ನನ್ನ ಅಪ್ಪ
ಜಗದ ಜಂಜಡದಿಂದ ದೂರ
ಬಲುದೂರದಿ ಆಶ್ರಮ…
ಊರ ಹೆಸರು ಸುರೇಬಾನ
ಶಬರಿಕೊಳ್ಳದ ಪೌರಾಣಿಕ ಸ್ಥಳ
ಗಾಂಧೀ ಚಿತಾಭಸ್ಮದ ಸಮಾಧಿ ಇರುವ ಗಾಂಧೀ ಆಶ್ರಮ
ಅಲ್ಲಿ ವಾಸಿಸುವದೇ ಅದೃಷ್ಟ
ಅದು ಅಜ್ಜ ನೀಲಕಂಠಜೀ ಸ್ವತಂತ್ರಯೋಧನ ಕಿರುಮನೆ
ಅದುವೆ ಕೆಂಪುಹೆಂಚಿನ ಸೂರಿನ ಅರಮನೆ
ಆಗಾಗ ಬಂದುಹೋಗುವ ಅಜ್ಜನ
ಹಾಗೂ ಗಾಂಧೀ ಅನುಯಾಯಿಗಳ
ಸತ್ ಸೇವೆಗೆ ನನ್ನ ಅಪ್ಪ ಸದಾ ತತ್ಪರ
ನಗುಮೊಗದ ನಿಗರ್ವಿ ನಿಷ್ಕಪಟ
ಅಪ್ಪಟ ಪ್ರೀತಿಯ ಮಗುವಿನಂಥ
ಮನದ ಅಪ್ಪನ ಬಣ್ಣಿಸಲು ಪದಗಳಿಲ್ಲ,ಪದಪುಂಜ ಸಾಲುವುದಿಲ್ಲ ಸರಳ ವಿರಳ ಸ್ತಿತಪ್ರಜ್ಞ ಮಕ್ಕಳ ಆರಾಧ್ಯ ದೈವ.
ಮೌನದಲಿಯೆ ಮಾತು ಹೇಳುವ
ಸದಾ ಕಾಯಕದ ಕಾರುಣ್ಯಸಿಂಧು
ಮಕ್ಕಳ ಅಭಿಮಾನಿ ಅನುರಾಗಿ
ಕೇಳದೆ ಎಲ್ಲ ನೀಡುವ ವಿಶಾಲಹೃದಯಿ ವಿಶ್ವಂಬರ.
ಬಡವರ ಬಂಧು ಭಾವಜೀವಿ
ಬೈಗುಳ ಹೊಡೆತಗಳಿಂದ ದೂರ
ಬಹುದೂರ ಶಾಂತಮನದ ಶಶಿ
ಮಕ್ಕಳ ಮನವರಿತ ಮನೋವಿಜ್ಞಾನಿ
ಜತೆಯಾಗಿ ಅಪ್ಪ ಇದ್ದರೆ ಮನೆ ಮನ
ಸದಾ ಸಂತಸದ ಹೊನಲು….
ಮಕ್ಕಳು ಬಹಳ ಅಂತ ಬೇಸರಿಸಲಿಲ್ಲ…
ಊಟ ಉಪಚಾರ ಆಟೋಟಗಳಲಿ
ಮಕ್ಕಳ ಜೊತೆ ಸಾಥ ನೀಡುವ ಸ್ನೇಹಮಯಿ…
ಪಾಠ ಪ್ರವಚನದಲಿ ಉತ್ತಮ ಗೈಡ
ತನಗಾಗಿ ಬದುಕದ ಪರೋಪಕಾರಿ
ಸದಾ ಶ್ವೇತಧಾರಿ ಅದು ಖದ್ದರಧಾರಿ
ಸಾದಾ ಜೀವನ ಉಚ್ಛವಿಚಾರದ ಅಪ್ಪನಿಂದ
ಮಕ್ಕಳ ಬಾಳಿಂದು ಬಂಗಾರ .
ಭರವಸೆಗಳ ತುಂಬಿದ ತುಂಬುಜೀವಿ
ಕನಸುಗಳ ಬಿತ್ತಿ ಬೆಳೆಸಿದ ಹರಿಕಾರ
ಅಪ್ಪನೆಂದರೆ ಅಂಬರ
ನೋಡಲು ವಾಮನರೂಪಿ
ಕೊಡುಗೈಗೆ ವಿಶ್ವರೂಪಿ
ಬೇಡಿದವರನು ಬರಿಗೈಲಿ ಕಳಿಸಿದವರೇ ಅಲ್ಲ…
ದೋಣಿ ಸಾಗಲಿ ಮುಂದೆ ಹೋಗಲಿ
ದೂರತೀರವ ಸೇರಲಿ…ಹಾಡುತ
ಭವಭಂಧನದ ಈ ನೌಕೆಯ ಹುಟ್ಟು
ಹಾಕುತ ಮಕ್ಕಳನೆಲ್ಲ ತೀರಸೇರಿಸಿದ
ಅಪ್ಪನಿಗೊಂದು ಸಲಾಮ
–ಜಯಶ್ರೀ.ಭ.ಭಂಡಾರಿ.
ಬಾದಾಮಿ.