ಮುಂಡರಗಿಯಲ್ಲಿ ಶರಣ ಚಿಂತನಮಾಲೆ 18
ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಬಹಳಷ್ಟು ಬಾರಿ ನಾವು ಸಾಹಿತ್ಯ, ಕಲೆಗಳಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಜಗತ್ತಿನಲ್ಲಿ ಅತಿ ಪ್ರಾಚೀನವಾದ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ. ನಿವೃತ್ತ ಯೋಧನಾಗಿರುವ ನಾನು ಕನ್ನಡ ಸಾಹಿತ್ಯದ ಅಭಿಮಾನಿಯಾಗಿದ್ದು ಈ ಕಾರ್ಯಕ್ರಮಕ್ಕೆ ನನ್ನನ್ನು ಉದ್ಘಾಟಕನಾಗಿ ಕರೆಸಿ ನನ್ನ ಸಾಹಿತ್ಯದ ಅಭಿರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ತುಂಬು ಹೃದಯದ ಧನ್ಯವಾದವನ್ನು ಎಂದು ನಿವೃತ್ತ ಯೋಧ ವೆಂಕಟೇಶ್ ಗುಗ್ಗರಿ ಅವರುಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಡರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ಇವುಗಳ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಶರಣ ಚಿಂತನ ಮಾಲೆ 18ನೇ ಕಾರ್ಯಕ್ರಮವನ್ನು ಉದ್ಘಾಟಿಕೆ ಅವರು ಮಾತನಾಡಿದರು.
ಉಪೇಕ್ಷಿತ ವಚನಕಾರರ ಕುರಿತು ಕಾರ್ಯಕ್ರಮವನ್ನು ನಡೆಸುತ್ತಿರುವ ಮೂರು ಸಂಘಟನೆಗಳ ಕಾರ್ಯವು ಸ್ತುತ್ಯಾರ್ಹವಾದದ್ದು ಹೀಗೆಯೇ ಉಪನ್ಯಾಸ ಮಾಲಿಕೆಯು ನಿರಂತರವಾಗಿ ನಡೆಯಲಿ, ಈ ಕಾರ್ಯಕ್ರಮಕ್ಕೆ ಸದಾ ತಮ್ಮ ಸಹಾಯ ಮತ್ತು ಸಹಕಾರ ಇದ್ದೇ ಇರುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಮುಂಡರಗಿ ಪ್ರೌಢಶಾಲಾ ವಿಭಾಗದಲ್ಲಿ ಬಿ ಆರ್ ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಹನುಮರೆಡ್ಡಿ ಇಟಗಿ ಅವರು ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ತಂದೆ ಕಾಮಯ್ಯ ಮತ್ತು ತಾಯಿ ಶಂಕರಿಯವರ ಪುಣ್ಯ ಗರ್ಭ ಸಂಜಾತನಾದ ಜೇಡರ ದಾಸಿಮಯ್ಯ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮುದೇನೂರು ಗ್ರಾಮದಲ್ಲಿ ಜನಿಸಿ, ವಿದ್ಯಾರ್ಥಿಯಾಗಿ ಶ್ರೀಶೈಲದಲ್ಲಿ ವಾಸವಾಗಿದ್ದ ಚಂದ್ರಗುಂಡ ಶಿವಾಚಾರ್ಯರ ಬಳಿ ಶಿಷ್ಯರಾಗಿ ವಿದ್ಯೆ ಕಲಿತು ತಮ್ಮೂರಿಗೆ ಮರಳಿ ಕುಟುಂಬದ ವೃತ್ತಿಯಾದ ನೇಯ್ಗೆಯ ಕೆಲಸವನ್ನು ಮಾಡುತ್ತಾ ಮುಂದೆ ದುಗ್ಗಳೆಯನ್ನು ಮದುವೆಯಾಗಿ ಅನ್ಯೋನ್ಯವಾಗಿ ಸಂಸಾರ ಸಾಗಿಸುತ್ತಾರೆ.
ಪರಮ ಸಾತ್ವಿಕ ದಂಪತಿಗಳಾದ ದೇವರ ದಾಸಿಮಯ್ಯನವರ ನಿರ್ಮಲ ಭಕ್ತಿ ಅನನ್ಯ ದಾಂಪತ್ಯ ಜೀವನ, ಕಾಯಕ,ದಾಸೋಹ ಗಳಲ್ಲಿ ತನ್ನ ಬದುಕನ್ನು ಕಳೆದು 150ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಕುರಿತು ಸವಿಸ್ತಾರವಾಗಿ ಹೇಳಿದರು.
ಇನ್ನು ದೇವರ ದಾಸಿಮಯ್ಯ ಮತ್ತು ಆತನ ಪತ್ನಿ ದುಗ್ಗಳೆಯರ ಅನನ್ಯ ದಾಂಪತ್ಯ ಜೀವನವನ್ನು ಕುರಿತು ಹಲವಾರು ದೃಷ್ಟಾಂತಗಳನ್ನು ನೀಡಿ “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂಬ ವಚನವನ್ನು ರಚಿಸಿದ ದೇವರ ದಾಸಿಮಯ್ಯನವರ ದಾಂಪತ್ಯ ಬದುಕು ಕೂಡ ಹಾಗೆಯೇ ಇತ್ತು ಎಂದು ಅವರು ಬಣ್ಣಿಸಿದರು.
ದೇವರ ದಾಸಿಮಯ್ಯನವರ ಸಮಗ್ರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟ ಇಟಗಿಯವರ ಉಪನ್ಯಾಸ ಅತ್ಯಂತ ಆಪ್ತವಾಗಿತ್ತು,, ಮನಸ್ಸಿಗೆ ತಟ್ಟುವಂತಹ ಹತ್ತು ಹಲವು ಘಟನೆಗಳು ದೇವರ ದಾಸಿಮಯ್ಯನವರ ಬದುಕನ್ನು ಕಣ್ಣ ಮುಂದೆ ತಂದು ನಿಲ್ಲಿಸಿದಂತೆ ಭಾಸವಾಯಿತು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ಹೇಳಿದರು.
ನಮ್ಮ ದೇಶವನ್ನು ಕಾಯಲು ಯೋಧರ ಅವಶ್ಯಕತೆ ಇರುವಂತೆಯೇ ನಮ್ಮ ಮನಸ್ಸಿನ ತಳಮಳಗಳನ್ನು ತೊಡೆಯಲು ಶರಣರ ವಚನಗಳು, ಅವರ ಜೀವನ ಶೈಲಿ ನಮಗೆ ಮಾರ್ಗದರ್ಶಿಯಾಗಬೇಕು, ದಾರಿದೀಪವಾಗಬೇಕು ಎಂದು ಅವರು ಹೇಳಿದರು.
ತಮ್ಮ ಬದುಕು ಯಾವ ನಿಮಿಷದಲ್ಲಿ ಹೇಗೆ ಇರುತ್ತದೆಯೋ ಎಂಬ ಭಯದ ಕಾರ್ಮೋಡವನ್ನು ಸದಾ ತಲೆಯ ಮೇಲೆ ಹೊತ್ತು ನಿಲ್ಲುವ ಯೋಧರ ಕುರಿತು ಅಭಿಮಾನ ಮತ್ತು ಹೆಮ್ಮೆ ಇರಬೇಕು,ಅವರ ಕುಟುಂಬದ ಸದಸ್ಯರ ಕುರಿತು ಕೂಡ ಹೆಮ್ಮೆ ಪ್ರೀತಿ-ವಿಶ್ವಾಸ ಮತ್ತು ಸಹಾನುಭೂತಿಗಳು ಸದಾ ನೆಲೆಯಾಗಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಮಂಜುನಾಥ್ ಮುಧೋಳ್ ಅವರು ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತು ವಿವರ ನೀಡಿದರು. ಪ್ರಸ್ತುತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಸುತ್ತಿರುವ ಶರಣ ಚಿಂತನಮಾಲೆಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಲು ಎಲ್ಲರ ಸಹಾಯ, ಸಹಕಾರಗಳು ಹೀಗೆಯೇ ಇರಲಿ ಎಂದು ಆಶಿಸಿದರು.
ಪ್ರಾರಂಭದಲ್ಲಿ ಹುಲಿಗೆಮ್ಮ ಭಜಂತ್ರಿ ಅವರು ಸುಶ್ರಾವ್ಯವಾಗಿ ಪ್ರಾರ್ಥನೆಗೈದರು ಎನ್ ಎನ್ ಕಲಕೇರಿ ಗುರುಗಳು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೀಣಾ ಪಾಟೀಲ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ನಿವೃತ್ತ ಉಪನ್ಯಾಸಕರಾದ ಆರ್ ಎಲ್ ಪೊಲೀಸ್ ಪಾಟೀಲ್, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂಜಿ ಗಚ್ಚಣ್ಣವರ, ಶಂಕರ್ ಕುಕನೂರ್, ಎನ್ ಎನ್ ಕಲಕೇರಿ, ಎಂ ಎಸ್ ಶೀರನಹಳ್ಳಿ, ಮಹೇಶ್ವರ ಮೇಟಿ, ಆರ್ ವೈ ಪಾಟೀಲ್, ಎಂ ಐ ಮುಲ್ಲಾ,, ಮಂಜುನಾಥ್ ಮುಧೋಳ್, ಸಂತೋಷ್ ಅಂಗಡಿ, ಎನ್ ಎಸ್ ಅಲಿಪುರ್, ಅಕ್ಕಮಹಾದೇವಿ ಕೊಟ್ಟೂರ್ ಶೆಟ್ಟರ್, ಲತಾ ಕಡ್ಡಿ, ಮಧುಮತಿ ಇಳಕಲ್ ಮುಂತಾದವರು ಹಾಜರಿದ್ದರು.