ಮಕ್ಕಳ ಪ್ರೀತಿಗೆ ಬೆಲೆಕಟ್ಟಲಾಗದು
ನೀವು ನಿಮ್ಮ ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ನೀಡಬಹುದು, ಆದರೆ ನಿಮ್ಮ ಆಲೋಚನೆಗಳನ್ನಲ್ಲ’- ಎನ್ನುತ್ತಾನೆ ಗಿಬ್ರಾನ್.
ಇಂದು ನಮ್ಮ ಶಾಲೆಯಲ್ಲಿ ನಡೆದ ಘಟನೆಯೊಂದನ್ನ ಪಾಲಕರು, ಕೆಲವು ತಾಯಂದಿರು ನನಗೆ ಕರೆ ಮಾಡಿ ಹನಿಗಣ್ಣಾಗುತ್ತಿದ್ದಾರೆ. ನನ್ನ ಹೃದಯವನ್ನ ತೋಯುವಂತೆ ಮಾಡುತ್ತಿದ್ದಾರೆ.
ನಿಮಗೆಲ್ಲ ಗೊತ್ತಿರುವಂತೆ ಈ ಬಾರಿ ನಮಗೆ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆ ಪ್ರಶಸ್ತಿ ಬಂದಿತ್ತು. ಮತ್ತು ನಮ್ಮ ತಾಲ್ಲೂಕಾ ಆಡಳಿತ ಶಾಲೆಗಳಿಗೆ ಆಟದ ಸಾಮಗ್ರಿಗಾಗಿ ಹಣ ನೀಡಿತ್ತು. ನಮ್ಮ ಶಾಲೆಗೂ ಒಟ್ಟು ಏಳು ಸಾವಿರ ಅನುದಾನ ಸಿಕ್ಕಿತ್ತು.
ಈ ಎಲ್ಲ ಅನುದಾನದಲ್ಲಿ ಸುಮಾರು ಮೂವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಹಲವಾರು ಆಟದ ಸಾಮಗ್ರಿ ತಂದಿದ್ದೆವು. ಅವುಗಳಲ್ಲಿ ಬಹುತೇಕವನ್ನ ನಾವು ಓಪನ್ ಕೂಡ ಮಾಡಿರಲಿಲ್ಲ.
ಇಂದು ನಮ್ಮ ಶಾಲೆಗೆ ನಿಯೋಜಿಸಲಾಗಿರುವ ಶಿಕ್ಷಕರೊಬ್ಬರು ಮಕ್ಕಳಿಗೆ ಆ ಆಟದ ಸಾಮಾನುಗಳನ್ನ ಆಡಲು ಕೊಡಲು ಹೋಗಿದ್ದಾರೆ.
ತಮ್ಮತಮ್ಮಲ್ಲಿಯೇ ಮಾತಾಡಿಕೊಂಡು ಎಲ್ಲ ಮಕ್ಕಳೂ ಒಟ್ಟಿಗೆ “ನಮಗೆ ಈ ಆಟದ ಸಾಮಾನು ನಮ್ಮ ವೀರಣ್ಣ ಸರ್ರೇ ಕೊಡಬೇಕು ಸರ್, ಅವರು ಬಂದು ಆ ಆಟದ ಸಾಮಾನು ಕೊಟ್ಟು ನಮ್ಮ ಜೊತೆ ಆಟ ಆಡಬೇಕು, ಅಂದ್ರೇನೆ ನಾವು ಇವನ್ನೆಲ್ಲ ಮುಟ್ಟೋದು, ಅವರಿಲ್ಲದ ಈ ಆಟದ ಸಾಮಾನು ನಮಗೇಕೆ ಸರ್” ಎಂದರಂತೆ.
ಇದನ್ನ ಕೇಳಿಸಿಕೊಂಡ ಆ ಶಿಕ್ಷಕರೂ ಸಹ ಆ ಶಿಕ್ಷಕರು ಎಂಥವರಿರಬಹುದು ಎಂದು ಎದೆ ತೇವಮಾಡಿಕೊಂಡು ಅಲ್ಲಿ ನೆರೆದಿದ್ದ ತಂದೆ ತಾಯಿಗಳಿಗೆ ಹೇಳಿದರಂತೆ.
ಇದನ್ನ ಕೇಳಿದಾಗಿನಿಂದ ನಾನು ಒಳಗೊಳಗೆ ಬಿಕ್ಕುತ್ತಿದ್ದೇನೆ. ಮಾತು ಬರುತ್ತಿಲ್ಲ. ಹಲವಾರು ಜನ ತಾಯಂದಿರು ನನ್ನ ಹಳೆಯ ವಿದ್ಯಾರ್ಥಿಗಳು ಪಾಲಕರು ಕರೆ ಮಾಡಿ ಕಣ್ಣೀರಿಡುತ್ತಿದ್ದಾರೆ.
ನನ್ನ ಹಿರಿಯ ವಿದ್ಯಾರ್ಥಿಯೊಬ್ಬ ಹೊಲಕ್ಕೆ ಹೋಗಿ ಕೆಲಸ ಮಾಡಲಾಗದೆ ವಾಪಸ್ ಬಂದು ಊಟ ಮಾಡದೆ ಕನವರಿಸುತ್ತಾ ಜ್ವರ ಬಂದು ಮಲಗಿದ್ದಾನೆ. ಅವನ ಕನವರಿಕೆಯಲ್ಲೆಲ್ಲ “ವೀರಣ್ಣ ಸರ್ , ವೀರಣ್ಣ ಸರ್ …” ಎನ್ನುತ್ತಿದ್ದಾನಂತೆ.
ದೊಡ್ಡ ದೊಡ್ಡ ನಾನು ಗೌರವಿಸುವ ಜೀವಗಳೆಲ್ಲ ಕಂಬನಿಗರದು ಕರೆ ಮಾಡುತ್ತಿದ್ದಾರೆ.
ಶತಾಯಗತಾಯ ನನ್ನನ್ನ ಆ ಶಾಲೆಗೆ ಮತ್ತೆ ತರಲೇಬೇಕೆಂಬ ಹಠದಲ್ಲಿ ಅನೇಕ ಜೀವಗಳು ಹಗಲು ರಾತ್ರಿ ಒಂದು ಮಾಡಿ ಓಡಾಡುತ್ತಿವೆ.
ನನಗೆ ನೌಕರಿ ಹೋದರೂ ನಾನು ಚಿಂತಿಸುವುದಿಲ್ಲ. ಆದರೆ ನನ್ನಿಂದಾಗಿ ಯಾರೂ ನೋಯಬಾರದು ಎಂದು ನಂಬಿದವನು ನಾನು.
ಆದರೆ ಈ ಜೀವಗಳ ಸಂಕಟ ದಿನೇ ದಿನೇ ಹೆಚ್ಚುತ್ತಿದೆ. ನನಗದು ತುಂಬಾ ಯಾತನೆ ತರುತ್ತಿದೆ. ನನ್ನನ್ನ ಆಳದಿಂದ ಕಲಕುತ್ತಿದೆ.
ನಾನು ಮಾಡಿದ್ದೇ ತಪ್ಪು ಎಂದು ಹಲವರು ಹೇಳುತ್ತಿದ್ದಾರೆ. ನನ್ನದು ಕರ್ತವ್ಯಲೋಪವಾದರೆ ನಮ್ಮ ಸರಕಾರಿ ಶಾಲೆಯ ಜವಾಬ್ದಾರಿ ಹೊತ್ತಿರುವ ಎಲ್ಲ ಅಧಿಕಾರಿಗಳದ್ದು ಕರ್ತವ್ಯಲೋಪವಲ್ಲದೆ ಮತ್ತೇನು?
ಇಲ್ಲಿ ಸರಿ ತಪ್ಪುಗಳಾಚೆ ನಮ್ಮ ಮಕ್ಕಳು ಶಾಲೆಗೆ ಯಾರೇ ಬಂದರೂ ಹೊರಗಡೆ ಬಂದು ಎಲ್ಲರೂ ಒಕ್ಕೊರಲಿನಿಂದ ಕೂಗುತ್ತಿದ್ದಾರಂತೆ ಬೇಕೇ ಬೇಕು ವೀರಣ್ಣ ಸರ್ ಬೇಕು, ನನ್ನಂಥ ನೂರು ಜನರನ್ನ ಖರೀದಿಸುವ ಶಕ್ತಿ ಇರುವ ಜೀವಗಳೂ ಸಹ ಈ ಬಡ ಮಾಸ್ತರನ ಪರವಾಗಿ ಟೇಬಲ್ ಕುಟ್ಟಿ ಬೇಕೇ ಬೇಕು ವೀರಣ್ಣ ಸರ್ ಬೇಕು ಎನ್ನುತ್ತಿದ್ದಾರಂತೆ…
ಒಂದಂತು ನಿಜ.
ಒಂದು ಹಂತಕ್ಕೆ ಬೇಸತ್ತು ನಾನು “ಅಂಬೇಡ್ಕರ್ ನಗರಕ್ಕೆ ಅಲ್ವಿದಾ ಹೇಳುವ ಪ್ರಯತ್ನ ಮಾಡಿದ್ದೆ”
ಆದರೆ ಈಗ ಹೇಳುತ್ತಿದ್ದೇನೆ.
ನಾನು ಮಾಸ್ತರಿಕೆ ಮಾಡುವುದಿದ್ದರೆ ಅದು ಅಂಬೇಡ್ಕರ್ ನಗರದಲ್ಲಿ ಮಾತ್ರ.
ಪ್ರಭುತ್ವದ ವಾರಸುದಾರರಿಗೆ ನಮ್ಮ ಮಕ್ಕಳ ಅಳುದನಿ ಕೇಳಿಸಲಿ, ನನ್ನ ಅಮಾನತ್ತು ರದ್ದಾಗಲಿ 🙏
– ವೀರಣ್ಣ ಮಡಿವಾಳರ