ವಿಧಿವಿಪರೀತ ಇದೆಂಥ ಆಘಾತ!
ನಾವು ತುಂಬಾ ಗೌರವಿಸುವ ದಲಿತ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದಂಥ ಡಾ.ಅರ್ಜುನ ಗೊಳಸಂಗಿಯವರ ಮಗ ಜೀವನ್ ಕಾಲವಶರಾಗಿದ್ದಾರೆ. ಇಂದು ಬೆಳಗ್ಗೆ ಜೀವನ್ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ದುಃಖಿತರಾಗಿದ್ದೇವೆ.
ಇದು ನಿಜಕ್ಕೂ ಗೋಡೆಗೆ ಹಣೆ ಚಚ್ಚಿಕೊಳ್ಳುವಂಥ ವಿಷಣ್ಣ ಘಳಿಗೆಯಿದು. ಕೇವಲ ಇಪ್ಪತ್ಮೂರು ವರುಷದ ಜೀವನ್ ಜೀವನದಾಟ ಶುರುವಾಗುವ ಮುಂಚೆಯೇ ಆಟ ಮುಗಿಸಿಹೋಗಿದ್ದಾರೆ.
ಡಾ.ಅರ್ಜುನ್ ಗೊಳಸಂಗಿ ಸರ್ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಗುರುಗಳು. ಮೃದು ಸ್ವಭಾವದ ಸಮಚಿತ್ತದ ಖಚಿತ ನಿಲುವಿನ ಸಾಮಾಜಿಕ ಚಿಂತಕರು. ಅವರಿಗೆ ಆಗುತ್ತಿರುವ ದುಃಖ ಎಂಥದಿರಬಹುದು ಎಂದು ಕಲ್ಪಿಸಿಕೊಂಡು ಮರುಗುತ್ತಿದ್ದೇನೆ.
ಈ ದುಃಖಕ್ಕೆ ಎಣೆಯೂ ಇಲ್ಲ ಎಲ್ಲೆಯೂ ಇಲ್ಲ. ಗೊಳಸಂಗಿ ಸರ್ ರನ್ನ ನಾವು ಹೇಗೆ ಸಮಾಧಾನಿಸಬಹುದು? ಅವರನ್ನ ಎದಿರುಗೊಳ್ಳುವ ದಾರಿ ಯಾವುದು? ನಿಜಕ್ಕೂ ಇದು ತುಂಬಾ ಅಸಹನೀಯ ಘಳಿಗೆ.
ಶತಾಯುಷಿ ಏಣಗಿ ಬಾಳಪ್ಪನವರ ಕಣ್ಣೆದುರಿನಲ್ಲಿಯೇ ವರ ಮಗ ಏಣಗಿ ನಟರಾಜ್ ರು ತೀರಿ ಹೋದಾಗ ಅವರು ಹೇಳಿದ್ದು “ಸಣ್ಣವರ ಮುಂದ ದೊಡ್ಡವರು ಹೋದ್ರ ಅದು ಸಹಜ ಪ್ರಾಕೃತಿಕ. ಆದ್ರ ದೊಡ್ಡವರ ಮುಂದ ಸಣ್ಣವ್ರು ಹೋಗಬಾರದ್ರೆಪಾ… ದೊಡ್ಡವರಿಗೆ ಅದನ್ನ ತಡಕೊಳ್ಳುವ ಶಕ್ತಿ ಇರೋದಿಲ್ಲ” ಎಂದು ಕಣ್ಣೀರು ಹಾಕಿ ಆಡಿದ ಮಾತುಗಳು ನೆನಪಿಗೆ ಬಂದು ಹನಿಗಣ್ಣಾಗಿದ್ದೇನೆ.
ಕನಸಲ್ಲಿಯೂ ಶತ್ರುವಿಗೂ ಕೇಡು ಬಗೆಯದ ಜೀವ ಅರ್ಜುನ್ ಗೊಳಸಂಗಿ ಸರ್. ಆದರೆ ಅಂಥ ಜೀವದ ಮಗನಿಗೆ ಇಂಥ ಕೇಡು ಹೇಗಾಯಿತು. ವಿಧಿಯೋ ಕಾಲಲೀಲೆಯೋ… ಯಾವುದಿದು ಘೋರ…
ನಿಮ್ಮ ದುಃಖದಲ್ಲಿ ನಮ್ಮ ಕುಟುಂಬವೂ ಭಾಗಿ ಗುರುಗಳೇ…
ಸಮಾಧಾನಿಸಿಕೊಳ್ಳಿ.
ಮಾತು ಸತ್ತ ಘಳಿಗೆಗಳಿವು.
– ವೀರಣ್ಣ ಮಡಿವಾಳರ