಿರಬಹುದು… ಕಾಲಾಳಿನ ಮಹತ್ವವನ್ನು ಅದರ ಬಾಯಿಂದಲೇ ಕೇಳೋಣ ಬನ್ನಿ.
ಚದುರಂಗದಾಟದ ಎಲ್ಲ ಘಟಾನುಘಟಿ ಕಾಯಿಗಳ ಮುಂದೆ ನಾನೊಂದು ಪುಟ್ಟ ಕಾಲಾಳು ಮಾತ್ರ, ನಿಜ ಆದರೆ ನನಗೆ ನನ್ನದೇ ಆದ ಘನತೆ ಗೌರವ ಇದೆ. ವ್ಯಕ್ತಿತ್ವವೂ ಇದೆ ಎಂಬುದು ನಿಮಗೂ ಗೊತ್ತಿರಲಿ ಎಂದೇ ನನ್ನ ಕುರಿತು ನಿಮಗೆ ವಿಷಯಗಳನ್ನು ಪರಿಚಯಿಸಿ ಕೊಡುತ್ತೇನೆ.
“ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು” ಎಂಬಂತಹ ಘನತೆ ನನ್ನ ಪುಟ್ಟ ದೇಹಕ್ಕೆ ಇದೆ. ನಾನು ರಾಜನಂತೆ ಕಾಲನ್ನು ಸರಿಸಿ ನಡೆಯುವುದಿಲ್ಲ ಮತ್ತು ಮಂತ್ರಿಯಂತೆ ಛಂಗನೆ ಹಾರುವುದಿಲ್ಲ. ನಾನು ಯಾರನ್ನೂ ಆಳುವುದಿಲ್ಲ ಮತ್ತು ಯಾರಿಗೂ ಆಜ್ಞೆಗಳನ್ನು ನೀಡುವುದಿಲ್ಲ. ನಾನು ಸದಾ ಒಂದೊಂದೇ ಹೆಜ್ಜೆಗಳನ್ನು ಮುಂದಿಟ್ಟು ನಡೆಯುತ್ತೇನೆ…. ನನ್ನದು ಯಾವಾಗಲೂ ಮುಂದಿನ ದಾರಿ ಹಿಮ್ಮುರಿ ಪಯಣವಲ್ಲ…. ಆಸೆ ಆಮಿಷಗಳನ್ನು ಕಟ್ಟಿಟ್ಟು ಕರ್ತವ್ಯ ಪರತೆಯನ್ನು ಆಯ್ಕೆ ಮಾಡಿಕೊಂಡಿರುವುದರ ಸಂಕೇತ ನಾನು.
ನಾನೆಂದೂ ಹಿಮ್ಮುಖವಾಗಿ ನಡೆಯುವುದಿಲ್ಲ… ಅಂತೆಯೇ ನಾನು ನನ್ನ ಭೂತದೆಡೆ ತಿರುಗಿ ನೋಡುವುದಿಲ್ಲ. ನನ್ನ ಸ್ಥಾನಕ್ಕೆ ವಿರುದ್ಧವಾಗಿ ನಾನು ಏನನ್ನೂ ಮಾಡುವುದಿಲ್ಲ. ತುಂಬು ಘನತೆಯಿಂದ ನನ್ನ ಕರ್ತವ್ಯವನ್ನು ನಾನು ಒಪ್ಪಿಕೊಂಡು ನಿರ್ವಹಿಸುತ್ತೇನೆ
ಇದು ನನಗೆ ನೀಡಲಾಗಿರುವ ಕರ್ತವ್ಯಕ್ಕೆ ನಾನು ಬದ್ದ ಎಂಬುದನ್ನು ತೋರಿಸುತ್ತದೆ. ನನ್ನಲ್ಲಿರುವ ಹುಮ್ಮಸ್ಸನ್ನು ಯಾರಿಂದಲೂ ಅಲುಗಿಸಲಾಗದು. ನನ್ನ ಪ್ರತಿಯೊಂದು ಮುಂದಿನ ಹೆಜ್ಜೆಯು ನನ್ನ ಧೈರ್ಯ, ಸಾಹಸಗಳ ಪ್ರತೀಕವಾಗಿದೆ. ಅಪಾಯಕ್ಕೆ ನಾನೆಂದೂ ಹಿಂದಡಿ ಇಡುವುದಿಲ್ಲ ಎಂಬುದರ ಸಂಕೇತವಾಗಿದೆ.
ನನ್ನ ಶತ್ರುಗಳನ್ನು ನಾನೆಂದೂ ವಿರೋಧಿಸುವುದಿಲ್ಲ ಆದರೆ ತ್ಯಾಗ ಮಾಡುವ ಭಯ ಕೂಡ ನನಗಿಲ್ಲ
ನನ್ನನ್ನು ಆಹುತಿ ಪಡೆಯಬಹುದು, ರಂಗದಿಂದ ಮುರಿದು ಹೊರಗಟ್ಟಬಹುದು ಎಂಬ ಭಯ ನನಗಿಲ್ಲ ಎಂದಲ್ಲವಾದರೂ ಕೂಡ ನಾನು ನಿಶ್ಚಲವಾಗಿ ನನ್ನ ಕೆಲಸದಲ್ಲಿ ಮುಂದುವರೆಯುತ್ತೇನೆ, ಯಾಕೆಂದರೆ ಹಾಗೆ ಮುಂದುವರಿಯುವ ಮೂಲಕ ನಾನು ನನ್ನ ಅಂತಿಮ ರೇಖೆಯನ್ನು ಮುಟ್ಟಿದರೆ ನನ್ನಲ್ಲಿ ಬಲು ದೊಡ್ಡ ಬದಲಾವಣೆಯನ್ನು ನೀವು ಕಾಣಬಹುದು. ಹಾಗೆ ಅಂತಿಮ ಗುರಿಯನ್ನು ಮುಟ್ಟುವಲ್ಲಿ ನನಗೆ ಯಾವುದೇ ರೀತಿಯ ದುರಾಸೆ ಇಲ್ಲವಾದರೂ ಗೌರವವಿದೆ, ಕಾರಣ ಹಾಗೆ ನೇರವಾಗಿ ಯುದ್ಧ ರಂಗದಲ್ಲಿ ಮುನ್ನಡೆಯುವ ಮೂಲಕ ನಾನು ಜೀವನದ ಸಾರವನ್ನು ಹೀರುತ್ತಾ ಮತ್ತೆ ಉದಯಿಸುವ ಸೂರ್ಯನ ರೀತಿ ಮರಳುವ ಹಕ್ಕನ್ನು ಹೊಂದಿರುತ್ತೇನೆ. ಜೀವನದಲ್ಲಿ ನಿಜವಾದ ಮುಂದುವರೆಯುವಿಕೆಯನ್ನು ಎಂದಿಗೂ ಹೇರುವಿಕೆಯ ಮೂಲಕ ಸಾಧಿಸಲಾಗದು ಬದಲಾಗಿ ನಿರಂತರ ಪ್ರಯತ್ನ ಮತ್ತು ಮುಂದುವರಿಯುವಿಕೆಯ ಮೂಲಕ ಗಳಿಸಬಹುದು ಎಂಬುದನ್ನು ನನ್ನ ಬದುಕಿನ ಮೂಲಕ ನೀವು ಅರಿಯಬಹುದು.
ಈ ಜಗತ್ತಿನಲ್ಲಿ ಪ್ರತಿಯೊಂದು ಪುಟ್ಟ ಕ್ಷುದ್ರ ಜೀವಿಗೂ ಒಂದು ಬದುಕಿದೆ. ಆ ಬದುಕನ್ನು ಹೇಗೆ ನಡೆಸುತ್ತೇವೆ ಎಂಬುದು ನಮಗೆ ಬಿಟ್ಟದ್ದು. ಅಂತಿಮವಾಗಿ ನಾನು ನಿಮಗೆ ಹೇಳುವುದೇನೆಂದರೆ ನೀವೆಲ್ಲರೂ ಬಂದಿರುವುದು ಒಂದೇ ಮೂಲದಿಂದ. ನಿಮ್ಮೆಲ್ಲರನ್ನು ಈ ಚದುರಂಗದಾಟದ ದಾಳಗಳಾಗಿ ಆ ದೇವರು ಆಡಿಸುತ್ತಾನೆ ಆಟ ಮುಗಿದ ಮೇಲೆ ಎಲ್ಲ ಕಾಯಿಗಳು ಒಂದೇ ಡಬ್ಬಿಯಲ್ಲಿ ಸೇರುವಂತೆ ನೀವುಗಳು ಕೂಡ
ಆ ಭಗವಂತನ ಸನ್ನಿಧಾನವನ್ನು ಸೇರುತ್ತೀರಿ. ಅಲ್ಲಿ ರಾಜನಾಗಿರಲಿ ಪ್ರಜೆಯಾಗಿರಲಿ ಎಲ್ಲರೂ ಒಂದೇ.
ಇರುವಷ್ಟು ಕಾಲವು ಎಲ್ಲರೊಂದಿಗೆ ಪ್ರೀತಿ,ವಿಶ್ವಾಸ, ಶಾಂತಿ, ನೆಮ್ಮದಿ ಮತ್ತು ತಾಳ್ಮೆಯಿಂದ ಸಾಮರಸ್ಯದ ಬದುಕನ್ನು ಸಾಗಿಸುವ ಮೂಲಕ ನಿಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಿ… ಇಂತಿ ನಿಮ್ಮ ಚದುರಂಗದ ಕಾಯಿ.
ಎಂದು ಬದುಕಿನ ಬಹು ದೊಡ್ಡ ಪಾಠವನ್ನು ಚದುರಂಗದ ಕಾಯಿ ನಮಗೆ ತನ್ನ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳುವ ಮೂಲಕ ಹೇಳುತ್ತದೆ. ಖಂಡಿತವಾಗಿಯೂ ಚದುರಂಗದ ಕಾಯಿಯ ಈ ಮಾತುಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕನ್ನು ನಡೆಸೋಣ…. ಏನಂತೀರಾ?
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್