ಶಂಕ್ರಣ್ಣ ಮುನವಳ್ಳಿಯವರು ಇಂದು 75ನೇ ಹುಟ್ಟು ಹಬ್ಬ
ಮೂಲತಃ ಗದಗಿನವರಾದ ಶಂಕ್ರಣ್ಣ ಮುನವಳ್ಳಿಯವರು ಇಂದು 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಗದಗಿನ ಪ್ರತಿಷ್ಠಿತ ಮುನವಳ್ಳಿ ಮನೆತನದ ಕುಡಿಯಾಗಿ ಇಂದು ಉತ್ತರ ಕರ್ನಾಟಕದ ಮನೆಮಾತಾಗಿರುವ ಶಂಕರಣ್ಣ ಮುನವಳ್ಳಿಯವರ ಬದುಕಿನ ಯಶೋಗಾಥೆ ಕಿರಿಯರಿಗೆ ಆದರ್ಶವೂ ಹೌದು.
ಇವರು ಪದವೀಧರರು ಹೌದು ಅಲ್ಲವೋ ಗೊತ್ತಿಲ್ಲ ಆದರೆ ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷರಾಗಿ ಲಕ್ಷಾಂತರ ಯುವಕರು ಪದವೀಧರರಾಗಿ ಹೊರಬರುವಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಗದುಗಿನ ಪ್ರತಿಷ್ಠಿತ ವ್ಯಾಪಾರಿ ಹಾಗೂ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಶಂಕ್ರಣ್ಣ. ತಮ್ಮ ಮನೆತನದ ವ್ಯವಹಾರ ವ್ಯಾಪಾರ ಸಂಸ್ಥೆಗಳ ಮೂಲಕ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದವರು ಹಿಂತಿರುಗಿ ನೋಡಲೇ ಇಲ್ಲ ದಿನೇ ದಿನೇ ವ್ಯವಹಾರ ಚತುರನಾಗಿ ಬೃಹತ್ಕಾರವಾಗಿ ಬೆಳೆದು ಬಂದವರು.
ಇವರ ಕಿರಿಯ ಸಹೋದರ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಇಂದಿಗೂ ನೆನಪಿಸಿಕೊಳ್ಳುವ ಒಂದು ವಿಷಯವೆಂದರೆ ನಮ್ಮ ಮನೆತನ ಮುಂದೆ ಬರಲು ನಮ್ಮಣ್ಣ ಶಂಕ್ರಣ್ಣನ ವ್ಯವಹಾರ ಚತುರತೆ ಕಾರಣ.ಭತ್ತ ಖರೀದಿಗಾಗಿ ಗಂಗಾವತಿಗೆ ಎರಡೆರಡು ದಿವಸ ಬರುತ್ತಿದ್ದೆವು ಬಂದಾಗೆಲ್ಲ ಎರಡು ದಿನದ ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದೆವು.ಸ್ನಾನ, ಪೂಜೆಯಾದಮೇಲೆಯೇ ಅವರ ಪ್ರಸಾದವಾಗುತ್ತಿತ್ತು. ಇಂದಿಗೂ ಆ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಎಲ್ಲೆಂದರಲ್ಲಿ ತಿನ್ನುವುದು,ಉಣ್ಣುವುದು ಅವರಿಗೆ ಹಿಡಿಸುವುದಿಲ್ಲ.
ವ್ಯವಹಾರ ವಿಸ್ತರಣೆಯ ಸಲುವಾಗಿ ಹುಬ್ಬಳ್ಳಿಯ ಪ್ರತಿಷ್ಠಿತ ವ್ಯಾಪಾರಿಗಳಾಗಿದ್ದ ಗಂಗಣ್ಣ ಬತ್ಲಿಯವರ ಜೊತೆಗೂಡಿ ಕಾಟನ್ ಪೇಟೆಯಲ್ಲಿ “ಬತ್ಲಿ ಅಂಡ್ ಮುನವಳ್ಳಿ” ಟ್ರೇಡಿಂಗ್ ಕಂಪನಿಯನ್ನು ಸ್ಥಾಪಿಸಿ ವ್ಯವಹಾರದಲ್ಲಿ ಮತ್ತಷ್ಟು ಮತ್ತಷ್ಟು ಮೇಲಕ್ಕೆ ಎರುತ್ತಲೇ ಹೋದವರು ಹಿಂತಿರುಗಿ ನೋಡೇ ಇಲ್ಲ.
80 ರ ದಶಕದ ಪೂರ್ವಾರ್ಧದ ವೇಳೆಗೆ ಶಂಕ್ರಣ್ಣ ಅವಿಭಜಿತ ಧಾರವಾಡ ಜಿಲ್ಲೆಯ ವಾಣಿಜ್ಯ-ವ್ಯವಹಾರ,ಸಾಮಾಜಿಕ, ಧಾರ್ಮಿಕ ಮತ್ತುಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗಿ ರೂಪಗೊಂಡಿದ್ದರು.ಉತ್ತರ ಕರ್ನಾಟಕದ ಬಹು ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಸದಸ್ಯರಾಗಿ,ಪ್ರಭಾಕರ ಕೋರೆಯವರ ನಂಬಿಕೆಗೆ ಪಾತ್ರರಾಗುತ್ತಾ ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷರಾಗಿ ತಮ್ಮ ಕ್ರಿಯಾಶೀಲತೆಯಿಂದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಂಕಣ ಭದ್ಧರಾಗಿ ದುಡಿಯುತ್ತಾ ಸಂಸ್ಥೆಯ ಹಿರಿಮೆ-ಗರಿಮೆಗಳನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುವಲ್ಲಿ ಇವರ ಶ್ರಮವನ್ನು ಕೆಎಲ್ಇ ಸಂಸ್ಥೆ ಇಂದಿಗೂ ಸ್ಮರಿಸುತ್ತದೆ.
ಶ್ರೀ ಪ್ರಭಾಕರ ಕೋರೆಯವರೇ ಹೇಳುವಂತೆ ನಾನು ಕೆಎಲ್ಇ ಸಂಸ್ಥೆಯ ಅಧ್ಯಕ್ಷನಾಗಿ, ರಾಜ್ಯಸಭಾ ಸದಸ್ಯನಾಗಿ ಹಾಗೂ ವಿಧಾನ ಪರಿಷತ್ ಸದಸ್ಯನಾಗಿ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತಿದ್ದಾಗ ಕೆಎಲ್ಇ ಸಂಸ್ಥೆಯ ಬಹುಪಾಲು ಜವಾಬ್ದಾರಿಯನ್ನು ನಿರ್ವಹಿಸಲು ನನ್ನ ಜೊತೆ ಹೆಗಲಿಗೆ ಹೆಗಲು ಕೊಟ್ಟು ಶಂಕ್ರಣ್ಣ ದುಡಿದಿದ್ದಾರೆ ಎಂದು ಸ್ಮರಿಸುವುದನ್ನು ನೋಡಿದರೆ, ಇವರ ವ್ಯಕ್ತಿತ್ವ ಹಾಗೂ ಕ್ರಿಯಾಶೀಲತೆಯ ಬಗ್ಗೆ ಹೆಮ್ಮೆಯೇನಿಸುತ್ತದೆ.
ಕೆಎಲ್ಇ ಸಂಸ್ಥೆ ಶಂಕ್ರಣ್ಣನವರನ್ನು ಕೈ ಹಿಡಿದಷ್ಟು ಧಾರವಾಡ ಜಿಲ್ಲೆಯ ರಾಜಕಾರಣ ಇವರನ್ನು ಕೈ ಹಿಡಿಯಲಿಲ್ಲವೆನಿಸುತ್ತದೆ. ಧಾರವಾಡ ಲೋಕಸಭಾ ಕ್ಷೇತ್ರ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು ಸಹ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಬಹುಶಃ ಧಾರವಾಡ ಜಿಲ್ಲೆಯ ಜನತೆ ನೀವು ರಾಜಕಾರಣಕ್ಕೆ ಬಂದರೆ ಕೆಎಲ್ಇ ಸಂಸ್ಥೆಯ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಭಾವಿಸಿ ಯಶಸ್ಸನ್ನು ನೀಡಿರಲಿಕ್ಕಿಲ್ಲವೆನಿಸುತ್ತದೆ. ಆದರೆ ತಮ್ಮ ರಾಜಕಾರಣದ ಆಸೆ ಆಕಾಂಕ್ಷಿಗಳನ್ನು ತಮ್ಮ ಸಹೋದರ ಪರಣ್ಣ ಮುನವಳ್ಳಿಯವರನ್ನು ಎರಡು ಬಾರಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುವಂತೆ ನೋಡಿಕೊಂಡು ತಮ್ಮ ರಾಜಕಾರಣದ ಬಯಕೆಯನ್ನು ಈಡೇರಿಸಿಕೊಂಡಿರಬೇಕೆನಿಸುತ್ತದೆ.
ಶಂಕ್ರಣ್ಣನವರು ಕೆಎಲ್ಇ ಸಂಸ್ಥೆಯ ಹಿತಾಸಕ್ತಿಯ ಪ್ರಶ್ನೆ ಬಂದಾಗ ಕಠಿಣ ಹಾಗೂ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದೇ ಕಠಿಣ ಹಾಗೂ ದೃಢ ನಿರ್ಧಾರಗಳನ್ನು ಸಮಾಜದ ವಿಷಯಕ್ಕೆ ಬಂದಾಗ ತೆಗೆದುಕೊಳ್ಳುವುದಿಲ್ಲ ಎನ್ನುವುದು ನಮ್ಮ ಸಮಾಜದ ಬಹುಪಾಲು ಜನರ ಅನಿಸಿಕೆ. ಶಂಕ್ರಣ್ಣನವರು ಉತ್ತರ ಕರ್ನಾಟಕದಲ್ಲಿ ಇಂದು ಜನಪ್ರಿಯ ವ್ಯಕ್ತಿ.ಇವರಿಂದ ಉಪಕೃತರಾದ ಜನ ಇವರನ್ನು ಆಕಾಶದೆತ್ತರಕ್ಕೆ ಏರಿಸಿ ಹೊಗಳುತ್ತಾರೆ. ಇವರಿಂದ ಸಹಾಯ ಪಡೆಯಲು ವಿಫಲರಾದವರು ಹೀಯಾಳಿಸುವುದು ಉಂಟು. ನನ್ನಿಂದ ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡಲು ಮನಸ್ಸಿದ್ದರೂ ಸಮಯ,ಸಂದರ್ಭ, ಸನ್ನಿವೇಶಗಳ ಕಾರಣದಿಂದ ಅಸಹಾಯಕನಾಗಿರುತ್ತೇನೆ. ಹೀಗಾಗಿ ಅವರು ನನ್ನನ್ನು ನಿಂದಿಸುತ್ತಾರೆ.ಅದು ಮಾನವ ಸಹಜ ಪ್ರಕೃತಿಯ ಗುಣ ಅದಕ್ಕೇನು ಮಾಡಲಾಗದು ಎನ್ನುವುದು ಇವರ ಅಭಿಪ್ರಾಯ.
75 ರ ಈ ವಯಸ್ಸಿನಲ್ಲಿಯೂ ಸಂಸ್ಥೆಯ ಕೆಲಸ ಕಾರ್ಯಗಳಿಗಾಗಿ ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಬೆಳಗಾವಿ, ನವದೆಹಲಿ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುವ ಇವರ ಹುಮ್ಮಸ್ಸನ್ನು ನೋಡಿದರೆ ಕಿರಿಯರು ನಾಚಬೇಕು. ಶಂಕ್ರಣ್ಣನವರ ದೇಹಕ್ಕೆ 75 ವರ್ಷ ವಯಸ್ಸಾಗಿದೆ,ಆದರೆ ಅವರ ಕ್ರಿಯಾಶೀಲ ಮನಸ್ಸಿಗೆ ಇನ್ನು ಹದಿನೆಂಟರ ತಾರುಣ್ಯ. ಇತ್ತೀಚಿಗೆ ಇವರ ಚಿರಂಜೀವಿ ಮಂಜುನಾಥ ಮುನವಳ್ಳಿಯವರು ಇವರ ಕೆಲಸ ಕಾರ್ಯಗಳಲ್ಲಿ ಸಾಥಿಯಾಗಿ ಕಾರ್ಯಬಾಹುಳ್ಯದ ಒತ್ತಡವನ್ನು ಹಂಚಿಕೊಳ್ಳುತ್ತಾ ತಂದೆಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ.
ಹುಬ್ಬಳ್ಳಿಯ ಪ್ರತಿಷ್ಠಿತ ಗುರುಸಿದ್ದೇಶ್ವರ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾಗಿ ಕಾಯಕಲ್ಪ ನೀಡಿ ಮುನ್ನಡೆಸಿದ್ದಾರೆ. ಹುಬ್ಬಳ್ಳಿಯ ಪ್ರತಿಷ್ಠಿತ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾಗಿ ಸ್ಮರಣೀಯ ಸೇವೆಯನ್ನು ಸಲ್ಲಿಸಿದವರಲ್ಲೊಬ್ಬರಾಗಿದ್ದಾರೆ. ಉತ್ತರ ಕರ್ನಾಟಕದ ಪ್ರತಿಷ್ಠಿತ ಮೂರುಸಾವಿರ ಮಠದ ಟ್ರಸ್ಟಿಗಳಾಗಿ ಶ್ರೀಮಠದ ಹಿರಿಮೆ-ಗರಿಮೆ,ಘನತೆ-ಗೌರವ ಹಾಗೂ ಶ್ರೀಮಠದ ಪರಂಪರೆಯನ್ನು ರಕ್ಷಿಸಿಕೊಂಡು ಬರುವಲ್ಲಿ ಇಂದಿಗೂ ಕಾರ್ಯನಿರತರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ವೈಯಕ್ತಿಕವಾಗಿ ನಾನು ಶಂಕ್ರಣ್ಣನವರಿಂದ ಉಪಕೃತನಾದವನಲ್ಲ.ಕೆಲವು ವರ್ಷಗಳ ಹಿಂದೆ ನನ್ನ ಮಗಳಿಗೆ ಎಂಸಿಎ ಸೀಟ್ ಕೇಳಿಕೊಂಡು ಹೋದಾಗ ಅವರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೂ ಅವರ ಬಗ್ಗೆ ನನಗೆ ಎಳ್ಳಷ್ಟು ಅಸಮಾಧಾನವಿಲ್ಲ. ಸಾವಿರಾರು ಜನರಿಗೆ ಅವರಿಂದ ಸಹಾಯವಾಗುತ್ತಿದೆಯಲ್ಲ ಎನ್ನುವದೊಂದು ನನಗೆ ಸಮಾಧಾನ.ಈ ಬದುಕೆ ಹಾಗೆ ಸಹಾಯ-ಸಹಕಾರ ಕೇಳಿಕೊಂಡು ಬಂದವರಿಗೆಲ್ಲ ಸಹಾಯ ಮಾಡುವುದು ಯಾರಿಗೂ ಸಾಧ್ಯವಾಗುವುದಿಲ್ಲ ಎನ್ನುವುದು ವಾಸ್ತವ. ಒಂದು ವೇಳೆ ಆ ಶಕ್ತಿ ಮನುಷ್ಯರಿಗಿದ್ದಿದ್ದರೆ ದೇವರೇ ಆಗುತ್ತಿದ್ದನಲ್ಲವೇ?
ಶಂಕ್ರಣ್ಣ ನಮ್ಮ ಲಿಂಗಾಯತ ಸಮಾಜದ ಹೆಮ್ಮೆ,ಇವರೆಂದೂ ಜಾತಿವಾದಿಗಳಾಗಲಿಲ್ಲ.ಒಬ್ಬ ಲಿಂಗಾಯತ ಜಾತ್ಯಾತೀತನಾಗಿ ಹೇಗೆ ಬದುಕಬಹುದು ಎನ್ನುವುದಕ್ಕೆ ಇವರೊಂದು ಉದಾಹರಣೆ.
75 ರ ಹೊಸ್ತಿಲಲ್ಲಿರುವ ಶಂಕ್ರಣ್ಣ ಮುನವಳ್ಳಿಯವರಿಗೆ ಮಹಾತ್ಮ ಬಸವೇಶ್ವರ ಆಯುಷ್ಯ, ಆರೋಗ್ಯ, ಶಕ್ತಿ- ಸಾಮರ್ಥ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.