ಅಂತರ್ಜಾಲದ ಜೊತೆ ಆಟ ಆಡುತ್ತಿರುವ ಚದುರಂಗ
ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೆ ಜಿಟಿ ಜಿಟಿ ರೋಣಿ ಮಳೆ ರುಯ್ಯನೇ ಹಿಡಿದಿತ್ತು.ಒಮ್ಮೊಮ್ಮೆ ಬಿಟ್- ಬಿಟ್ ಸೆಳಕ್ ಸೆಳಕ್ ಬಾರಿಸ್ತಿತ್ತು. ಕೆಲಸ ಮುಗಿಸ್ಕೊಂಡು ಬಂದವ್ನೆ ಬ್ಯಾಗ್ ರೆಡಿ ಮಾಡ್ಕೊಂಡು ಜೆರ್ಕಿನ್ನು ,ಮಂಕಿ ಕ್ಯಾಪು ,ಬೂಟು ಹಾಕ್ಕೊಂಡು ರೈಲ್ವೆ ಸ್ಟೇಷನ್ ದಾರಿ ಹಿಡಿದೆ. ರೈಲ್ವೆ ಸ್ಟೇಷನ್ ಒಳಗಡೆ ಹೆಜ್ಜೆ ಇಡತಿದ್ಹಾಗೆ ಮೊದಲು ಜೆರ್ಕಿನ್ ತೆಗದೆ.ಮಳೆಹನಿಗಿಂತ ಬೆವರಹನಿಗಳಿಂದ್ಲೇ ಮೈ ಒದ್ದೆಯಾಗಿತ್ತು.ಬೂಟಿನ ಕಥೆಯಂತೂ ಕೇಳ್ಕೂಡದು…
ಬ್ಯಾಗಿನಿಂದ ನೀರಿನ ಬಾಟಲ್ ತಗದವ್ನೆ ಅರ್ಧ ಲೀಟರ್ ನೀರನ್ನ ಗಟಗಟನೆ ಬಾಯಿಗಿಳಿಸಿ ಡಸ್ಟ್ಬಿನ್ ಹುಡ್ಕಿದೆ. ಅಲ್ಲೇ ಸ್ವಲ್ಪ ದೂರದಲ್ಲಿದ್ದ ಡಸ್ಟ್ಬಿನ್ ಕಣ್ಣಿಗ್ಬಿತ್ತು. ಇನ್ನೇನು ಬಾಟಲ್ ಹಾಕೋಣ ಅಂತ ಸಮೀಪ ಹೋಗ್ತಿದ್ಹಾಗೆ ಅದರ ಮೇಲಿದ್ದ ಕನ್ನಡ ಬರಹ ‘ಪೀಕದಾನಿ’ಎಂದು ಬರೆದಿದ್ದು ಕಂಡು ಕನ್ನಡ ಬರಹಕ್ಕೆ, ಕನ್ನಡ ಪದ ಸಂಪತ್ತಿಗೆ ನಿಬ್ಬೆರಗಾದೆ. ಆಗತಾನೇ ರಾಜ್ಯದಲ್ಲೆಲ್ಲ SBI ಮ್ಯಾನೇಜರ್ ಕನ್ನಡ ನಾನ್ಯಾಕ್ ಮಾತನಾಡಬೇಕೆಂಬ ಸುದ್ದಿ ಮಾಧ್ಯಮಗಳಲ್ಲಿ ಜೋರಾಗೇ ಹರಿದಾಡ್ತಿತ್ತು.ಅದೇ ಗುಂಗಲ್ಲಿ ಹಾಗೆ ಮುಂದೆ ಸಾಗ್ತಾ ಫ್ಲಾಟ್ ಫಾರಂ ನಂಬರ್ 6 ರಲ್ಲಿ ಸಿಂಧನೂರು ಹೋಗುವ ರೈಲು ಹೊರಡಲಿದೆ ಎಂದು ಅಶರೀರವಾಣಿ ಕೇಳಿಸ್ತಿತ್ತು.
ಫ್ಲಾಟ್ ಫಾರಂ ನಂಬರ್ 5 ಇಲ್ಲಿದೆ 6 ನೇ ಫ್ಲಾಟ್ ಫಾರಂ ಎಲ್ಲಿ ಎಂದು ಗಡಿಬಿಡಿಗೊಂಡು ನಮ್ ರೈಲ್ವೆ ಸಿಬ್ಬಂದಿನ ಕೇಳಿದಾಗ ಸರ್ 1 ನೇ ಫ್ಲಾಟ್ ಫಾರಂ ಇಂದ 1 ಕಿಲೋಮೀಟರ್ ನಡ್ಕೊಂಡು ಹೋಗ್ಬೇಕು ಅದೇ ಹೊಸ ಫ್ಲಾಟ್ ಫಾರಂ 6 ನೇದು ಅಂದ. ಆಗ ಥಟ್ ಅಂತ ನೆನಪಾಯ್ತು ವಿಶ್ವದ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರಂಗೆ(1,507 ಮೀಟರ್ ) ಹೋಗ್ಬೇಕಂತ. ಪ್ಲಾಟ್ಫಾರ್ಮ್ ಒಂದರ ಮುಖಾಂತರ ಸಾವಕಾಶವಾಗಿ ನಡ್ಕೊಂಡು ಹೋಗ್ತಿದ್ದೆ. ಸಮಯ ೦೫:೫೦ ಆಗಿತ್ತು ಅಲ್ಲಿ ಆ ಟ್ರೇನಿಗೆ ಹೋಗೋರೆಲ್ಲ ತಡವಾಗ್ತಿದೆ ಅನ್ಕೊಂಡು ರನ್ನಿಂಗ್ ರೇಸಲ್ಲಿ ಓಡೋರ್ ತರ ಓಡ್ತಿದ್ರು. ಹಾಗೆ ನನ್ ಹಿಂದೆ ವೃದ್ಧ ದಂಪತಿಗಳಿಬ್ಬರೂ ತಮ್ಮ ಮೊಮ್ಮಗನೊಡನೆ ಜೋರಾಗಿ ನಡೀತಿದ್ರು. ಅವರ ಆ ವೇಗ ನೋಡಿ ‘ಅಜ್ಜಾರಾ… ಆರಾಮಾಗಿ ನಡೀರಿ… ರೈಲು ಬಂಡಿ ಹೋಗಾಕಾ ಇನ್ನೂ ೨೦ ನಿಮಿಷ ಟೈಮ್ ಐತ್ರೀ …. ಅಂದೆ. ನನ್ ಮಾತು ಕೇಳ್ತಿದ್ ಕೂಡ್ಲೇ ತಮ್ಮ ವೇಗ ಕಡಿಮೆ ಮಾಡಿ ಆ ದೂರದ ಫ್ಲಾಟ್ ಫಾರಂನ ಶಪಿಸತೊಡಗಿದ್ರು.ಪ್ರತಿದಿನ ಹೀಗೆ ರನ್ನಿಂಗ್ ರೇಸ್ ನಡೆಯುತ್ತೇ ಇಲ್ಲಿ ಅಂತ ಮನಸಲ್ಲಿ ಅನ್ಕೊಂಡು ರೈಲು ಬಂಡಿ ಹತ್ತಿದೆ. ಬಂಡಿ ಹತ್ತಿದ ಕ್ಷಣ ಜೋರಾದ ಸೀನು, ಮೂಗು ಸೋರಲು ಶುರುವಾಯ್ತು. ನೆಗಡಿ ಹಾಯತ್ತೆ ಅಂದ್ಕೊಂಡು ಜನರಲ್ ಬೋಗಿ ಸೀಟಲ್ಲಿ ಕುಳಿತ್ಕೊಂಡೆ. ಮಳೆ ಹಾಗೇ ತನ್ನ ಸೋಬಾನವನ್ನ ಸುರುಮಾಡೇಯಿತ್ತು.ಕಪ್ಪು ಮಣ್ಣಿನ ಮೇಲೆ ಸುತ್ತಲೂ ಆಕ್ರಮಣ ಮಾಡಿದ್ಹಾಗೆ ಕಾರ್ಮೋಡ ಕವಿದಿತ್ತು. ಹೂಬಳ್ಳಿ ದೂರ ಸರಿದಂತೆ ನಾಳೆಯ ಪಂದ್ಯಾವಳಿ ಮನವನ್ನು ಕಲಕಿ ಕಸಿವಿಸಿ ಮಾಡಿದಂಗಾಯ್ತು. ತಕ್ಷಣ ಮೊಬೈಲ್ ತಗದು ಚೆಸ್ ಡಾಟ್ ಕಾಮ್ ನಲ್ಲಿ ಎರಡ್ಮೂರು ಗೇಮ್ ಆಡಿ ಮನಸಿನ ಗಾಬರಿಯನ್ನ ತಿಳಿಗೊಳಿಸ್ಕೊಂಡೆ. ಅಷ್ಟ್ರಲ್ಲಿ ಅರೆ ನಿದ್ದೆ ಆವರಿಸಿಕೊಂಡು ಮಲಗಿದೆ. ಆಗಾಗ ಚಾಯ್ … ಚಾಯ್… ಚುಮ್ಮುರೀ … ಮಸಾಲಾ ಚುಮ್ಮುರೀ… ಪಲಾವ್, ವೇಜ್ ಪಲಾವ್ ಅನ್ನುವ ಧ್ವನಿ ಕೇಳ್ಸಿದ್ ಬಿಟ್ರೆ ಅದೇ ಚುಕ್ ಬುಕ್… ಚುಕ್ ಬುಕ್… ಶಬ್ದ.
ಸಿಂಧನೂರಲ್ಲಿ ಇಳಿದಾಗ ಆಗಲೇ ಸಮಯ ಸುಮಾರು 10.45 ಆಗಿತ್ತು.ಊಟದ ಸಮಯ ಮೀರಿದ ಕಾರಣ ಹೊಟ್ಟೆ ತಾಳ ಹಾಕ್ತಾ ಇತ್ತು.ಅಲ್ಲೇ ಸ್ಟೇಷನ್ ಹೊರಗಡೆ ಬಂದು ಊಟದ ಸಲ್ವಾಗಿ ಖಾನಾವಳಿ ಇದೆಯಾ ಅಂತ ಸ್ವಲ್ಪ ಮುಂದೆ ಬಂದು ನೋಡಿದಾಗ ಅಲ್ಲೇ ಹತ್ತಿರದಲ್ಲಿ ಖಾನಾವಳಿ ಸಿಕ್ತು.ಊಟ ಮಾಡ್ತಾ ಖಾನಾವಳಿ ಮಾಲೀಕರ ಹತ್ತಿರ ವಸತಿಗಾಗಿ ಇರೋಕೆ ರೂಮ್ ಬಗ್ಗೆ ವಿಚಾರಿಸಿದೆ.ಅವರು ಆಟೋದವರಿಗೆ ವಿಚಾರಿಸಿ ಸಾರ್ ಅವರಿಗೆ ಗೊತ್ತಿರುತ್ತೆ ಒಳ್ಳೆ ಕಡೆ ರೂಮ್ ಕೊಡಸ್ತಾರೆ ಅಂತ ಹೇಳಿದ್ರು.ಊಟ ಮುಗಿಸಿ ಆಟೋ ಸ್ಟ್ಯಾಂಡ್ ಹತ್ರ ಹೋದೆ.ಆಟೋದವ್ರು ಬಸ್ಸ್ಟ್ಯಾಂಡ್… ಬಸ್ಸ್ಟ್ಯಾಂಡ್…ಅಂತ ಕೂಗ್ತಿದ್ ಕೇಳಿ ಆಟೋ ಹತ್ಕೊಂಡು “ಇರೋಕೆ ಒಂದು ರೂಮ್ ಬೇಕ್ರೀ ಸಾಹೇಬ್ರಾ ಒಳ್ಳೆ ಕಡೆ ಕರಕೊಂಡು ಹೋಗ್ರೀ” ಅಂದೆ.ಆಟೋದವನು ಯಾವ ಊರು ಸರ್..? ಅಂತ ಕೇಳಿದ. ಮಾತಾಡ್ತಾ ಬಸ್ಟ್ಯಾಂಡ್ ಕಡೆ ಬರೋದ್ರಲ್ಲಿ ವರುಣನ ಆರ್ಭಟ ತುಸು ಜೋರಾಗೇ ಇತ್ತು .ಆಟೋದವ ಒಂದು ಲಾಡ್ಜ್ ಮುಂದೆ ನಿಲ್ಸಿ ಇಲ್ಲಿ ರೂಮ್ ಸಿಗ್ತಾವ ಸರ್, ಕೇಳಿ ಅಂತ ನನ್ ಇಳಿಸಿ ಹೊರಟೇ ಬಿಟ್ಟ.
ಲಾಡ್ಜ್ ಒಳಗೆ ಹೋಗಿ ರೂಮ್ ಕೇಳಿದಾಗ ಇಲ್ಲ ಸರ್ ಫುಲ್ ಆಗಿದಾವೆ ಅಂದ್ರು.ಅದೇ ಮಳೇಲಿ ನೆನಿತಾ – ನೆನಿತಾ ಮೂರ್ನಾಲ್ಕು ಕಡೆ ಹೋಗಿ ರೂಮ್ ಕೇಳಿದಾಗ ಕೊನೆಗೆ ಒಂದ್ ಕಡೆ ರೂಮ್ ಸಿಕ್ತು. ಎ. ಸಿ. ಇದೆಯಾ ಅಂತ ಕೇಳಿದ್ಕೆ ಆತ ನನ್ಮುಖ ನೋಡ್ತಾ ಇಂಥ ಮಳೇಲಿ ಎ. ಸಿ ಕೇಳ್ತೀರಲ್ಲಾ ಸರ್…!! ಇದೆ ಅಂದ. ಮುಗುಳ್ನಗುತ್ತಾ ರೂಮ್ ಕೀ ತಗೊಂಡು ಹೋದೆ.ಮಳೇಲಿ ನೆನದಿದ್ರಿಂದ ಮೊದ್ಲು ಬಟ್ಟೆ ಬದಲಾಯಿಸಿ ಫ್ರೆಶ್ ಅಪ್ ಆಗಿ ಪ್ರಯಾಣದ ಕುರಿತು ನಾಲ್ಕೈದು ಸಾಲು ಮೊಬೈಲ್ ನಲ್ಲಿ ಬರದು ಮಲಗಿದೆ. ಜರ್ನಿಯ ಸುಸ್ತು ಒಂದ್ ಕಡೆ ಆದ್ರೆ ಬೆಳಿಗ್ಗೆ ಗೇಮ್ ಬಗ್ಗೆ ಇನ್ನೊಂದು ಕಡೆ ಯೋಚ್ನೆ ನೀರಿನ ಸುಳಿವಿನಂತೆ ತಲೇಲಿ ಸುಳಿತಾ ನಿದ್ರಾ ದೇವತೆ ಮಡಿಲಿಗೆ ಜಾರಿದೆ.
ಬೆಳಿಗ್ಗೆ 6.ಗಂಟೆಗೆ ಎದ್ದವ್ನೆ ಬೇಗ ಬೇಗ ರೆಡಿ ಆಗಿ ಹೊರಗಡೆ ಬಂದು 2 ಇಡ್ಲಿ ತಿಂದು ಆನಂದ್ ಪಬ್ಲಿಕ್ ಸ್ಕೂಲ್ ಅಂತ ಅಡ್ರೆಸ್ಸ್ ಹೇಳಿ ಆಟೋದಲ್ಲಿ ಹೊರಟೆ.ಸಿಂಧನೂರು ಹೆಲ್ತ್ ಕ್ಲಬ್ ಆಯೋಜಿಸಿರುವ Open Rapid Chess Tournament-2025 ಇದ್ರಲ್ಲಿ ನಾನು ಸ್ಪರ್ಧಿಯಾಗಿ ಭಾಗವಹಿಸೋಕೆ ಸ್ಪರ್ಧಾಳಾಗಿ ಹುಬ್ಬಳ್ಳಿಯಿಂದ ಸಿಂಧನೂರು ಆನಂದ್ ಪಬ್ಲಿಕ್ ಸ್ಕೂಲ್ ಇಲ್ಲಿಗೆ ಬಂದಿದ್ದೆ.ಅಲ್ಲಿ ಸ್ಪರ್ಧಿಗಳು ಹಾಗೂ ಮಕ್ಳನ್ನ ಕರೆ ತರುವ ಪಾಲಕರು ಇನ್ನೂ ಬರ್ತಾನೆ ಇದ್ರು. ಶೈಕ್ಷಣಿಕವಾಗಿ ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆಯಾದರೂ ಕಾರ್ಯಕ್ರಮದ ತಯಾರಿ ಜೋರಾಗೆ ನಡೆದಿತ್ತು. ಆನಂದ್ ಪಬ್ಲಿಕ್ ಸ್ಕೂಲ್ ಈಗಷ್ಟೇ ನಿರ್ಮಾಣವಾದಂತಹ ಎತ್ತರದ ಕಟ್ಟಡ. ಒಳಗೆ ಪ್ರವೇಶ ಮಾಡುವ ಮೊದಲು ಪಾದರಕ್ಷೆಗಳನ್ನು ಇಲ್ಲಿಯೇ ಬಿಡಿ ಎಂಬ ಫಲಕವಿತ್ತು. ನಾನು ಬೂಟು ಹಾಕಿದ್ರಿಂದ ಶೂ ಮತ್ತು ಸಾಕ್ಸ್ ತೆಗದು ಮಳೆ ನೀರು ತಾಗದ ಜಾಗದಲ್ಲಿ ಬಿಟ್ಟು ಒಳಗಡೆ ಬಂದು ನೋಡಿದ್ರೆ, 5 ವರ್ಷದ ಮಗುವಿನಿಂದ ಹಿಡಿದು 82 ವರ್ಷದ ಮುದುಕರು ಸೇರಿದ್ದರು. ವಿಭೂತಿ ಹಚ್ಚಿಕೊಂಡ ನೊಸಲುಗಳೇ ಹೆಚ್ಚಾಗಿ ಕಂಡೆ. ಇಲ್ಲಿ ಶರಣರ ಪ್ರಭಾವ ತುಸು ಹೆಚ್ಚೇ ಇರ್ಬಹುದು ಅನ್ಕೊಂಡೆ…. ತುಳಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿದ್ದರೂ, ಶಂಖನಾದದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಇಷ್ಟೊಂದು ಜನರ ಮಧ್ಯೆ ಅದು ಸಭಿಕರಿಗೆ ಅರಿವಿಲ್ಲದೆಯೇ ನಡೆಯಿತೋ…?ಅಥವಾ ಹೇರಲ್ಪಟ್ಟಿತೋ ..?ಗೊತ್ತಿಲ್ಲ. ಆದರೆ ನನಗೆ ಇದು ಹೇರಿಕೆ ಅಂತ ಅನಿಸಿತು..! ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸುವವರ ಹೆಸರು,ರೇಟಿಂಗ್ ಮತ್ತು ಆಟದ ನಿಯಮಗಳನ್ನು ನಾಮಫಲಕದಲ್ಲಿ ಹಾಕಲಾಗಿತ್ತು.ಸಮಯ ಸರಿಯಾಗಿ 10ಘಂಟೆ 30ನಿಮಿಷ, ಮೊದಲ ಸುತ್ತು ಪ್ರಾರಂಭವಾಯಿತು.ನನ್ನ ಎದುರಾಳಿ ಯಾರೆಂದು ತಿಳಿಯಲು ನಾಮಫಲಕದಲ್ಲಿ ಹೆಸರು ಹುಡುಕುತ್ತಿದ್ದರೆ ಮುಕ್ಕಾಲು ಭಾಗ ಸ್ಪರ್ಧಿಗಳು ತಮ್ಮ ಸೀಟಿನಲ್ಲಿ ಆಸೀನರಾಗಿದ್ದರು. ಮೊಬೈಲ್ ಮುಖಾಂತರ ತಮ್ಮ ಸೀಟಿನ ಸೀರಿಯಲ್ ನಂಬರನ್ನು ನೋಡಿ ಕುಳಿತುಕೊಂಡಿದ್ದರು.ಪ್ರಥಮ ಸುತ್ತು ಆರಂಭವಾಯಿತು. ಹನ್ನೊಂದರ ಹರೆಯದ ಹುಡುಗ ನನ್ನ ಎದುರಾಳಿ. ಮೊಬೈಲ್ ತಂದೀರಾ ಅಂಕಲ್ ಎಂದ.ಹೌದು ಎಂದೆ ಜೇಬಲ್ಲಿದೆಯಾ ಎಂದ ಹ್ಮ್ಮ್ಮ್ಮ್… ಎಂದೆ. ಆರ್ಬಿಟರ್ ಆರ್ಬಿಟರ್ ಎಂದು ಕೂಗತೊಡಗಿದ.ಯಾಕೋ..? ಏನಾಯ್ತು…? ಎಂದೆ. ಮೊಬೈಲ್ ಜೇಬಲ್ಲಿ ಇಡೋ ಹಾಗಿಲ್ಲ ಎಂದ. ಅದು ಫ್ಲೈಟ್ ಮೊಡ್ ಇದೆ ಎಂದೆ ಟೇಬಲ್ ಮೇಲೆ ಇಡಬೇಕು ಅಂದ ಆಯ್ತು ಬಿಡಪಾ!ಮಾರಾಯ..!! ಅಂತ ಟೇಬಲ್ ಮೇಲಿಟ್ಟೆ,ಆಗ ಆಟ ಮುಂದುವರಿಯಿತು. ನಿಯಮ ಮತ್ತು ಷರತ್ತುಗಳೇ ಚೆಸ್ ಆಟದ ಪ್ರಮುಖ ಜೀವಾಳ.ಆಟದ ಮೊದಲೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರುವಂತಿಲ್ಲ ಎಂದು ನಿಮಯವಿದ್ದರೂ ನಾನು ಈ ಮೊಬೈಲ್ ಗೀಳಿನ ಯುಗದಲ್ಲಿ ಮೊಬೈಲ್ ಇಲ್ದೆ ಯಾರ್ ಬಂದಾರು…? ಅನ್ನೋ ದೃಷ್ಟಿಕೋನದಲ್ಲಿ ಮೊಬೈಲ್ ನನ್ನೊಟ್ಟಿಗೆ ತಗೊಂಡು ಹೋಗಿದ್ದೆ. ಆಟ ಕೊನೆಯ ಹಂತ ತಲುಪಿತು. ಎದುರಾಳಿಗೆ ಒತ್ತಡ ಹೇರುವುದು ಆಟದ ತಂತ್ರ. ಒತ್ತಡ ತಡೆದುಕೊಳ್ಳದವನು,ಆಟವನ್ನು ಹಿಡಿದಿಟ್ಟುಕೊಳ್ಳದವನು,ತಪ್ಪಿ ಒಂದೇ ಒಂದು ಅನಿಯಂತ್ರಿತ ನಡೆ ಅಥವಾ ತಪ್ಪು ನಡೆ ಇಟ್ಟರೆ ಸಾಕು ಸೋಲು ಕಟ್ಟಿಟ್ಟ ಬುತ್ತಿ. ಚೆಸ್ ನಲ್ಲಿ ಅದೃಷ್ಟ ಅಥವಾ ಲಕ್ ಅಂತಾರಲ್ಲಾ .! ಅದು ಇರುವುದಿಲ್ಲ. ಆಟಗಾರನ ಆಲೋಚನೆ, ಚುರುಕುತನ, ಮುಂದಿನ ನಡೆಗಳ ಬಗ್ಗೆ ದೂರದೃಷ್ಟಿಯನ್ನು ಇಟ್ಟುಕೊಂಡು ಆಡಬೇಕಾಗುತ್ತದೆ. Rapid ನಂತಹ ಗೇಮಗಳಲ್ಲಿ ಸಮಯದ ಪಾತ್ರ ಬಹುಮುಖ್ಯ. ಇದೊಂದು ಜಟಿಲವಾದ ಆಟ ಪ್ರತಿಯೊಬ್ಬ ಆಟಗಾರನ ಯೋಚನೆ ಮೇಲೆ ಈ ಆಟ ನಿಂತಿದೆ.ಹಾಗೂ ಆಟಗಾರನ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಆಟವು ಮನುಷ್ಯನಿಗೆ ಮಾನಸಿಕವಾಗಿ ಧೃಢತೆಯನ್ನು ಹೆಚ್ಚಿಸಿ ಧ್ಯಾನಕ್ಕಿಂತಲೂ ಹೆಚ್ಚಾದ ಸ್ಥಿರತೆಯನ್ನೂ ,ಭೌದ್ಧಿಕ ವ್ಯಾಯಾಮನ್ನು ನೀಡುತ್ತದೆ. ಈಗೀಗ ಈ ಆಟವನ್ನು ಮನರಂಜನೆಗಾಗಿ ಮತ್ತು ಸ್ಪರ್ಧಾತ್ಮಕವಾಗಿ ಪ್ರಪಂಚದಾದ್ಯಂತ ಆಡಲಾಗುತ್ತಿದೆ. “ಅಂತರ್ಜಾಲದ ಜೊತೆ ಆಟ ಆಡುತ್ತಿರುವ ಚದುರಂಗ “ಎಂದರೆ ತಪ್ಪಾಗಲಾರದು. ಈಗಿನ ಆನ್ಲೈನ್ ಜಗತ್ತಿನಲ್ಲಿ ನಮಗೆ ಬಹಳಷ್ಟು ಗೇಮ್ ಗಳು ಸಿಗುತ್ತವೆ. ಆದರೆ ಅದ್ರಲ್ಲಿ ಚೆಸ್ ಎಲ್ಲವನ್ನು ಹಿಂದಿಕ್ಕಿ ಮುಂಚೂಣಿಯಲ್ಲಿರುವ ಪ್ರಮುಖ ಆಟವೇ ಸರಿ. ಯಾಕೆಂದರೆ ನಿಮ್ಮ ಆಲೋಚನೆ ಮತ್ತು ಮುಂದಾಲೋಚನೆ ಚೆನ್ನಾಗಿದ್ದರೆ ನೀವು ಕಂಪ್ಯೂಟರ್ ಜೊತೆನೆ ಆಟವಾಡಿ ಗೆಲ್ಲಬಹುದು.! ನಾವು ತಂತ್ರಜ್ಞಾನವನ್ನು ಎಷ್ಟೇ ಅಭಿವೃದ್ಧಿಪಡಿಸಿದರೂ ಬುದ್ಧಿವಂತರು ಜಾಣ್ಮೆಯಿಂದ,ಏಕತಾನತೆಯಿಂದ ಗೆಲ್ಲಬಹುದಾದ ಆಟವಾಗಿದೆ. ಇಂದಿನ ಅಂತರ್ಜಾಲ ಯುಗದಲ್ಲಿ ಆರ್ಥಿಕವಾಗಿ ದಿವಾಳಿ ಮಾಡುವಂತಹ ಅನೇಕ ಆಟಗಳಿವೆ Rummy circle , Teen patti, Dream 11, My 11circle,Solitaire Cube, Swagbucks, InboxDollars and Cash Giraffe ಹಾಗೂ ಮನರಂಜನೆಗಾಗಿ ಆಡುವ Ludo, Candycrush, Temple Run, Pub-G, Real cricket, Pokermon Pokemon Go ಒಂದಾ ಎರಡಾ ಹೇಳ್ತಾ ಹೋದರೆ ನೂರಾರು ಗೇಮ್ ಗಳ ಪಟ್ಟಿ ಕಣ್ಮುಂದೆ ಸರತಿ ಸಾಲಲ್ಲಿ ನಿಲ್ಲುತ್ತವೆ. ಇವೆಲ್ಲವುಗಳ ಮಧ್ಯೆ ಮಕ್ಕಳಿಂದ ಹಿಡಿದು ಹಿರಿಯರ ಮಾನಸಿಕ ವ್ಯಾಯಾಮವನ್ನು ಸಧೃಡಗೊಳಿಸುವ ಆಟವೆಂದರೆ ಅದು ಚೆಸ್ ಮಾತ್ರ. ಇನ್ನೊಂದು ಗಮನಿಸಬೇಕಾದ ವಿಷಯವೇನೆಂದರೆ ಆನ್ಲೈನ್ ಲ್ಲಿ ಆಡುವ ಬಹಳ ಗೇಮ್ ಗಳು ನಮ್ಮನ್ನು ಆರ್ಥಿಕವಾಗಿ ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚು .ದುಡ್ಡು ಕಟ್ಟಿ ಆಡುವ ಆಟ ಯಾವುದೇ ಇರಲಿ, ಕೋಟ್ಯಾಧಿಪತಿಯಾಗಲು ಹೊರಟರೆ ಹೊಲಮನೆ ಮಾರಿಕೊಳ್ಳುವುದಂತೂ ಗ್ಯಾರಂಟಿ. ಸೆಲೆಬ್ರಿಟಿಗಳು ತಮ್ಮ ಪಾಕೇಟ್ ತುಂಬಿಕೊಳ್ಳಲು ಎಂತಹ ಅಡ್ವರ್ಟೈಸ್ಮೆಂಟ್ ಕೊಡಲು ಸಿದ್ಧ. ಆಡ್ ಗೆ ನಾವು ಮರುಳಾಗದೆ ಬುದ್ಧಿವಂತರಾಗಬೇಕಷ್ಟೇ.! ಈ ವಿಷಯದಿಂದ ಯುವ ಸಮುದಾಯ ದೂರ ಸರಿದಷ್ಟು ಒಳಿತು.ಸರ್ಕಾರಕ್ಕೆ ಹೆಚ್ಚಿನ ಲಾಭ ಬರುತ್ತೆ ಹೊರತು,ಸರ್ಕಾರ ಇದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಇನ್ನು ಅಂತಿಮವಾಗಿ ಹೇಳೋದಾದ್ರೆ ಆನ್ಲೈನ್ ಚೆಸ್ ಟೂರ್ನಾರ್ಮೆಂಟ್ಗಳು ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿವೆ. ಮನೆಯಲ್ಲೇ ಕುಳಿತು ಆಟ ಆಡಿ ಆನಂದಿಸಬಹುದು.
ಇನ್ನೂ ಪಂದ್ಯಾವಳಿ ಕಡೆ ಬಂದಾಗ ಮೊದಲನೇ ಸುತ್ತಿನ ಪಂದ್ಯದಲ್ಲಿ ಆಗಿದ್ದು ಅದೇ, ಡ್ರಾ ಆಗಿ ಅಂತ್ಯಗೊಳ್ಳಬೇಕಿದ್ದ ಪಂದ್ಯವನ್ನು ಗೆಲ್ಲಬೇಕೆಂಬ ಉತ್ಸಾಹದಲ್ಲಿ ಒಂದು ತಪ್ಪು ನಡೆಯಿಟ್ಟು ಸೋಲನುಭವಿಸಬೇಕಾಯ್ತು.
ಮುಂದಿನ ಸುತ್ತು ಶುರುವಾಯ್ತು, “ಸೋಲೇ ಗೆಲುವಿನ ಸೋಪಾನ”ಅಂತ ಮನದಲ್ಲಿ ಅನ್ಕೊಂಡು ಎದುರಾಳಿ ತೀರಾ ಚಿಕ್ಕ ಹುಡುಗಿ ಗೆಲ್ಲಬಹುದು ಅಂತ ಮನಸಲ್ಲೇ ಲೆಕ್ಕಾಚಾರ ಮಾಡ್ತಿದ್ದೆ. ಆಟ ತನ್ನದೇ ವೇಗದಲ್ಲಿ ಸರಾಗವಾಗಿ ಸಾಗ್ತಿತ್ತು. ನಡುವೆ ಎಡಗೈಯಿಂದ ಕಾಯಿಯನ್ನು ಚಲಿಸಿದೆ. ಆರ್ಬಿಟರ್ ಎಂದು ಕೂಗಿದಳು.ಆರ್ಬಿಟರ್ ಪಕ್ಕದಲ್ಲೇ ಇದ್ದಿದ್ರಿಂದ ಬೇಗನೇ ಬಂದು ಏನೆಂದು ಕೇಳಿದರು.ಬೇರೆ ಕೈಯಿಂದ ಕಾಯಿಯನ್ನು ಚಲನೆ ಮಾಡಿದರು ಎಂದಳು. ‘ಹೌದಾ ಸರ್’ ಎಂದು ಆರ್ಬಿಟರ್ ಕೇಳ್ದಾಗ ಹೌದು ಎಂದೆ. ‘ಒಂದು ತಪ್ಪುನಡೆ’ ಎಂದು ಬರೆದುಕೊಂಡರು. ಹೀಗೆ ಆಟದಲ್ಲಿ ಎರಡು ತಪ್ಪುಗಳನ್ನು ಮಾಡಿದರೆ ಆಟ ಸೋತಹಾಗೆ. ಆಟ ಕೊನೆಯ ಹಂತಕ್ಕೆ ತಲುಪಿದಾಗ ಕಾಲಾಳನ್ನು ಬಡ್ತಿ ಮಾಡಿ ರಾಣಿಯನ್ನು ತೆಗೆದುಕೊಂಡೆ. ಆಗ ಮತ್ತೆ ಆರ್ಬಿಟರ್ ಎಂದಳು. ಅವರು ಬಂದು ಏನಾಯ್ತು…? ಎಂದಾಗ ಇವರು ಕಾಲಾಳನ್ನು ಕೊನೆಯ ಮನೆಗೆ ಇಟ್ಟು ಆಮೇಲೆ ರಾಣಿಯನ್ನು ತೆಗೆದುಕೊಂಡರು ಎಂದಳು ಅವರು ನಡಿಯುತ್ತೆ ಅಂತ ಹೇಳಿ ಹೋದ್ರು. ಈ ಆಟವನ್ನು ಗೆದ್ದದರಿಂದ ಕೊಂಚ ಸಮಾಧಾನವಾಯಿತು.
ನನ್ನ ಪಕ್ಕದಲ್ಲಿ ಅಂಧ ಕ್ರೀಡಾಪಟುವಿನ ಆಟವನ್ನು ನೋಡಲು ಎಲ್ಲರೂ ಮುಗಿಬಿದ್ದಿದರು. ಕಾರಣ 15 ನಿಮಿಷದ ಜೊತೆಗೆ ಐದು ಸೆಕೆಂಡ್ ಹೆಚ್ಚಿಗೆ ಸಮಯವನ್ನು ನೀಡಿದ್ದರಿಂದ ಎಲ್ಲರೂ ಬೇಗನೆ ಆಟ ಮುಗಿಸಿ ಹೊರಗೆ ಹೋಗುತ್ತಿದ್ದರು.ಅಂಧನು ಆಡುವ ಆಟ ನೋಡಲು ಎಲ್ಲರಿಗೂ ಕುತೂಹಲ ಅವರ ಬೋರ್ಡಿನ ಸುತ್ತಲೂ ಮುಗಿ ಬಿದ್ದಿದ್ದರು. ಕಣ್ಣಿಲ್ಲದವನು ಚೆಸ್ ಆಡುವುದು ಒಂದು ವಿಶೇಷವೇ ಸರಿ,ಅವರಿಗಾಗಿ ಒಂದು ವಿಶೇಷ ಬೋರ್ಡನ್ನು ತಯಾರು ಮಾಡಲಾಗಿರುತ್ತದೆ. ಏನಪ್ಪಾ ಅಂದರೆ ಕಾಯಿಗಳ ಕೆಳಗಡೆ ಮೊಳೆ ಇರುತ್ತವೆ.ಹಾಗೆ ಬೋರ್ಡಿನ 64 ಚೌಕಗಳಿಗೂ ರಂಧ್ರಗಳಿರುತ್ತವೆ. ಉಳಿದಿದ್ದೆಲ್ಲಾ ಒಂದೇ ರೀತಿ. ಅವರು ಆಡುವಾಗ ಪ್ರತಿ ಕಾಯಿಯನ್ನು ಮುಟ್ಟಿ ಎದುರಾಳಿ ಯಾವ ಕಾಯಿಯನ್ನು ಬಿಟ್ಟಿರುತ್ತಾನೆ ಅನ್ನೋದನ್ನ ಮುಟ್ಟಿ ಪರೀಕ್ಷಿಸಿದ ನಂತರ ತಮ್ಮ ನಡೆಯನ್ನು ಬಿಟ್ಟು ಟೈಮರ್ ಅನ್ನು ಒತ್ತಬೇಕು. ಆ ಪಂದ್ಯ ಕೊನೆಗೆ ಬಲು ರೋಚಕತೆಗೆ ಹೋಗಿ ತಲುಪಿತು. ಕಣ್ಣಿಲ್ಲದ ಆಟಗಾರನ ಸಮಯ 30ಸೆಕೆಂಡುಗಳು ಮಾತ್ರ ಉಳಿದಿತ್ತು ಎದುರಾಳಿ ಆಟಗಾರನದು ಆರು ನಿಮಿಷಗಳ ಮೇಲೆ ಸಮಯವಿತ್ತು. ಅವನು ಟೈಮರ್ ಒತ್ತಿದ ಶಬ್ದ ಕೇಳಿಸಿಕೊಂಡು ತನ್ನ ಕಾಯಿ ಚಲಿಸುತಿದ್ದ .ಇದರ ಮಧ್ಯೆ ಟೈಮ್ ಎಷ್ಟಿದೆ ಅಂತ ಆಗಾಗ ಆರ್ಬಿಟರ್ ಹತ್ತಿರ ಕೇಳಿ ತಿಳಿದುಕೊಳ್ಳುತ್ತಿದ್ದ.ಎದುರಾಳಿ ಅನಿಯಂತ್ರಿತ ನಡೆ ಬಿಟ್ಟಿದ್ದರಿಂದ ಒಂದು ನಿಮಿಷ ಕಾಲಾವಕಾಶವನ್ನು ಇವನಿಗೆ ಹೆಚ್ಚಿಗೆ ನೀಡಲಾಯಿತು. ಎದುರಾಳಿ ಕೊನೆಯಲ್ಲಿ ಮತ್ತೊಂದು ಅನಿಯಂತ್ರಿತ ನಡೆಯನ್ನು ಬಿಟ್ಟ ಕಾರಣ ಆಟವನ್ನು ಬಿಟ್ಟುಕೊಡಲಾಯಿತು. ಒಮ್ಮೆ ಯೋಚಿಸಿ…ಕಣ್ಣಿದ್ದವರು ನಾವು ದೃಷ್ಟಿ ಇದ್ದರು ನೋಡಿಯೂ ಕೂಡ ಅನಿಯಂತ್ರಿತ ನಡೆ(Wrong move)ಯನ್ನು ಬಿಟ್ಟೆವು. ಆದರೆ ಕಣ್ಣಿಲ್ಲದವ ಯಾವುದೇ ಅನಿಯಂತ್ರಿತ ನಡೆಯನ್ನು ಬಿಡದೆ ಕೊನೆಯವರೆಗೂ ಹೋರಾಡುತ್ತಾ ವಿಜಯವನ್ನು ಸಾಧಿಸಿದ.ಆತನನ್ನು ಸುತ್ತ ನೆರೆದವರೆಲ್ಲರೂ ಚಪ್ಪಾಳೆಗಳ ಮೂಲಕ ಅಭಿನಂದಿಸಿದರು.
ನಾಲ್ಕನೇ ಸುತ್ತಿನಲ್ಲಿ ನನ್ನ ಪಕ್ಕದಲ್ಲಿ ಇನ್ನೊಂದು ಪಂದ್ಯ ಬಲು ರೋಚಕತೆಯಿಂದಲೇ ನಡೆದಿತ್ತು. ಅವನು ಐದರ ಪೋರ ಎದುರಾಳಿ ಆಟಗಾರ ಸುಮಾರು 45 ರಿಂದ 50 ವರ್ಷದವನು ಇರಬೇಕು. ನಾ ನಿಮಗೆ ಆಗಲೇ ತಿಳಿಸಿದ ಹಾಗೆ ಈ ಆಟಕ್ಕೆ ವಯಸ್ಸಿನ ಹಂಗಿಲ್ಲ ‘ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ’ ಎನ್ನುವ ಹಾಡು ನೆನಪಿಗೆ ಬಂತು. ಎದುರಾಳಿಯು ಎತ್ತರ, ಕುಳ್ಳ, ಬೆಳ್ಳಗೆ, ಕಪ್ಪಗೆ, ದುಂಡಗೆ, ದಪ್ಪಗೆ ಅಂತ ಗಾತ್ರ ಆಕಾರ ನೋಡಿದರೆ ನಾವು ಅಲ್ಲಿ ಅರ್ಧ ಪಂದ್ಯ ಸೋತ ಹಾಗೆ, ಪ್ರತಿಯೊಬ್ಬ ಎದುರಾಳಿಯನ್ನು ನಾವು ಪ್ರಬಲ ಪ್ರತಿಸ್ಪರ್ಧಿಯಾಗಿ ನೋಡಬೇಕು. ಆಟ ಮುಂದುವರೆದಂತೆ ಕೊನೆಗೆ ಆ ಐದರ ಪೋರನ ಹತ್ತಿರ ಒಂದು ರಾಣಿ ಒಂದು ರಾಜ ಇತ್ತು. ಸಮಯ ತುಂಬಾ ಕಡಿಮೆ ಉಳಿದಿತ್ತು, ಎದುರಾಳಿ ಕಡೆಯೂ ಒಂದು ರಾಣಿ ಮತ್ತು ರಾಜ ಉಳಿದ ಕಾರಣ ಆಟ ತುಂಬಾ ಪೈಪೋಟಿಯಿಂದ ಮುಂದುವರೆಯಿತು, ಕೊನೆಗೆ ಡ್ರಾ ಮುಖಾಂತರ ಕೊನೆಗೊಳ್ಳುತ್ತದೆ. ಮತ್ತೆ ಆಟ ನೋಡುವವರಿಂದ ಚಪ್ಪಾಳೆ.
ಈ ಆಟದಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೇನೆಂದರೆ, ಮಗುವಿನ ಜೊತೆ ಬಂದ ತಂದೆ ತಾಯಿಗಳಿಬ್ಬರೂ ಹೆಚ್ಚಾಗಿ ಚೆಸ್ ಆಟವನ್ನು ಆಡುವವರೇ ಆಗಿದ್ದರು.ಜಗತ್ತಿನ ಯಾವ ಆಟವೂ ಕೂಡ ಈ ತರ ಇರಲಿಕ್ಕಿಲ್ಲ. ಯಾಕೆಂದರೆ ಇದು ಯಾರು ಬೇಕಾದರೂ ಆಡಬಹುದಾದ ಆಟ. ಈ ಆಟ ಯಾಕೆ ಇತ್ತೀಚಿಗೆ ಪ್ರಸಿದ್ಧಿಯನ್ನು ಪಡಿತಾ ಇದೆ ಅಂದ್ರೆ ಒಂದು ನಮ್ಮ ಕೈಯಲ್ಲಿರುವ ಮೊಬೈಲ್ ನಾವು ಇಂಟರ್ನೆಟ್ ನಲ್ಲಿ ಕೂಡ ಈ ಆಟವನ್ನು ಬೇರೆ ದೇಶದ ಆಟಗಾರನ ಜೊತೆ ಆಡಬಹುದು ಮೊದಲೇ ಈ ಶತಮಾನದ ನಾವುಗಳು ಮೊಬೈಲ್ ಗೀಳಿಗೆ ಬಿದ್ದವರು ಇನ್ನ ಟೈಮ್ ಪಾಸಿಗೆ ಅಂತ ಮೊಬೈಲ್ ಎತ್ಕೊಂಡರೆ ಈ ಚೆಸ್ ಆಟ ಆಡುವ ಯಾರಾದರೂ ಆನ್ಲೈನ್ ಆಟ ಆಡಿ ಬಿಡುತ್ತಾರೆ. ಎರಡನೇಯದೇನೆಂದರೆ ವಯಸ್ಸಿನ ಹಂಗಿಲ್ಲ ಯಾರು ಬೇಕಾದರೂ ಆಡಬಹುದು. ಬುದ್ಧಿವಂತಿಕೆ ಮತ್ತು ಚುರುಕುತನ ಆಟಕ್ಕೆ ಬಹುಮುಖ್ಯವಾಗಿ ಬೇಕಾದದ್ದು. ಜೊತೆ ಜೊತೆಗೆ ಒಳ್ಳೆಯ ತರಬೇತಿದಾರರು ಇದ್ದರೆ ಇನ್ನೂ ಅನುಕೂಲ. ಹೀಗೆ ಪಂದ್ಯಾವಳಿಯ ಏಳು ಸುತ್ತು ಆಟಗಳು ಮುಗಿಯುವ ಹೊತ್ತಿಗೆ ಸಂಧ್ಯಾಕಾಲ. ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯ್ತು. ವಿಜೇತರ ಪಟ್ಟಿ ತಯಾರಿಸುವ ಕಾರಣ ಕೊಂಚ ತಡವಾಗುವದೆಂದು ಅರಿತ ವ್ಯವಸ್ಥಾಪಕರು ಕಾರ್ಯಕ್ರಮದ ಪೂರ್ವತಯಾರಿ ಕುರಿತು ಮಾತನಾಡುತ್ತ ಚದುರಂಗ ನಡೆದು ಬಂದ ದಾರಿ, ಈ ಆಟಕ್ಕೆ ಬೇಕಾದ ಏಕಾಗ್ರತೆ, ಮತ್ತು ಚುರುಕುತನದ ಕುರಿತು ತಿಳಿಸಿದರು.
ಅವರ ಮಾತುಗಳನ್ನು ಆಲಿಸುತ್ತಾ ಕುಳಿತ ಜಾಗದಲ್ಲೇ ನನ್ನ ಅಂತರಾಳದಲ್ಲಿ ಮೂಡಿದ ಹತ್ತಾರು ಸಾಲುಗಳನ್ನ ಪ್ರಾಸಬದ್ಧವಾಗಿ ಗೀಚಿದೆ.ತಮ್ಮ ಮಾತು ಮುಗಿದ್ಮೇಲೆ ಯಾರಾದ್ರೂ ಅನಿಸಿಕೆ ಹೇಳುವವರು ಇದ್ರೆ ಬನ್ನಿ ಎಂದರು. ನಾನು ಥಟ್ ಅಂತ ಎದ್ದು ಹೋಗಿ, ಚೆಸ್ ಪಂದ್ಯಾವಳಿ, ಕಾರ್ಯಕ್ರಮದ ಸಂಘಟನೆ ಮತ್ತು ಆಯೋಜನೆ ಕುರಿತು ಮಾತನಾಡಿ ನಂತರ ಚದುರಂಗ ಕುರಿತು ಬರೆದ ಕವನವನ್ನು ಓದಿದೆ.ಆಟಗಾರರು ಮತ್ತು ಅವರ ಜೊತೆ ಬಂದ ಪೋಷಕರು ನನ್ನ ಕವನವನ್ನು ಮೂಕವಿಸ್ಮಿತರಾಗಿ ಕೇಳುತ್ತಾ ಪ್ರತಿ ಚರಣಕ್ಕೂ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ನನಗೆ ಪ್ರೋತ್ಸಾಹ ಕೊಟ್ಟರು. ನನ್ನ ಮಾತು ಮುಗಿದ್ಮೇಲೆ ವ್ಯವಸ್ಥಾಪಕರು ಬಂದು ಸರ್ ನಿಮ್ ಹೆಸರೇನು..? ಅಂತ ಕೇಳಿ ನನ್ನ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ನಾನು ಮೇರು ನಟರ ಜೊತೆ ಸಿನಿಮಾನಲ್ಲಿ ನಟಿಸ್ತಿದ್ದೇನೆ ನಿಮಗೇನಾದ್ರು ನನ್ನಿಂದ ಸಹಾಯ ಬೇಕಾದರೆ ಖಂಡಿತ ಮಾಡುವೆ ಅಂತ ಹೇಳಿ ಮತ್ತೊಮ್ಮೆ ಚಪ್ಪಾಳೆ ತಟ್ಟಲು ಹೇಳಿದರು. ಎಲ್ಲರ ಚಪ್ಪಾಳೆಗಳ ಶಬ್ದನಾದದ ಸಂಭ್ರಮದಲ್ಲಿ ಮುಳುಗಿ ಜೋರಾದ ಮಳೆಯಂತೆ ಭಾಸವಾಗಿ ಅವರ ಕರತಾಡನದ ನಡುವೆ ವೇದಿಕೆಯಿಂದಿಳಿದು ಒಂದೊಂದೇ ಹೆಜ್ಜೆ ಹಾಕುತ್ತಾ ಆನಂದ್ ಪಬ್ಲಿಕ್ ಸ್ಕೂಲ್ ಆವರಣದಿಂದ ಹೊರ ನಡೆದೆ.
ನಾನು ಹುಬ್ಬಳ್ಳಿಗೆ ಮರಳಬೇಕಾದ ಕಾರಣ ಮೊದ್ಲೆ ಟಿಕೆಟ್ ಬುಕ್ ಮಾಡಿ ನಾನು ಪ್ರಯಾಣಿಸುವ ಬಸ್ಸಿಗಾಗಿ ಕಾಯುತ್ತ ಕುಳಿತೆ. ಆಗ ಬಸ್ ಚಾಲಕ ನನಗೆ ಕರೆ ಮಾಡಿ ಇನ್ನೂ ಅರ್ಧ ಘಂಟೆ ಲೇಟ್ ಆಗುತ್ತೆ ಸರ್ ಅಂತ ಹೇಳಿದ. ಇನ್ನೇನ್ ಮಾಡೋದು ಅಂತ ಊಟ ಮಾಡ್ಕೊಂಡೆ ಹೋದ್ರಾಯ್ತು ಅಂತ ಒಂದು ಖಾನಾವಳಿ ಹುಡುಕಿ ಬಿಸಿ ಬಿಸಿ ರೊಟ್ಟಿ ಪಲ್ಯ ಜೊತೆ ಸಿಂಧನೂರು ಸ್ಪೆಷಲ್ ಅಂತ ಖಾರವಾಗಿದ್ರು, ನಾಲಿಗೆಗೆ ರುಚಿ ತರ್ಸೋ ಸಾಂಬಾರ್ ಜೊತೆ ಸ್ವಲ್ಪ ಅನ್ನ ಸವಿದೆ. ಅಷ್ಟ್ರಲ್ಲಿ ನಾನು ಹೊರಡೋ ಬಸ್ ಬಂದು ಬಸ್ನಲ್ಲಿ ನನ್ ಸೀಟ್ಗೆ ಹೋಗಿ ಕುಳಿತೆ. ಬಸ್ಸು ಹೊರಡೋಕೆ ಶುರು ಆಯ್ತು… ಬಸ್ಸಿನ ಚಕ್ರ ತಿರುಗ್ತಾ ದಾರಿ ಸಾಗ್ತಾ ಸಾಗ್ತಾ ನಾನು ಹೂಬಳ್ಳಿ ಇಂದ ಭತ್ತದ ಕಣಜದ ನಾಡಿಗೆ ಬಂದದ್ದು,
ಚೆಸ್ ಆಟ, ಸೋಲು – ಗೆಲುವು ಸಿಂಧನೂರು ಜನರ ಮುಗ್ಧತೆ,
ದೂರದ ಊರಿಂದ ಬಂದವರ ಬಗ್ಗೆ ಅವರು ತೋರಿಸೋ ಆಧರತೆಗೆ ಮನ ಕರಗಿ ಇಬ್ಬನಿಯಂತಾಗಿ… ತನು ಉಯ್ಯಾಲೆಯಂತೆ ತೂಗಿ ನಿದ್ದೆಗೆ ಜಾರಿದೆ.
✍️ ಮೈಲಾರಲಿಂಗ ಕಬ್ಬೂರ
ಧಾರವಾಡ