ಮಹಾನಗರದಲ್ಲಿ ಮಳೆ
ಸೂರ್ಯ ಚಂದಿರ ನಕ್ಷತ್ರಗಳೆಲ್ಲ ಚರಂಡಿ ನದಿಯಲ್ಲಿ ಈಜಾಡುತ್ತಿದ್ದಾರೆ
ವಿಧಾನ ಸೌಧ ಮತ್ತೆ ಜನಮನದ ಕಣ್ಣೀರಲ್ಲಿ ಮೈತೊಳೆದುಕೊಳ್ಳುತ್ತಿದೆ
ಮಹಾರಾಜರು ಪ್ರತಿವರುಷದಂತೆ ಈ ವರುಷವೂ ನಿಮ್ಮ ಕಣ್ಣೀರಿಗೆ ಕೂಲಿಕೊಡುತ್ತೇವೆ ಎಂದು ಬಲವಾದ ಭರವಸೆ ನೀಡಿದ್ದಾರೆ
ಮಹಾನಗರ ಮಳೆಯಲ್ಲಿ ಅಳುತ್ತಿದೆ
ವಿಧಾನಸೌಧ ವಿಕಾಸ ಸೌಧದ ಸಿಂಹಾಸನಗಳಲ್ಲಿ ಗುಡುಗು ಸಿಡಿಲುಗಳು ನೆಮ್ಮದಿಯಾಗಿ ವಿಶ್ರಮಿಸಿ ನಖಶಿಖಾಂತ ನಗುತ್ತಿವೆ ಆಗಾಗ ನಿದ್ದೆ ಮಾಡಿ ಎದ್ದು
ಬಿದ್ದ ಗುಡಿಸಲು ಮನೆಗಳನ್ನ ತಿನ್ನುತ್ತಿವೆ
ಇದು ಸಂಜೆ ಐದರ ಮಳೆಯಲ್ಲ
ಬೆಳಗು ಬೈಗುಗಳ ಹಂಗಿಲ್ಲದ ಅನವರತ ಮಳೆ
ಬೆಂಗಳೂರಿನಲ್ಲಿ ಬಿತ್ತಲೂ ಏನೂ ಇಲ್ಲ ಬೆಳೆಯಲೂ ಏನೂ ಇಲ್ಲ
ಇಲ್ಲಿ ತನ್ನಿಂದ ತಾನೇ ಅತ್ಯಾಚಾರ ಭ್ರಷ್ಟಾಚಾರ ಕ್ರೌರ್ಯದ ಬೀಜಗಳು ಹುಟ್ಟಿ ಬೆಳೆದು ಅಲ್ಲಲ್ಲಿ ಹಂಚಿಹೋಗುತ್ತವೆ
ಯಾವಾಗಲೋ ಒಮ್ಮೆ ಬಂದವರನ್ನ ವೀಲಿಂಗ್ ಮಾಡಿ ಹೆದರಿಸುತ್ತವೆ
ಜೇಬುಕತ್ತರಿಸುತ್ತವೆ
ಹಸಿದ ಹೊಟ್ಟೆಗಳು
ತುರ್ತು ಸ್ಖಲನಕ್ಕೆ ತುತ್ತಿಗಾಗುವಷ್ಟು ಫೀಸು ಫಿಕ್ಸು ಮಾಡಿ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಆಹ್ವಾನಿಸುತ್ತವೆ
ಅಪಾರ್ಟಮೆಂಟುಗಳ ಸುಪ್ಪತ್ತಿಗೆಯಲಿ ಈಗೀಗ ನಿದ್ದೆಗಳಿಲ್ಲ
ಮೆಜೆಸ್ಟಿಕ್ ನ ಫೂಟ್ ಪಾತಿನಲಿ ಜೋರು ಮಳೆಯಲ್ಲಿ ಯಾವುದೋ ಅಮಲಿನಲಿ ನಿದ್ದೆಗೇ ನಿದ್ದೆ ಬಂದು ಮಲಗಿದೆ
ಇದು ಮಹಾನಗರ ಇಲ್ಲಿ ಎಲ್ಲವೂ ಮಹಾನ್
ಮಾಲು, ಬೀದಿ, ಸರ್ಕಲ್ ಗಳ ಮಧ್ಯದಲ್ಲಿನ ಮೂರ್ತಿಗಳು
ಎಲ್ಲಕೆಲ್ಲವೂ ಫೈವ್ ಸ್ಟಾರ್ ಸೆವೆನ್ ಸ್ಟಾರ್ ಹೋಟೆಲಿನ ಟೀ ಬಿಸ್ಕತ್ತೂ ಸಹ
ಮನುಷ್ಯತ್ವವೊಂದನ್ನು ಹೊರತು ಪಡಿಸಿ
ಅನಾಥ ಶವಗಳಿಗೂ ಈಗ ಬೆಲೆ ಬಂದಿದೆ
ಒಂದೊಂದು ಶವಕ್ಕೆ ಒಂದೊಂದು ಲಕ್ಷ
ದೊಡ್ಡವರ ಆಸ್ಪತ್ರೆಗಳಲ್ಲಿ ಅಧ್ಯಯನಕ್ಕೆ ಬೇಕಂತೆ
ಹಾಗಾಗಿ ಈಗೀಗ
ರೈಲು ಹಳಿಯ ಆಜುಬಾಜು ನಾಯಿ ಬೆಕ್ಕುಗಳ ಬಿಡಾಡಿ ದನಗಳ ಹೆಣಗಳು ಅಪರೂಪ
ಕಿವುಡ ಮೂಕ ಅಕ್ಕತಂಗಿಯರ ಕಳೇಬರಗಳೇ ಹೆಚ್ಚು
ಯಾರೋ ಕಾರಿನಲ್ಲಿ ತಂದು ಒಗೆದುಹೋಗುತ್ತಾರೆ
ಮತ್ತಾರೋ ಸೂಟ್ ಕೇಸಿನಲ್ಲಿ
ಎಫ್ ಐ ಆರ್ ನಲ್ಲಿ ಹೆಣಗಳ ಸಿಗುವ ಮುಂಚೆಯೇ ಅಪಘಾತದಿಂದ ಸಾವು ಎಂಬ ಷರಾಗಳು
ಅತ್ಯಾಚಾರಗಳು ನಡೆದಿಲ್ಲ ಎಂಬ ಎಫ್ ಎಸ್ ಎಲ್ ವರದಿಗಳು ಈಗೀಗ ಝರಾಕ್ಸ್ ಅಂಗಡಿಗಳಿಗಿಂತ ಅಗ್ಗ
ಹೇಳಿಕೆಗಳನ್ನ ವಿಡಿಯೋ ಮಾಡಿಕೊಳ್ಳಲು ಹೋದರೆ ಪೊಲೀಸರು ಲಾಟಿಯಲ್ಲಿ ಹೊಡೆಯುತ್ತಾರೆ
ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಐಜಿ ಸಾಹೇಬರು ಫರ್ಮಾನು ಹೊರಡಿಸಿದ್ದು ಕೂಡ
ಎಲ್ಲರಿಗೂ ನೆನಪಿದೆ
ಮಹಾನಗರದ ಮರ್ಯಾದೆ ಈಗೀಗ ವಿಶ್ವಮಟ್ಟಕ್ಕೇರಿದೆ
ನಾವು ಹೆಚ್ಚಿಸಿದ್ದು ನಾವೇ ಹೆಚ್ಚಿಸಿದ್ದು ಹಾಗಾಗಿ ಮುಂದೆಯೂ ನಮ್ಮದೇ ಸಿಂಹಾಸನ ಟಿವಿ ವರದಿಗಳಲ್ಲಿ ಕಿವಿಗಡಚಿಕ್ಕುವ ಹೇಳಿಕೆಗಳು ಲೈವ್ ನಲ್ಲಿ ಕೇಳಿಸುತ್ತಿವೆ
ರಾಜಕಾಲುವೆಗಳ ಮೇಲೆ ಅರಮನೆ ಕಟ್ಟಿಕೊಂಡ ರಾಜರುಗಳನ್ನ ಎತ್ತಂಗಡಿ ಮಾಡುವ ಕಾರ್ಯ ಪ್ರತಿ ಸರಕಾರ ಬಂದಾಗಲೂ ಚುರುಕಾಗಿರುತ್ತದೆ
ಮಳೆ ನಿಂತ ಮೇಲೆ ಎಲ್ಲವೂ ಮರೆಯಾಗುತ್ತದೆ
ಮಳೆಗೆ ಮಹಾನಗರವೇನು ಹಳ್ಳಿಗಾಡಾದರೇನು
ಎಲ್ಲಿಯೂ ಬೆಳೆ ಬೆಳೆಯುತ್ತಿಲ್ಲ
ಮಾನವೀಯತೆ ಕೊಳೆಯುತ್ತಿದೆ
-ವೀರಣ್ಣ ಮಡಿವಾಳರ