ಗ್ರಾಮೀಣ ಪತ್ರಕರ್ತರ ಆರೋಗ್ಯ ಕಾರ್ಡು, ಬಸ್ಪಾಸ್ ಸೌಲಭ್ಯಗಳಿಗೆ ಬಜೆಟ್ನಲ್ಲಿ ಆದ್ಯತೆ-ಬೊಮ್ಮಾಯಿ
e-ಸುದ್ದಿ ಕಲಬುರ್ಗಿ
ಮುಖ್ಯಾಂಶಗಳು
36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟನೆ
ಗ್ರಾಮೀಣ ಪತ್ರಕರ್ತರ ಆರೋಗ್ಯ ಕಾರ್ಡು ಬಸ್ಪಾಸ್ ಸೌಲಭ್ಯಗಳಿಗೆ ಬಜೆಟ್ನಲ್ಲಿ ಆದ್ಯತೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಮೀಸಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಲಬುರಗಿ :ಜ04:ಸಣ್ಣ ಪತ್ರಿಕೆಗಳು ಪ್ರಸಾರದಲ್ಲಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕೂಡ ಅಲ್ಲಿನ ಸುದ್ದಿ,ಲೇಖನ,ಅಂಕಣಗಳ ಮೌಲ್ಯ ದೊಡ್ಡದು.ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್ಪಾಸ್ ಸೇರಿದಂತೆ ಇತರ ಸೌಲಭ್ಯಗಳಿಗೆ ಬರುವ ಬಜೆಟ್ನಲ್ಲಿ ಆದ್ಯತೆ ನೀಡಲಾಗುವುದು.ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಹಾಗೂ ಕೋಶಕ್ಕೆ ವಾರಾಂತ್ಯದೊಳಗೆ ಪೂರ್ಣ ನೇಮಕಾತಿ ಮಾಡಿ 3 ಸಾವಿರ ಕೋಟಿ ರೂ.ಕ್ರಿಯಾ ಯೋಜನೆಯನ್ನು ಒಂದು ವರ್ಷದ ಅವಧಿಯೊಳಗೆ ಅನುಷ್ಠಾನ ಮಾಡಲಾಗುವುದು
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿನ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಿರುವ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ರಂಗ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ.ಖಾಸಗೀಕರಣ,ಉದಾರೀಕರಣ,ಜಾಗತೀಕರಣದ ಮಾರುಕಟ್ಟೆ ಆಧಾರಿತ ವ್ಯವಹಾರದ ನಡುವೆ ಜನಪರ ಆದ್ಯತೆಗಳನ್ನು,ಅಂತಃಕರಣವನ್ನು ಪತ್ರಿಕೆಗಳು ಕಾಯ್ದುಕೊಳ್ಳುತ್ತಿವೆ. ಪತ್ರಿಕೆಗಳಿಗೆ ಅಗತ್ಯವಿರುವ ಜಾಹೀರಾತು ,ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು,ಬಸ್ಪಾಸ್ ಸೌಕರ್ಯಗಳನ್ನು ನೀಡಲು ಬರುವ ಬಜೆಟ್ನಲ್ಲಿ ಕ್ರಮವಹಿಸಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ.ತಿಂಗಳಾಂತ್ಯದೊಳಗೆ ಈ ಭಾಗದ ಶಾಸಕರ ಸಭೆ ನಡೆಸಿ ಅಂತಿಮಗೊಳಿಸಲಾಗುವುದು.ಅನುದಾನ ಒದಗಿಸಿ ಒಂದೇ ವರ್ಷದಲ್ಲಿ ಯೋಜನೆಗಳ ಅನುಷ್ಠಾನ ಮಾಡಲಾಗುವುದು ಎಂದರು.
ಕಲ್ಯಾಣದ ಪುಣ್ಯಭೂಮಿ ಕಲಬುರಗಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ.ಪತ್ರಕರ್ತರಿಗೆ,ಪತ್ರಿಕೋದ್ಯಮಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ.ಸ್ವಾತಂತ್ರ್ಯ ಚಳುವಳಿಗೆ ಕೈಬರಹದ ಹಾಗೂ ಮೊಳೆ ಜೋಡಣೆ ಮುದ್ರಣ ಆಧಾರಿತ ಹಲವಾರು ಪತ್ರಿಕೆಗಳು ಭೂಗತವಾಗಿ ಕಾರ್ಯ ಮಾಡಿ,ದೇಶಭಕ್ತಿ,ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ.ಪಾಶ್ಚಿಮಾತ್ಯ ಪತ್ರಿಕೋದ್ಯಮ ಪ್ರಭಾವದ ನಡುವೆಯೂ ವಸಾಹತೋತ್ತರ ಕಾಲದಲ್ಲಿ ಭಾರತೀಯ ಪತ್ರಿಕೆಗಳು ಸ್ವಂತಿಕೆ ರೂಢಿಸಿಕೊಂಡಿವೆ.ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಪತ್ರಿಕೆಗಳ ಮೇಲೆ ದೊಡ್ಡ ಪ್ರಹಾರ ನಡೆಯಿತು.ಪತ್ರಕರ್ತರು ಅದನ್ನು ಗಟ್ಟಿಯಾಗಿ ಎದುರಿಸಿದರು.ಪತ್ರಿಕೋದ್ಯಮಿ ಸದಾ ಜಾಗೃತವಾಗಿ ಕೆಲಸ ಮಾಡಿದರೆ ಸರ್ಕಾರ,ಸಮಾಜ ಎಚ್ಚರವಾಗಿರುತ್ತದೆ.ಕೋವಿಡ್ ಸಂದರ್ಭದಲ್ಲಿ ಆರೋಗ್ಯ,ಅಂಗನವಾಡಿ,ಆಶಾ,ಪೊಲೀಸ್,ಪೌರಕಾರ್ಮಿಕರೊಂದಿಗೆ ಪತ್ರಕರ್ತರು ಕೂಡ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿ ಕಾರ್ಯನಿರ್ವಹಿಸಿದ್ದಾರೆ.ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ,ಬಹುತೇಕ ಕುಟುಂಬದವರಿಗೆ ಈಗಾಗಲೇ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗಿದೆ.ಇನ್ನೂ ಬಾಕಿ ಇರುವ ವ್ಯಕ್ತಿಗಳ ಕುಟುಂಬಕ್ಕೂ ಒದಗಿಸಲಾಗುವುದು.ಪತ್ರಕರ್ತರು-ರಾಜಕಾರಣಿಗಳು ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುತ್ತಾರೆ.ಸಮಾಜದ ಒಳಿತಿಗೆ ಅದು ಬಳಕೆಯಾಗಬೇಕು.ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಕುರಿತು ಈ ಸಮ್ಮೇಳನದಲ್ಲಿ ಚರ್ಚೆಗಳಾಗಲಿ ಅವುಗಳ ನಿರ್ಣಯಗಳ ಕರಡನ್ನು ಸರಕಾರಕ್ಕೆ ಕಳುಹಿಸಿಕೊಡಿ ಅವುಗಳ ಜಾರಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.