ನಿಮ್ಮ ಶರಣರ ಸಂಗಮ ಮಾಡಿದಡೆ ಕರ್ಪೂರದ ಗಿರಿಯನುರೆ ಕೊಂಬಂತೆ
ಮಾನವನ ಉನ್ನತಿ ಮತ್ತು ಅವನತಿ ಅವನು ಯಾವ ಸಂಘವನ್ನು ಮಾಡಿದ್ದಾನೆ ಎನ್ನುವುದರಲ್ಲಿ ಅಡಗಿದೆ. ಅಯೋಗ್ಯರ ಸಂಗ,(ಸ್ನೇಹ)ದಿಂದ ಅವನತಿ ಹೊಂದುತ್ತಾನೆ. ಸಜ್ಜನರ, ಬುದ್ಧಿಜೀವಿಗಳ, ಕ್ರಿಯಾಶೀಲರ, ಗೌರವಾನ್ವಿತರ, ಶರಣರ ಸಂಗದಿಂದ ಉನ್ನತಿಯನ್ನು, ಸತ್ಕೀರ್ತಿಯನ್ನು, ಸಂತೋಷವನ್ನು, ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನಿಸರ್ಗದ ಸೊಬಗಿನಲ್ಲಿ ದೇವರು ಎರಡನ್ನೂ ಇಟ್ಟಿದ್ದಾನೆ. ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ. ಉಡುತಡಿಯಿಂದ ಕಲ್ಯಾಣದವರಿಗೆ ಪಾದಯಾತ್ರೆ ಮಾಡುತ್ತ, ಏಕಾಂಗಿಯಾಗಿ ಹೆಜ್ಜೆ ಹಾಕಿದ ಅಕ್ಕಮಹಾದೇವಿಗೆ ಶರಣರ ಸಂಗದಲ್ಲಿ ಸೇರುವುದೇ ಮೂಲ ಉದ್ದೇಶವಾಗಿತ್ತು.
ಜಗತ್ತಿನ ಪ್ರಥಮ ಲೋಕಸಭಾ ಭವನವೆಂದು ಪ್ರಖ್ಯಾತಿ ಹೊಂದಿದ ಬಸವಣ್ಣನವರು ಕಟ್ಟಿದ ಅನುಭವ ಮಂಟಪ ಸಜ್ಜನರಿಂದ, ಬುದ್ಧಿಜೀವಿಗಳಿಂದ, ಆದರ್ಶ ವ್ಯಕ್ತಿಗಳಿಂದ, ಸ್ತ್ರೀ ಪುರುಷ ಸಮಾನತೆಯಿಂದ ಕೂಡಿತ್ತು. ಒಂದು ವ್ಯವಸ್ಥೆ ಸ್ತ್ರೀಯಳನ್ನು ದೂರ ವಿಟ್ಟು ಸಲ್ಲದ ಆದರ್ಶಕ್ಕೆ ಪ್ರಯತ್ನ ಮಾಡುತ್ತಿರುವ ಅಂತಹ ಸಂದರ್ಭದಲ್ಲಿ ಜಾತಿ ವ್ಯವಸ್ಥೆ, ಬಡವ ಬಲ್ಲಿದ, ಮೇಲು-ಕೀಳು, ಸ್ತ್ರೀ ಪುರುಷ ಇಂತವುಗಳನ್ನು ಕಿತ್ತುಹಾಕಿ ಸರ್ವರಲ್ಲಿ ಸಮಾನತೆ, ಸಹ ಬಾಳ್ವೆ ತರುವ ಬಸವಣ್ಣನವರ ಅನುಭವ ಮಂಟಪ ಅಕ್ಕನನ್ನು ಆಕರ್ಷಣೆ ಮಾಡಿತು. ಅವಳು ಅಲ್ಲೊಂದು ವಚನ ಹೇಳುತ್ತಾಳೆ
ಅರಿಯದವರೊಡನೆ ಸಂಗವ ಮಾಡಿದರೆ ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಡಂತೆ ಬಲ್ಲವರೊಡನೆ ಸಂಗವ ಮಾಡಿದೊಡೆ ಮೊಸರು ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ ಚೆನ್ನಮ್ಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ಸಂಗಮ ಮಾಡಿದಡೆ ಕರ್ಪೂರದ ಗಿರಿಯನುರೆ ಕೊಂಬಂತೆ.
ಅಜ್ಞಾನಿಗಳ ಸಂಗ ಎರಡು ಕಲ್ಲುಗಳ ತಿಕ್ಕಾಟದಿಂದ ಹುಟ್ಟುವ ಅಗ್ನಿಗೆ ಕಾರಣವಾಗುತ್ತದೆ. “ಅಜ್ಞಾನಿಗಳ ಸಂಗ ಅಭಿಮಾನ ಭಂಗ” ಎನ್ನುವ ಗಾದೆಯನ್ನು ನೆನಪಿಸಬಹುದು.
ಮಾನವನವನತಿಗೆ ಅಯೋಗ್ಯರ, ಅಲ್ಪಮತಿಗಳ ಸ್ನೇಹ ಕಾರಣವಾಗುತ್ತದೆ. ಉತ್ತಮರ ಸ್ನೇಹದಿಂದ ಮೊಸರು ಕಡೆದು ಬೆಣ್ಣೆಯ ಪಡೆದಂತೆ ಅರ್ಥಾತ ಜೀವನಕ್ಕೆ ಬೇಕಾದ ಎಲ್ಲವನ್ನು ಪಡೆಯಬಹುದಾಗಿದೆ. ಅಯೋಗ್ಯರು ಯೋಗ್ಯರ ಸಂಗದಿಂದ ಗೌರವ ಪಡೆಯುತ್ತಾನೆ. ಹಾಲಿನ ಸಂಘ ಮಾಡಿದ ನೀರಿನಂತೆ, ಹೂವಿನ ಸಂಗ ಮಾಡಿದ ದಾರದಂತೆ, ಅಲ್ಪರ ಬಾಳು ಹಸನವಾಗುತ್ತದೆ. ಮಾನವನ ದೋಷಗಳು ಬೆಟ್ಟದಷ್ಟಿದ್ದರೂ ಶರಣರ ಜ್ಞಾನಪ್ರವಾಹದಿಂದ, ಜ್ಞಾನಜ್ವಾಲೆಯಿಂದ ಕರಗಿಬಿಡುತ್ತದೆ. ಕರ್ಪೂರದ ಗಿರಿಯನ್ನು ಉರಿನುಂಗಿದಂತೆ, ಮಹಾತ್ಮರ ಸಂಗದಿಂದ ಬೆಟ್ಟದಷ್ಟಿರುವ ಸಮಸ್ಯೆಗಳು ಕಾಲಕ್ರಮೇಣ ಇಲ್ಲದಾಗುತ್ತವೆ. ಹಾಗಾಗಿ “ಸಾರ ಸಜ್ಜನರ ಸಂಗ ಮಾಡುವುದು ದೂರದೂರಿನ ಸಂಘ ಬೇಡವಯ್ಯ” ಎಂದಿದ್ದಾರೆ ಬಸವಣ್ಣನವರು. ಸಂಗದಲ್ಲಿ ಎರಡು ಪ್ರಕಾರ. ಸಜ್ಜನರ ಸಂಗ, ಇನ್ನೊಂದು ದುರ್ಜನರಸಂಗ. ಒಂದು ಬಿಟ್ಟು, ಒಂದನ್ನು ಹಿಡಿದಾಗ ಏನೆಲ್ಲವನ್ನು ಪಡೆಯಬಹುದಾಗಿದೆ. “ಸಜ್ಜನರ ಸಂಗ ಹೆಜ್ಜೇನು ಸವಿದಂತೆ ದುರ್ಜನರ ಸಂಗ ಬಚ್ಚಲ ರೊಜ್ಜಿನಂತೆ” ಎನ್ನುವ ಸರ್ವಜ್ಞನ ಮಾತುಗಳು ಸದಾ ಸ್ಮರಣೀಯ.
ಜಗಳ ಮಾಡುವುದಾದರೆ ಗಂಧದ ಜೋಡಿ ಜಗಳ ಮಾಡಬೇಕು. ಆಗ ನಾವು ಸುಗಂಧಕ್ಕೆ ಕಾರಣವಾಗುತ್ತೇವೆ. ಮಹಾದೇವಿ ಸದಾಶರಣರ ಸಂಗವನ್ನು, ಮಲ್ಲಿಕಾರ್ಜುನನ ಸಾನಿಧ್ಯವನ್ನು ಪಡೆದ ಪರಿಣಾಮ ಮಹಾದೇವಿಯು ಅನುಭವ ಮಂಟಪದ ಮಹಾತ್ಮರಿಂದ “ಅಕ್ಕ” ಎಂದು ಕರೆಯಿಸಿಕೊಳ್ಳುತ್ತಾಳೆ. ಶರಣ ಸಮೋಹಕ್ಕೆ ಅಕ್ಕ ಆಗುವುದು ಸಾಮಾನ್ಯವಲ್ಲ. ಅಂತಹ ಅಕ್ಕನ ವಚನಗಳು ಮನುಷ್ಯನಿಗೆ ದಾರಿ ದೀಪಗಳಾಗಿವೆ. ಅವಳ ಜ್ಞಾನದ ಬೆಳಕಿನಲ್ಲಿ ನಮ್ಮ ಬದುಕನ್ನು ಹಸನ್ನು ಮಾಡಿಕೊಳ್ಳೋಣ. ಉತ್ತಮರ ಸಂಗದಲ್ಲಿ ಇರಲು ಪ್ರಯತ್ನ ಮಾಡೋಣ
–
-ಪ್ರಭಾವತಿ ಹಿರೇಮಠ ಹುಬ್ಬಳ್ಳಿ