ಸಕಾರಾತ್ಮಕ ಚಿಂತನೆ…ಒಂದು ವಿವೇಚನೆ
ಯಾರಾದರೂ ತಪ್ಪಾಗಿ ವರ್ತಿಸಿದಾಗ ಹಿರಿಯರು ಅವರನ್ನು ಖಂಡಿಸುತ್ತಾರೆ, ಯಾರಾದರೂ ಅಪಶಕುನದ ಮಾತನಾಡಿದಾಗ ಹಿರಿಯರು ಅವರಿಗೆ ಒಳಿತು ಎನ್ನು ಎಂದೋ ಇಲ್ಲವೇ ತಪ್ಪಾಯ್ತು ಎಂದು ಗಲ್ಲ ಗಲ್ಲ ಬಡಿದುಕೊಳ್ಳಲು ಹೇಳುತ್ತಾರೆ. ಹೀಗೆ ಹೇಳಲು ಅವರು ಕೊಡುವ ಕಾರಣ ನಮ್ಮ ಸುತ್ತಮುತ್ತ ಅಸ್ತು ದೇವತೆಗಳು ಇದ್ದು ನಾವು ಆಡುವ ತಪ್ಪು ಮಾತಿಗೂ ಅಸ್ತು ಎಂದರೆ ಅದು ನಮ್ಮ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು ಎಂಬ ಸಾತ್ವಿಕ ಭಯ.
ನಾವು ಸದಾ ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರಬೇಕು. ಒಳ್ಳೆಯದನ್ನು ಮಾತನಾಡಿದಾಗ ಒಳ್ಳೆಯದನ್ನು ಯೋಚಿಸಿದಾಗ ನಮಗೆ ಒಳ್ಳೆಯದೇ ಆಗುತ್ತದೆ ಎಂಬ ಚಿಂತನೆ. ಇದು ನಿಜವೂ ಹೌದು ಯಾವ ರೀತಿ ನಾವು ಪರ್ವತಗಳ ಸಮುಚ್ಚಯದ ನಡುವೆ ಜೋರಾಗಿ ಕೂಗಿದಾಗ ನಮಗೆ ನಮ್ಮದೇ ಮಾತಿನ ಪ್ರತಿಧ್ವನಿ ಮರಳಿ ದೊರೆಯುತ್ತದೆಯೋ ಅಂತೆಯೇ ನಮ್ಮ ಯೋಚನೆಗಳಿಂದಾಗಿ ನಮ್ಮ ನಡವಳಿಕೆಯ ಪ್ರತಿಧ್ವನಿಗಳು ನಮಗೆ ದೊರೆಯುತ್ತವೆ. ಇದೊಂದು ರೀತಿ ಆಕಾಶಕ್ಕೆ ಮುಖ ಮಾಡಿ ಉಗುಳಿದ ಹಾಗೆ. ಹಿಂದಿಯಲ್ಲಿ “ಜೈಸಿ ಕರನಿ ವೈಸಿ ಭರನಿ” ಎಂದು ಹೇಳಿದರೆ ಕನ್ನಡದಲ್ಲಿ ‘ಮಾಡಿದ್ದುಣ್ಣೋ ಮಹಾರಾಯ’ ಎಂದು ಹೇಳುತ್ತಾರೆ. ಪಂಡಿತ ಪಾಮರರ ಭಾಷೆಯಲ್ಲಿ ಇದು ಕರ್ಮಫಲ ಎಂದು ಗುರುತಿಸಲ್ಪಡುತ್ತದೆ. ನಾವು ಮಾಡಿದ ಕರ್ಮವನ್ನು ನಾವೇ ಅನುಭವಿಸಬೇಕು ಎಂಬುದು ಇದರ ಅರ್ಥ.
ಸಕಾರಾತ್ಮಕ ವಿಚಾರಗಳು ನಮ್ಮ ಮನಸ್ಸನ್ನು ಸದಾ ಉಲ್ಲಸಿತವಾಗಿ ಇಡುತ್ತವೆ.ಒಂದೇ ವಯಸ್ಸಿನ ಇಬ್ಬರು ವ್ಯಕ್ತಿಗಳಲ್ಲಿ ಸಕಾರಾತ್ಮಕ ಯೋಚನೆಗಳನ್ನುಳ್ಳ ವ್ಯಕ್ತಿ ತನಗೆ ಬರುವ ಎಲ್ಲಾ ತೊಂದರೆಗಳನ್ನು ಸವಾಲಿನಂತೆ ಸ್ವೀಕರಿಸಿ ತನ್ನ ವಯಸ್ಸಿಗೆ ಆ ರೀತಿಯ ತೊಂದರೆ ಬರುವುದು ಸಹಜ ಎಂದು ಸ್ವೀಕರಿಸುವುದರಿಂದ ನೋವಿದ್ದರೂ ಅದನ್ನು ಒಪ್ಪಿ ಅಪ್ಪಿಕೊಳ್ಳುವುದರಿಂದ ಎಂತದ್ದೇ ನೋವಿದ್ದರೂ ಅದು ಆತನಿಗೆ ಸಹ್ಯವಾಗಿ ತೋರುತ್ತದೆ. ತನ್ನ ಬದುಕಿನಲ್ಲಿ ಬರುವ ಎಲ್ಲಾ ಸಂಗತಿಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುವ ಆ ವ್ಯಕ್ತಿ ಯಾವುದಕ್ಕೂ ಗೊಣಗುವುದಿಲ್ಲ. ತಮ್ಮ ಚಿತ್ತತೆಯಿಂದ ಬದುಕನ್ನು ಸ್ವೀಕರಿಸುತ್ತಾನೆ. ತಾನು ಅನುಭವಿಸುವ ಯಾವುದೇ ತೊಂದರೆಗಳಿಗೆ ಯಾರನ್ನೂ ದೋಷಿಯನ್ನಾಗಿಸುವುದಿಲ್ಲ, ಆದರೆ ನಕಾರಾತ್ಮಕ ವ್ಯಕ್ತಿ ಪುಟ್ಟ ತಲೆನೋವಿಗೂ ಗುಡ್ಡ ಕಡಿದು ಬಿದ್ದಂತೆ ಆಡುತ್ತಾನೆ. ಎಲ್ಲವೂ ತನಗೆ ಮಾತ್ರ ಆಗುತ್ತದೆ. ಎಲ್ಲ ತೊಂದರೆಗಳು ತನ್ನನ್ನೇ ಹುಡುಕಿ ಬರುತ್ತವೆ . ತನಗೇ ಎಲ್ಲಾ ನೋವು, ನಿರಾಶೆಗಳು ಎಂಬ ಭಾವ ಆತನನ್ನು ಕಾಡುತ್ತವೆ. ಇನ್ನು ತನಗೆ ಏನಾದರೂ ಒಳ್ಳೆಯದಾಗುವುದಿದ್ದರೆ ಅದನ್ನು ಕೆಡಿಸಲು ನೂರಾರು ಜನ ದುಷ್ಟರು ಇರುತ್ತಾರೆ ಎಂಬ ಭಾವ ಅವರನ್ನು ಶಾಂತವಾಗಿ ಇರಲು ಬಿಡುವುದೇ ಇಲ್ಲ. ಎಲ್ಲರನ್ನು ಸಂಶಯದ ದೃಷ್ಟಿಯಿಂದ ನೋಡುವ ಅವರು ತಾವೂ ಸುಖವಾಗಿರುವುದಿಲ್ಲ ಬೇರೆಯವರನ್ನು ಕೂಡ ಸುಖವಾಗಿರಲು ಬಿಡುವುದಿಲ್ಲ. ಎಲ್ಲವೂ ತಮ್ಮ ಮೂಗಿನ ನೇರಕ್ಕೆ ಆಗಬೇಕು ಎಂಬುದು ಅವರ ಬಯಕೆ ಆಗಿರುತ್ತದೆ. ಬೇರೆಯವರು ಏನೆಂದುಕೊಳ್ಳಬಹುದು ಎಂಬ ಕಿಂಚಿತ್ ಯೋಚನೆಯನ್ನು ಮಾಡದೆ ಮುಖಕ್ಕೆ ರಾಚಿದಂತೆ ಹೇಳಿಬಿಡುವ ಅವರು ತಮ್ಮ ಒರಟು ವ್ಯಕ್ತಿತ್ವದಿಂದ ಬೇರೆಯವರ ಅಸಂತೋಷಕ್ಕೆ ತಾವು ಕಾರಣವಾಗುತ್ತೇವೆ ಎಂಬುದನ್ನು ಕೂಡ ತಿಳಿದುಕೊಳ್ಳದೆ ನಾವಿರುವುದೇ ಹೀಗೆ ಎಂಬಂತೆ ವರ್ತಿಸುತ್ತಾರೆ.
ಆದರೆ ಸಕಾರಾತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ. ಎಲ್ಲ ಋಣಾತ್ಮಕ ವಿಚಾರಗಳನ್ನು ಒತ್ತಟ್ಟಿಗೆ ಇಟ್ಟಾಗ ಧನಾತ್ಮಕ ವಿಚಾರಗಳು ನಮ್ಮನ್ನು
ಸೇರುತ್ತವೆ. ಇಂತಹ ಸಕಾರಾತ್ಮಕ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಳ್ಳಲು ನಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯವಂತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇಹದ ಆರೋಗ್ಯಕ್ಕೆ ಯೋಗ, ವ್ಯಾಯಾಮ, ನಡಿಗೆಗಳನ್ನು ನಮ್ಮ ದೈನಂದಿನ ಬದುಕಿನ ಭಾಗವಾಗಿಸಿಕೊಳ್ಳಬೇಕು. ಮನಸ್ಸಿನ ವ್ಯಾಯಾಮಕ್ಕೆ ಪ್ರಾಣಾಯಾಮ, ಧ್ಯಾನ, ದೈವ ದರ್ಶನ, ಭಜನೆ, ಆತ್ಮೀಯ ಸ್ನೇಹಿತರೊಂದಿಗೆ ನಾವು ಒಡನಾಟ ಗಳಲ್ಲಿ ತೊಡಗಿಸಿಕೊಳ್ಳಬೇಕು.ಸುಂದರವಾದ ಸೂರ್ಯಾಸ್ತ ಮತ್ತು ಸೂರ್ಯೋದಯಗಳು ಕೂಡ ನಮ್ಮ ಮನಸ್ಸಿಗೆ ಮುದ ನೀಡಬಲ್ಲವು. ಪ್ರಕೃತಿಯಲ್ಲಿನ ನೀರು,ಮಣ್ಣು,ಆಕಾಶ ಗಾಳಿಯಂತಹ ಪಂಚಭೂತಗಳ ಜೊತೆಗಿನ ಒಡನಾಟ ಕೂಡ ನಮಗೆ ಸಂತೃಪ್ತಿಯನ್ನು ತರುತ್ತದೆ. ವಿಶಾಲವಾದ ಬಯಲು ಪ್ರದೇಶದಲ್ಲಿ, ಹೊಲಗದ್ದೆಗಳ ಬದುವಿನಲ್ಲಿ, ನದಿ ತೀರದಲ್ಲಿ ಜುಳು ಜುಳು ಹರಿಯುವ ನೀರಿನ ನಿನಾದ, ಗಾಳಿಯ ಮರ್ಮರ ಶಬ್ದ, ಹಕ್ಕಿ ಪಕ್ಷಿಗಳ ಕಲರವ, ಪಶುಗಳ ಕೂಗು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಬಲ್ಲದು.
ಮೂಲತಃ ಮನುಷ್ಯ ಸಮಾಜ ಜೀವಿಯಾಗಿರುವುದರಿಂದ ಪ್ರಕೃತಿ ಮತ್ತು ಜನರ ಜೊತೆಗಿನ ಒಡನಾಟದಲ್ಲಿ ತನ್ನ ಆತ್ಮೀಯತೆಯನ್ನು ಕಂಡುಕೊಳ್ಳುವ ವ್ಯಕ್ತಿ ಪರಿಸರದ ಸಕಾರಾತ್ಮಕ ನೀಡುವಿಕೆಗೆ ತಾನು ಕೂಡ ಪ್ರತಿಕ್ರಿಯಿಸುತ್ತಾನೆ.
ಸದಾ ತಲೆನೋವು ಮೈ ಕೈ ನೋವು, ಸೊಂಟ ನೋವು ಎಂದು ಒಂದಿಲ್ಲೊಂದು ನೋವುಗಳನ್ನು ದೇಹದಲ್ಲಿ ಇವೆ ಎಂದು ಉದಾಸೀನ ಮನೋಭಾವದಿಂದ, ನೋವಿನಿಂದ ಜೀವಿಸುವುದಕ್ಕಿಂತ ಆ ನೋವುಗಳನ್ನು
ಮೆಟ್ಟಿ ನಿಲ್ಲುವ ಅವುಗಳ ಕುರಿತು ತಲೆ ಕೆಡಿಸಿಕೊಳ್ಳದೆ ನಗುನಗುತ್ತಾ ಜೀವಿಸಬೇಕು. ಸಂತೋಷ, ನಗು ಮತ್ತು ಪ್ರೀತಿ ತುಂಬಿದ ವಾತಾವರಣದಲ್ಲಿ ಮನಸ್ಸು ಉಲ್ಲಾಸದಿಂದ ಇರುತ್ತದೆ. ಆತ್ಮೀಯ ಸ್ನೇಹಿತರೊಂದಿಗೆ, ಪಾಲಕರು, ಸಂಗಾತಿ ಮತ್ತು ಮಕ್ಕಳೊಂದಿಗಿನ ಒಡನಾಟ, ಮನ ಬಿಚ್ಚಿ ಮಾತನಾಡಬೇಕು. ಹೇ ಚಟಾಕಿಗಳನ್ನು ಹಾರಿಸುತ್ತಾ ನಕ್ಕು ನಲಿಯಬೇಕು. ನಗು ಸಾಂಕ್ರಾಮಿಕವಾದದ್ದು. ಅದು ಒಬ್ಬರಿಂದ ಒಬ್ಬರಿಗೆ ಅತ್ಯಂತ ಸರಳವಾಗಿ ಮತ್ತು ಸುಲಲಿತವಾಗಿ ಹರಡುತ್ತದೆ.
ಬಹಳ ಸಮಯ ಒಂಟಿಯಾಗಿ ಇರಬಾರದು. ಅಯ್ಯೋ ನನಗೆ ಯಾರೂ ಇಲ್ಲ ಮತ್ತು ಒಂಟಿಯಾಗಿರುವುದೊಂದೇ ನನಗೆ ಇರುವ ಆಯ್ಕೆ ಎಂದು ಹೇಳಬೇಡಿ. ಮನೆಯಿಂದ ಹೊರಗೆ ತುಸು ದೂರ ಇರುವ ಪಾರ್ಕಿಗೆ ಹೋಗಿ ಕುಳಿತುಕೊಳ್ಳಿ. ಅಲ್ಲಿ ಆಟವಾಡುವ ಮಕ್ಕಳನ್ನು ಗಮನಿಸಿ. ಯಾವುದಾದರೂ ದಿನಸಿ ಅಂಗಡಿ, ತರಕಾರಿ ಹಣ್ಣುಗಳ ಅಂಗಡಿಯ ಮುಂದೆ, ಯಾವುದಾದರೂ ಕೆಫೆಯ ಮೂಲೆಯೊಂದರ ಟೇಬಲ್ ಮೇಲೆ, ದೇವಸ್ಥಾನದ ಹೊರ ಆವರಣದಲ್ಲಿ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ. ಅದು ನಿಮ್ಮನ್ನು ಒಂಟಿತನದಿಂದ ಹೊರಗೆ ತರುತ್ತದೆ.
ಸಾಮಾಜಿಕ, ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಭಜನೆ ಮತ್ತು ಸತ್ಸಂಗಗಳಲ್ಲಿ ಪಾಲ್ಗೊಳ್ಳಿ. ಯೋಗ, ಧ್ಯಾನ ಶಿಬಿರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಉತ್ಸವ ದಾಸೋಹಗಳಲ್ಲಿ ನಿಮ್ಮ ಕೈಲಾದಷ್ಟು ಸೇವೆ ಮಾಡಿ ಇದು ನಿಮ್ಮಲ್ಲಿ ಸಕಾರಾತ್ಮಕ ಚಿಂತನೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿ.
ದೀಪದಿಂದ ದೀಪವನ್ನು ಬೆಳಗುವಂತೆ ಒಂದು ಒಳ್ಳೆಯ ಚಿಂತನೆ ಮತ್ತೊಂದು ಒಳ್ಳೆಯ ಚಿಂತನೆಗೆ ರಹ ದಾರಿಯಾಗುತ್ತದೆ. ಬೇರೆ ಏನನ್ನು ಮಾಡದೆ ಹೋದರೂ
ನಮ್ಮಿಂದ ಬೇರೆಯವರಿಗೆ ತೊಂದರೆ ಆಗದೆ ಇರಲಿ ಎಂದು ಭಾವಿಸಿ ಬದುಕಿದರೆ ಸಾಕು ನಮ್ಮ ಬದುಕಿಗೊಂದು ಸಾರ್ಥಕತೆ ಮೂಡುತ್ತದೆ.
ಏನಂತೀರಾ ಸ್ನೇಹಿತರೆ?
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್