ಅದಮ್ಯ ಸ್ಫೂರ್ತಿ ಮತ್ತು ತಂತ್ರಜ್ಞಾನ ನಿಪುಣೆ….. ಜಿ. ಮಾಧವಿ ಲತಾ

ಅದಮ್ಯ ಸ್ಫೂರ್ತಿ ಮತ್ತು ತಂತ್ರಜ್ಞಾನ ನಿಪುಣೆ….. ಜಿ. ಮಾಧವಿ ಲತಾ

 

 

 

 

 

 

 

 

 

 

 

ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ ಜಮ್ಮು ಕಾಶ್ಮೀರದ ರಜಾಯಿ ಜಿಲ್ಲೆಯ ಚೆನಾಬ್ ನದಿಗೆ ಕಟ್ಟಿದ ಅತಿ ದೊಡ್ಡ
ಕಮಾನು ಸೇತುವೆ ಇಡೀ ಜಗತ್ತಿನಲ್ಲಿ ಆರ್ಕಿಟೆಕ್ಟ್ ತಂತ್ರಜ್ಞಾನದ ವಿಸ್ಮಯವಾಗಿ ಗುರುತಿಸಲ್ಪಟ್ಟಿದೆ.

ಕಣಿವೆ ರಾಜ್ಯವಾದ ಕಾಶ್ಮೀರದ ಬಾರಾಮುಲ್ಲಾ ಶ್ರೀನಗರ ಮತ್ತು ಉದಂಪುರ್ ನಗರಗಳನ್ನು ಸೇರಿಸುವ ಒಟ್ಟು ಇನ್ನೂರೆಪ್ಪತ್ತೆರಡು ಕಿಲೋಮೀಟರ್ ಉದ್ದದ ರೈಲು ಮಾರ್ಗದಲ್ಲಿ ಒಂದು ಕಾಲು(1 1/4) ಕಿಲೋ ಮೀಟರ್ಗಿಂತ ಹೆಚ್ಚು ಉದ್ದವಾದ ಸೇತುವೆಯ ಎತ್ತರ 350 ಮೀಟರ್ಗಿಂತಲೂ ಹೆಚ್ಚಿದ್ದು ಸೇತುವೆಯ ಒಟ್ಟು ನಿರ್ಮಾಣ ವೆಚ್ಚ 14 ನೂರು ಕೋಟಿಗಿಂತಲೂ ಹೆಚ್ಚು. ಕಣಿವೆ ರಾಜ್ಯದ ಜನರ ಜೀವನ ಶೈಲಿಯಲ್ಲಿ ಮತ್ತು ಗತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವುದರಲ್ಲಿ ಅಚ್ಚರಿಯಿಲ್ಲ.

ಪ್ರತಿ ಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ಸೇತುವೆಯು 120 ವರ್ಷಗಳ ಕಾಲ ಬಳಸಲು ಯೋಗ್ಯವಾದುದು. ಗಂಟೆಗೆ 260 ಕಿಲೋಮೀಟರ್ ವೇಗದ ಗಾಳಿಯನ್ನು ತಡೆಯುವ ಶಕ್ತಿಯನ್ನು ಹೊಂದಿರುವ ಈ ಸೇತುವೆಯು ಭೂಕಂಪ ನಿರೋಧಕವಾಗಿದ್ದು ರಿಕ್ಟರ್ ಮಾಪನದಲ್ಲಿ ಗರಿಷ್ಟ 8ರವರೆಗಿನ ಭೂಕಂಪವನ್ನು ತಡೆಯುವ ಶಕ್ತಿಯನ್ನು ಹೊಂದಿದೆ.

ಬಾಂಬ್ ಸ್ಪೋಟ ನಿರೋಧಕ ಸೇತುವೆ ಕೂಡ ಇದಾಗಿದೆ. ಅತ್ಯಂತ ದೃಢವಾದ ಮತ್ತು ಆಕರ್ಷಕವಾದ ಈ ಸೇತುವೆಯ ನಿರ್ಮಾಣ ಆಧುನಿಕ ತಂತ್ರಜ್ಞಾನಕ್ಕೆ ಸವಾಲೆಸೆಯುವಂತಿದೆ. ಹಿಮಾಲಯದ ಆಳವಾದ ಕಣಿವೆಯಲ್ಲಿ ಕವಲೊಡೆದು ಧಾರೆಗಳಾಗಿ ಹರಿಯುವ ಚೆನಾಬ್ ನದಿಗೆ ಕಟ್ಟಿರುವ ಸೇತುವೆಯು ಮಾನವನ ಮಹತ್ವಾಕಾಂಕ್ಷೆಯ ಬಾಹುಗಳನ್ನು ವಿಶಾಲವಾಗಿ ಚಾಚಿದಂತೆ ತೋರುತ್ತಿದ್ದು ಜಗತ್ತಿನ ಅತಿ ಎತ್ತರದ ರೈಲು ಸೇತುವೆ ಎಂದು ಗುರುತಿಸಲ್ಪಟ್ಟಿದೆ.

ಈ ದಿಟ್ಟ ಸಾಧನೆಯ ಹಿಂದೆ ಕೇವಲ ತಂತ್ರಜ್ಞಾನ ಮಾತ್ರ ಕಾರ್ಯನಿರ್ವಹಿಸಿಲ್ಲ ಬದಲಾಗಿ ದೃಢತೆ, ದೃಷ್ಟಿಕೋನ ಮತ್ತು ಧೈರ್ಯದ ಯಶೋಗಾಥೆಯೇ ಇದೆ…..ಅದುವೇ ಪ್ರೊಫೆಸರ್ ಎ ಎಸ್ ಮಾಧವಿ ಲತಾ ಎಂಬ ಮಹಿಳೆ.

ಸಿವಿಲ್ ಇಂಜಿನಿಯರಿಂಗ್ ನ ಒಂದು ಭಾಗವಾದ ಭೂಗರ್ಭದ ಕುರಿತಾದ ತಾಂತ್ರಿಕತೆಯ ವಿಶೇಷ ಶಾಖೆಯಲ್ಲಿ ಪರಿಣತರಾದ ಆಕೆಯ ಅತ್ಯಂತ ತಾಳ್ಮೆ, ದೃಢವಾದ ತಾಂತ್ರಿಕ ನಿರ್ಣಯಗಳು ಮತ್ತು ಆಕೆಯ ಜಾಣ್ಮೆ ಈ ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿದ್ದು ಎಂದರೆ ಅಚ್ಚರಿಯೇನಲ್ಲ.

ಯಾರು ಈ ಪ್ರೊಫೆಸರ್ ಮಾಧವಿ ಲತಾ?

ಆಂಧ್ರಪ್ರದೇಶದ ಯದುಗುಂಡ್ಲಪಾಡು ಎಂಬ ಪುಟ್ಟ ಹಳ್ಳಿಯ ಆಕೆ 1992ರಲ್ಲಿ ಕಾಕಿನಾಡದ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರ್ ವಿಭಾಗದ ಬಿ ಟೆಕ್ ಅನ್ನು ಪ್ರಥಮ ಶ್ರೇಣಿಯಲ್ಲಿ ಪೂರೈಸಿದರು. ನಂತರ ವಾರಂಗಲ್ ನ
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಎಂ ಟೆಕ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದರು. 2000 ದಲ್ಲಿ ಮದ್ರಾಸ್ (ಚೆನ್ನೈ)ನ ಐಐಟಿಯಲ್ಲಿ ಜಿಯೋ ಟೆಕ್ನಿಕಲ್ ವಿಭಾಗದಲ್ಲಿ ಪಿ ಹೆಚ್ ಡಿ ಪದವಿಯನ್ನು ಪೂರೈಸಿ ಡಾಕ್ಟರೇಟ್ ಪದವಿಯನ್ನು ಪಡೆದರು. ನಂತರ 2003 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು.

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ(IISc) ಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮಾಧವಿ ಲತಾ ಅವರು ಸಿವಿಲ್ ಇಂಜಿನಿಯರಿಂಗ್ ನ ಶಾಖೆಯಾದ ಜಿಯೋ ಟೆಕ್ನಿಕಲ್ ಇಂಜಿನಿಯರಿಂಗ್ನ ನುರಿತ ಗೌರವಾನ್ವಿತ ಇಂಜಿನಿಯರಿಂಗ್ ತಂತ್ರಜ್ಞಾನಿಯಾಗಿದ್ದು ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮಂಚೂಣಿ ನಾಯಕರಲ್ಲಿ ಧ್ರುವತಾರೆಯಂತೆ ಮಿನುಗುತ್ತಿದ್ದಾರೆ ಎಂದರೆ ತಪ್ಪಿಲ್ಲ.
.
ಇಳಿಜಾರು ಸ್ಥಿರತೆ ಮತ್ತು ಮಣ್ಣು ರಚನೆಯ ಪರಸ್ಪರ ಕ್ರಿಯೆಯ ತಂತ್ರಜ್ಞಾನ ನೈಪುಣ್ಯತೆಯನ್ನು ಹೊಂದಿರುವ ಆಕೆ ಭೂಮಿಯ ತಾಂತ್ರಿಕ ಸಂಶೋಧನೆಯ ಹಲವಾರು ವಿಷಯಗಳಲ್ಲಿ ನಿರ್ಣಾಯಕ ಸಲಹೆಗಾರರಾಗಿ ಹಲವಾರು ಅತಿ ದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದು ಅವುಗಳಲ್ಲಿ ಚೆನಾಬ್ ಸೇತುವೆಯೂ ಒಂದು.

ಅದರಲ್ಲೂ ಚೆನಾಬ್ ಸೇತುವೆ ಯೋಜನೆಯ ಭೂಮಿಯ ಮೌಲ್ಯಮಾಪನ ಇಳಿಜಾರಿನ ಸ್ಥಿರತೆ ಮತ್ತು ಬುನಾದಿಯ ವಿನ್ಯಾಸದಂತಹ ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಆಕೆಯ ಸಲಹೆ ಮತ್ತು ಕಾರ್ಯವೈಖರಿ ಅತ್ಯಂತ ನಿರ್ಣಾಯಕವಾಗಿತ್ತು. ಜಗತ್ತಿನಲ್ಲಿಯೇ ಅತ್ಯಂತ ಸಂಕೀರ್ಣವಾದ ಭೂವೈಜ್ಞಾನಿಕ ಸಂರಚನೆಗಳನ್ನು ಹೊಂದಿರುವ ಸೇತುವೆಯ ನಿರ್ಣಾಯಕ ಘಟಕಗಳನ್ನು ಜೋಡಿಸುವಲ್ಲಿ ಅತ್ಯವಶ್ಯಕವಾದ ನೈಪುಣ್ಯತೆ ಮಾಧವಿ ಲತಾ ಅವರಲ್ಲಿತ್ತು.

ಸದ್ದಿಲ್ಲದೆ ಕಾರ್ಯನಿರ್ವಹಿಸುವ ಪ್ರೊಫೆಸರ್ ಮಾಧವಿ ಲತಾ ಅವರು ಎಂದೂ ಪತ್ರಿಕೆಯ ಮುಖಪುಟಗಳಲ್ಲಿ ಕಾಣಿಸಿಕೊಂಡಿಲ್ಲ. ದಶಕಗಳ ಕಾಲ ಅತ್ಯಂತ ಶಾಂತವಾಗಿ ಭೂ ವೈಜ್ಞಾನಿಕ ತಂತ್ರಜ್ಞಾನದ ಆಳ,ಅಗಲ, ಮಿತಿಗಳನ್ನು ಅರಿತಿರುವ ಆಕೆ ಭೂಮಿ, ಕಡಿದಾದ ಕಲ್ಲು ಬಂಡೆಗಳು ಮತ್ತು ನಿಶ್ಚಿತವಲ್ಲದ ಭೂಪ್ರದೇಶಗಳ ಮೇಲೆ ಅತ್ಯಂತ ಸುರಕ್ಷಿತವಾದ ನಿರ್ಮಾಣಗಳನ್ನು ಮಾಡುವಲ್ಲಿ ನಿರತರಾದವರು.

ಭಾರತೀಯ ರೈಲ್ವೆ ಪ್ರಾಧಿಕಾರವು ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಉಧಮ್ ಪುರ, ಶ್ರೀನಗರ ಮತ್ತು ಬಾರಾಮುಲ್ಲಾ ರೈಲ್ ಲಿಂಕ (USBRL) ಯೋಜನೆಯನ್ನು ಆರಂಭಿಸಿದಾಗ ಫ್ರಾನ್ಸ್ ನ ಐಫೆಲ್ ಟವರ್ಗಿಂತಲೂ ಎತ್ತರವಾದ ಸುಮಾರು 359 ಮೀಟರ್ ಎತ್ತರದ ಸೇತುವೆಯನ್ನು ಚೆನಾಬ್ ನದಿಗೆ ಕಟ್ಟುವ ಯೋಜನೆಯನ್ನು ರೂಪಿಸಿತು. ಸಾಂಪ್ರದಾಯಿಕ ಇಂಜಿನಿಯರಿಂಗ್ ತಂತ್ರಜ್ಞಾನಕ್ಕಿಂತ ತುಸು ಹೆಚ್ಚಿನ ತಂತ್ರಜ್ಞಾನದ ಅರಿವನ್ನು ಹೊಂದಿರುವ ನಿಪುಣ ತಜ್ಞರ ಅವಶ್ಯಕತೆ ರೈಲ್ವೆ ಪ್ರಾಧಿಕಾರಕ್ಕೆ ಇತ್ತು. ಧೈರ್ಯ, ಜಾಣ್ಮೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪರಿಮಿತ ನಂಬಿಕೆಯನ್ನು ಹೊಂದಿರುವ ದೃಢ ವ್ಯಕ್ತಿತ್ವದವರು ಬೇಕಾಗಿತ್ತು. ಆ ಕಾರಣದಿಂದಲೇ ಮಾಧವಿಲತಾ ಅವರನ್ನು ತಜ್ಞ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಲಾಯಿತು.

ಜನರ ನಿರಂತರವಾದ ಪ್ರಶ್ನೆ ಅ ಭೂ ಪ್ರದೇಶ ಕುಸಿದರೆ ಏನು ಮಾಡುತ್ತೀರಿ? ಗಾಳಿಯ ಹೊಡೆತಕ್ಕೆ ಸೇತುವೆ ತಲೆಕೆಳಗಾದರೆ ಏನು ಮಾಡುತ್ತೀರಿ ಎಂದೆಲ್ಲ ಹೇಳುತ್ತಿದ್ದ ಜನರಿಗೆ ಆಕೆ ದಿಟ್ಟವಾಗಿ ಕೊಡುತ್ತಿದ್ದ ಉತ್ತರ ಒಂದೇ. ಈ ವಿಷಯದಲ್ಲಿ ನಾವು ಯಶಸ್ವಿಯಾಗುವುದಿಲ್ಲ ಎಂದು ನೀವೇಕೆ ಭಾವಿಸುತ್ತೀರಿ? ಒಂದು ವೇಳೆ ನಾವು ಯಶಸ್ವಿಯಾದರೆ ಎಂದು ತಮಗೆ ಕೇಳಿದವರನ್ನು ಮರು ಪ್ರಶ್ನಿಸುತ್ತಿದ್ದರು.

ಸೇತುವೆ ಉದ್ಘಾಟನೆಯಾಗಿ ಲೋಕಾರ್ಪಣೆಗೊಂಡ ನಂತರ ಮಾಧವಿ ಲತಾ ಅವರನ್ನು ಈ ವಿಷಯದ ಕುರಿತು ಪ್ರಶ್ನಿಸಿದಾಗ ತುಂಬಾ ಕೊರಕಲುಗಳು ಮತ್ತು ಅತ್ಯಂತ ಕಡಿಮೆ ಗುಣಮಟ್ಟದ ಬಂಡೆಗಲ್ಲುಗಳು ಅಲ್ಲಿದ್ದು ಬಂಡೆಗಲ್ಲುಗಳ ಒಳಗೆ ಇರಬಹುದಾದ ಕುಳಿಗಳು ಹೀಗೆ ಹತ್ತು ಹಲವು ವಿಷಯಗಳ ಕುರಿತು ತಾಂತ್ರಿಕ ಅರಿವನ್ನು ಹೊಂದಿದ್ದು ಹಲವಾರು ಬಂಡೆಗಲ್ಲುಗಳ ನಡುವಿರುವ ಕುಳಿಗಳನ್ನು ದುರಸ್ತಿ ಮಾಡದೆ ಹೋದರೆ ಭೂಕುಸಿತ ಉಂಟಾಗುವ ಸಂಭವ ಇರುತ್ತಿತ್ತು ಆದ್ದರಿಂದ ಎಲ್ಲ ಕುಳಿಗಳನ್ನು ಗ್ರೌಟಿಂಗ ವ್ಯವಸ್ಥೆಯ ಮೂಲಕ ಸಿಮೆಂಟ್ ಅನ್ನು ತುಂಬಿ ಗಟ್ಟಿಗೊಳಿಸಲಾಯಿತು. ಬಂಡೆಗಳು ಬೀಳದಂತೆ ತಡೆಯಲು ಅತ್ಯಂತ ಬಲಿಷ್ಠವಾದ ಉಕ್ಕಿನ ಲಂಗರಗಳನ್ನು ಬಳಸಲಾಗಿದೆ. ಸೇತುವೆಯ ಸಾಮರ್ಥ್ಯವನ್ನು ಹೆಚ್ಚಿಸಲು ಪದೇಪದೇ ಯೋಜನೆಗಳನ್ನು ಬದಲಾಯಿಸಬೇಕಾದ ಕಾರಣ ಮುಂದುವರೆಯುವ ವಿನ್ಯಾಸ ಮಾದರಿಯನ್ನು ಅನುಸರಿಸಿದ ವಿಷಯವನ್ನು ಅವರು ವಿವರಿಸಿದರು.

ಮಾಧವಿ ಲತಾ ಮತ್ತು ಅವರ ತಂಡವು ತಿಂಗಳಾನುಗಟ್ಟಲೆ ಅತ್ಯಂತ ವ್ಯತಿರಿಕ್ತ ಪರಿಸ್ಥಿತಿಗಳಲ್ಲಿಯೂ ಲಿಂಗ ವ್ಯತ್ಯಾಸವಿಲ್ಲವೇ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ಇಂದು ಇಡೀ ಜಗತ್ತಿನಲ್ಲಿ ಅತಿ ದೊಡ್ಡ ಕಮಾನು ಸೇತುವೆಯೊಂದು ಭಾರತದ ಇಂಜಿನಿಯರಿಂಗ್ ತಂತ್ರಜ್ಞಾನದ ಹೆಮ್ಮೆಯನ್ನು ಜಗತ್ತಿಗೆ ಸಾರುತ್ತ ಭವ್ಯವಾಗಿ ತಲೆ ಎತ್ತಿ ನಿಂತಿದೆ.

ಕಮಾನು ಸೇತುವೆಗೆ 476 ಮೀಟರ್ ಅಳತೆಯು ಭೂಮಿಯ ಸ್ಥಿರತೆಗೆ ಸರಿ ಸಮನಾಗಿ ನೂರಾರು ವರ್ಷ ಯಾವುದೇ ರೀತಿಯ ಗಾಳಿ ಮಳೆ ಬಿರುಗಾಳಿ ಭೂಕಂಪಗಳಿಗೆ ಬೆದರದಂತಹ ತಾಳಿಕೆ ಬರುವಂತಹ ಭದ್ರವಾದ ಕಮಾನು ಸೇತುವೆಯ ನಿರ್ಮಾಣ ಕಾರ್ಯಕ್ಕೆ ಒತ್ತು ನೀಡಿದ್ದು ಪ್ರಸ್ತುತ ಚೆನಾಬ್ ಸೇತುವೆಯು ಅತ್ಯದ್ಭುತವಾದ ಬುನಾದಿಯನ್ನು ಹೊಂದಿದ್ದು ಇದರ ಮೇಲಿರುವ ಸೇತುವೆ ಭವ್ಯವಾಗಿ ತಲೆ ಎತ್ತಿ ನಿಲ್ಲಲು ಕಾರಣವಾಗಿದ್ದು ಈ ಭೂಮಿಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಭೂಮಿಯ ಪಿಸು ಮಾತನ್ನು ಕೇಳಿ ಪ್ರತಿಯೊಂದು ತಿರುಪನ್ನು ಸರಿಯಾಗಿ ಜೋಡಿಸಿದ ತಾಂತ್ರಿಕ ನಿಪುಣರು.

ಅಂತಿಮವಾಗಿ ಚೆನಾಬ್ ನದಿಯ ಕಮಾನು ಸೇತುವೆ ತಯಾರಾಗಿದ್ದು ಇನ್ನೇನು ರೈಲುಗಳು ಓಡಾಡುತ್ತವೆ ಮತ್ತು ಜನರ ಜೀವನವನ್ನು ಜೋಡಿಸುತ್ತದೆ.

ಮಾಧವಿ ಲತಾ ಎಂಬ ಇಂಜಿನಿಯರಿಂಗ್ ತಂತ್ರಜ್ಞಾನ ಪರಿಣತ ವ್ಯಕ್ತಿ ಸೇತುವೆಗಳು ಕೇವಲ ಉಕ್ಕು ಮತ್ತು ಕಬ್ಬಿಣದಂತಹ ವಸ್ತುಗಳಿಂದ ಮಾತ್ರ ನಿರ್ಮಿಸಲ್ಪಡುವುದಿಲ್ಲ ಬದಲಾಗಿ ತೀವ್ರ ದೂರದೃಷ್ಟಿ, ದೃಢ ನಿಶ್ಚಯ ಮತ್ತು ಅದಮ್ಯ ಮಾನವೀಯ ಸ್ಪೂರ್ತಿಯಿಂದ ನಿರ್ಮಿಸಲ್ಪಡುತ್ತವೆ.

ಭಾರತ ಮಾತೆಯ ಮಡಿಲಿನ ಅನರ್ಘ್ಯ ರತ್ನ ಮಾಧವಿ ಲತಾ ಮತ್ತು ತಂಡಕ್ಕೆ ಶುಭಾಶಯಗಳು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!