ಕಕ್ಷೆಯಲ್ಲಿ ಶುಕ್ಷ, ಮೊಳಕೆಗೆಂದು ಮೆಂತ್ಯ….

ಕಕ್ಷೆಯಲ್ಲಿ ಶುಕ್ಷ, ಮೊಳಕೆಗೆಂದು ಮೆಂತ್ಯ….

 

ಎಂಥ ವಿಸ್ಮಯ ನೋಡಿ: ಬೆಂಗಳೂರಿನಿಂದ ತುಮಕೂರಿಗೆ ಹೋದಷ್ಟೇ ದೂರವನ್ನು ಲಂಬವಾಗಿ ಮೇಲಕ್ಕೆ ಕ್ರಮಿಸಿದರೆ ಅದು ಬಾಹ್ಯಾಕಾಶ!

ಹಾಗೆಂದು ಮುಂದೊಂದು ದಿನ ಬೆಂಗಳೂರಿನ ಒಂದು ಮೆಟ್ರೊ ನಿಲ್ದಾಣವನ್ನು ಬಾಹ್ಯಾಕಾಶದಲ್ಲೂ ಕಟ್ಟಬಹುದೇ ಎಂದು ನೀವು ಕೇಳಬಹುದು. ಕಟ್ಟುವುದು ಹೇಗೆ? ಗಣ್ಯರು ಶಿಲಾನ್ಯಾಸ ಮಾಡಲೆಂದು ಮೊದಲ ತೊಲೆಯನ್ನು ಅಲ್ಲಿಗೆ ಏರಿಸುತ್ತಲೇ ಅದು ಅಲ್ಲಿ ನಿಂತಲ್ಲೇ ನಿಲ್ಲುವ ಬದಲು, ಗಂಟೆಗೆ 28 ಸಾವಿರ ಕಿ.ಮೀ. ವೇಗದಲ್ಲಿ ಭೂಪ್ರದಕ್ಷಿಣೆ ಹಾಕುತ್ತಿರುತ್ತದೆ.

ಆ ಮೊದಲ ತೊಲೆ ಅಲ್ಲಿ ನಿಂತಲ್ಲೇ ನಿಲ್ಲಬೇಕೆಂದರೆ (ನಿಂತಂತೆ ಕಾಣಬೇಕೆಂದರೆ) ಅದನ್ನು ಸುಮಾರು 36 ಸಾವಿರ ಕಿ.ಮೀ. ಎತ್ತರದ ಭೂಸ್ಥಿರ ಕಕ್ಷೆಯಲ್ಲಿ ಕಟ್ಟಿ ನಿಲ್ಲಿಸಬೇಕಾಗುತ್ತದೆ. ಬೃಹತ್‌ ಬೆಂಗಳೂರು ಅದೆಷ್ಟೇ ದೊಡ್ಡದಾಗಿ ಬೆಳೆದರೂ ಆ ಎತ್ತರಕ್ಕೆ ಹೋಗಲಾರದು ಬಿಡಿ.

ಶುಭಾಂಶು ಇಲ್ಲಿಂದ ಹೊರಟು 28 ಗಂಟೆಗಳ (ಭೂಮಿಯ) ಸುತ್ತಾಟದ ನಂತರ ಐಎಸ್‌ಎಸ್‌ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದ್ದಾರೆ. ಆ ನಿಲ್ದಾಣ ನಮ್ಮಿಂದ ಕೇವಲ 400 ಕಿ.ಮೀ. ಎತ್ತರದಲ್ಲಿ ಸುತ್ತುತ್ತಿದೆ. ಅದು, ಬೆಂಗಳೂರಿನಿಂದ ಗೋಕರ್ಣ/ಗೋವಾಕ್ಕೆ ಹೋದಷ್ಟೇ ದೂರ.

ಹಾಗಾಗಿ ಗೋವಾಕ್ಕೆ ಹೋದಷ್ಟೇ ಸಲೀಸಾಗಿ ಈಗೀಗ ಎಷ್ಟೊಂದು ಪಯಣಿಗರು ಅಲ್ಲಿಗೆ ಹೋಗುತ್ತಿದ್ದಾರೆ. ಇದುವರೆಗೆ 19 ದೇಶಗಳ ಜನರು ಅಲ್ಲಿಗೆ ಹೋಗಿ ಬಂದಿದ್ದಾರೆ. ಸ್ಪೇಸ್‌ ಎಕ್ಸ್‌, ಬ್ಲೂ ಆರಿಜಿನ್‌ ಮುಂತಾದ ಖಾಸಗಿ ಕಂಪನಿಗಳ ನೌಕೆಯಲ್ಲಿ ಕಳೆದ ಎರಡು ತಿಂಗಳಲ್ಲಿ 21 ಮಂದಿ, ಅವರಲ್ಲೂ ಹತ್ತು ಜನರು ಮೊದಲ ಬಾರಿ ಹೋಗಿ ಬಂದಿದ್ದಾರೆ.

ಹಾಗೆ ಹೋದವರಲ್ಲಿ ಬೆಲಾರೂಸ್‌ನ ಗಗನಸಖಿ ಮರ್ಯಾನಾ, ವಿಯೆಟ್ನಾಂ ಮೂಲದ ಅಮೆರಿಕದ ಅತ್ಯಾಚಾರ ಸಂತ್ರಸ್ತೆ ಅಮಾಂಡಾ ಎಂಗುಯೆನ್‌ ಕೂಡ ಇದ್ದಾರೆ.

ಏಪ್ರಿಲ್‌ 14ರಂದು ಎಲ್ಲ ಆರು ಮಹಿಳೆಯರೇ ಬಾಹ್ಯಾಕಾಶ ಯಾನ ಮಾಡಿ (ಅಂದರೆ 100 ಕಿ.ಮೀ. ಎತ್ತರದ ಕ್ಷೀಣಗುರುತ್ವದಲ್ಲಿ ಹನ್ನೊಂದು ನಿಮಿಷ ತೇಲಾಡಿ) ಬಂದಿದ್ದಾರೆ. ಶುಭಾಂಶು 721ನೆಯ ಅಥವಾ 722ನೆಯವರು.

ಹಾಗೆಂದು ಶೂನ್ಯ ಗುರುತ್ವದ ಪಯಣವನ್ನು ತೀರಾ ಹಗುರವಾಗಿ ಪರಿಗಣಿಸಬೇಡಿ. ಅದರಲ್ಲೂ 400 ಕಿ.ಮೀ. ಎತ್ತರದ ಅಟ್ಟಣಿಗೆಗೆ ಹೋಗಬೇಕೆಂದರೆ ಭಾರೀ ತರಬೇತಿ, ಶಿಸ್ತು, ತಾಳ್ಮೆ, ಸ್ಥೈರ್ಯ ಎಲ್ಲ ಬೇಕು. ಎಂಟು ದಿನಗಳ ವಾಸಕ್ಕೆಂದು ಹೋದ ಸುನಿತಾ ವಿಲಿಯಮ್ಸ್‌ ಹಿಂದಿರುಗಿ ಬರಲಾರದೆ 286 ದಿನ ಅಲ್ಲೇ ಉಳಿದಿದ್ದರಲ್ಲ?

ಬಾಹ್ಯಾಕಾಶ ನಿಲ್ದಾಣ ಎಂದ ಮಾತ್ರಕ್ಕೇ ಅಲ್ಲಿ ಕೂತು ಇಡೀ ಭೂಮಿಯ ಉಂಡೆಯನ್ನು ನೋಡಬಹುದು ಎಂದೆಲ್ಲ ಊಹಿಸಿದರೆ ತಪ್ಪಾಗುತ್ತದೆ. ಐಎಸ್‌ಎಸ್‌ ಕಿಟಕಿಯಿಂದ ಇಡೀ ಭಾರತ ಕೂಡ ಒಂದೇ ನೋಟದಲ್ಲಿ ಸಿಗಲಾರದು. ಗೋವಾದಿಂದ ಚೆನ್ನೈವರೆಗಿನ ಒಂದು ಫೋಟೊ ತೆಗೆಯಬಹುದು. ಈಗಂತೂ ಮೋಡ ಮುಸುಕಿರುವುದರಿಂದ ಅದೂ ಸಾಧ್ಯವಿಲ್ಲ.

ಆದರೆ ಎಲ್ಲ ಖಂಡಗಳೂ ಸರಸರ ಓಡುತ್ತಿರುತ್ತವೆ. ಪ್ರತಿ ಒಂದೂವರೆ ಗಂಟೆಗೆ ಭೂಮಿಯ ಒಂದು ಪ್ರದಕ್ಷಿಣೆ ಹಾಕುತ್ತ 24 ಗಂಟೆಗಳಲ್ಲಿ ಹದಿನಾರು ಸೂರ್ಯೋದಯ, ಹದಿನಾರು ಸೂರ್ಯಾಸ್ತಗಳನ್ನು ನೋಡುವುದು ಮೊದಮೊದಲು ತುಂಬ ರೋಚಕ ಎನಿಸುವುದಂತೂ ನಿಜ. ಏಕಾದಶಿ, ರಾಹುಕಾಲ, ಅಮಾವಾಸ್ಯೆ ಎಂಬ ನಮ್ಮ ಪಂಚಾಂಗ ಲೆಕ್ಕಾಚಾರ ಯಾವುದೂ ಅಲ್ಲಿ ಲೆಕ್ಕಕ್ಕೆ ಬರುವುದಿಲ್ಲ.

ಶುಭಾಂಶು ಶುಕ್ಲ ಅಲ್ಲಿಗೆ ಮೆಂತ್ಯ, ಹೆಸರುಕಾಳುಗಳನ್ನು ಒಯ್ಯುತ್ತಿದ್ದಾರೆ. ಅದನ್ನು ಅವರು ನೆನೆಸಿ ಮೊಳಕೆ ಕಟ್ಟಲಿದ್ದಾರೆ. ಯಾಕೆ ಮೆಂತ್ಯ? ಅದರ ಬದಲು ಎಳ್ಳು-ಜೀರಿಗೆ, ಈರುಳ್ಳಿ ಯಾಕೆ ಅಲ್ಲ? ಯಾಕೆಂದರೆ ಹೆಸರು-ಮೆಂತ್ಯ 24 ಗಂಟೆಗಳಲ್ಲೇ ಮೊಳಕೆ ಒಡೆಯುತ್ತವೆ. (ತಾಜಮಹಲ್‌ ಭೇಟಿಗೆ ಯಾರಾದರೂ ಅತಿ ಗಣ್ಯ ವ್ಯಕ್ತಿ ಮುಂದಿನ ವಾರ ಬರಲಿದ್ದಾರೆ ಎಂದು ಗೊತ್ತಾದಾಗ ಅಲ್ಲಿನ ಕೆಮ್ಮಣ್ಣ ಹಾಸಿನ ಮೇಲೆ ಇಂದೇ ಮೆಂತ್ಯವನ್ನು ಹಾಸಿ ನೀರೆರೆಯುತ್ತಾರೆ. ಹೆಸರೂ ಅಷ್ಟೇ ತ್ವರಿತವಾಗಿ ಸಸಿಗಳಾಗುತ್ತವೆ.

ಬಾಹ್ಯಾಕಾಶದ ಅತಿಕ್ಷೀಣ ಗುರುತ್ವದಲ್ಲಿ ಹಾಗೂ ದಿನದ ಹತ್ತಾರು ಸೂರ್ಯೋದಯಗಳಲ್ಲಿ ಅವುಗಳ ಮೊಳಕೆಯ ಸ್ಥಿತಿಗತಿ ಏನು ಎಂದು ಕ್ಯಾಪ್ಟನ್‌ ಶುಕ್ಲಾ ಪರೀಕ್ಷೆ ಮಾಡಬಹುದು. ಹಿಂದೆಲ್ಲ ಬಾಹ್ಯಾಕಾಶಕ್ಕೆ ಹೋದವರು ಹೀಗೇ ನಾನಾ ಬಗೆಯ ಪ್ರಯೋಗಗಳನ್ನು ನಡೆಸಿದ್ದರು.

ಅಲ್ಲಿ ಮೋಂಬತ್ತಿ ಉರಿಸಿದರೆ ದೀಪ ಗೋಲಾಕಾರ ತಾಳುತ್ತದೆ. ಬಾಯಿ ಮುಕ್ಕಳಿಸಿ ಉಗುಳಿದರೆ ಅದೂ ಚೆಂಡಿನಂತೆ ಅಥವಾ ಮುತ್ತಿನ ಮಣಿಯಂತೆ ಮುಖದ ಎದುರೇ ತೇಲಾಡುತ್ತದೆ ಎಂಬುದು ನಮಗೆಲ್ಲ ಗೊತ್ತು. ಅದಕ್ಕಿಂತ ಭಿನ್ನವಾದ ಏನೇನನ್ನು ಮಾಡಬಹುದು ಎಂದು ನೋಡಲು ಮಕ್ಕಳಿಗೂ ಮುದ ನೀಡುವ ಯೋ-ಯೋ ಎಂಬ ಗಿರಗಿಟ್ಟೆಯನ್ನು ಸುತ್ತಿಸಿದ್ದೇನು, ಹಸಿರುಪಾಚಿಯನ್ನು ಹಾವಿನಂತೆ ಓಡಾಡಿಸಿದ್ದೇನು, ಹಂದಿಮೂತಿಯ, ಎಂಟು ಕಾಲುಗಳ ಟಾರ್ಡಿಗ್ರಾಡ್‌ ಎಂಬ ಅತಿಸೂಕ್ಷಗಾತ್ರದ ಮುದ್ದು ಜೀವಿಗಳ ಪ್ರಣಯಕೇಳಿಯ ಪರೀಕ್ಷೆ ಮಾಡಿದ್ದೇನು…. ಪಟ್ಟಿ ಸಾಕಷ್ಟು ಉದ್ದ ಇದೆ. ಹಿಂದೆ ರಾಕೇಶ್‌ ಶರ್ಮಾ ಸೋವಿಯತ್‌ ರಷ್ಯದ ʼಸೆಲ್ಯೂತ್‌ 7ʼ ನೌಕೆಯಲ್ಲಿ ಬಾಹ್ಯಾಕಾಶ ಸುತ್ತುತ್ತಿದ್ದಾಗ ಯೋಗಾಸನ ಹಾಕಿ, ರಷ್ಯನ್ನರನ್ನು ಮಂತ್ರಮುಗ್ಧ ಮಾಡಿದ್ದರು. ಶುಭಾಂಶು ಕೂಡ ಯೋಗಾಸನ ಹಾಕಲಿದ್ದಾರೆ. ಆದರೆ ಈ ಬಾರಿ ದೇಹಕ್ಕೆ ಅದೇನೇನೊ ಪಟ್ಟಿಗಳನ್ನು ಜೋಡಿಸಿಕೊಂಡು ತಮ್ಮ ಮೈಕೈಗಳ ಸ್ನಾಯುಗಳ ಬಿಗಿಸಡಿಲಗಳ ಪರೀಕ್ಷೆ ಮಾಡಲಿದ್ದಾರಂತೆ. ವಾರಗಟ್ಟಲೆ ಅಲ್ಲಿದ್ದಾಗ ಒಟ್ಟೂ ಎಷ್ಟು ನೀರನ್ನು ಖರ್ಚು ಮಾಡಿದರು, ನೀರಿನ ಮಿತಬಳಕೆ, ಮರುಬಳಕೆ ಹೇಗೆ (ಅಲ್ಲಿ ಮೂತ್ರವನ್ನೂ ಶುದ್ಧ ನೀರನ್ನಾಗಿ ಬದಲಿಸಿಕೊಳ್ಳುತ್ತಾರೆ) ಎಂಬುದನ್ನೂ ಅವರು ನಮಗೆ ತಿಳಿಸಿಕೊಟ್ಟರೆ ಅದನ್ನು ಶಾಲಾ ಮಕ್ಕಳ ಪಾಠದಲ್ಲಿ ಸೇರಿಸಬಹುದು.

ಇವರು ಹೈಸ್ಕೂಲ್‌ನಲ್ಲಿದ್ದಾಗ ಕಾರ್ಗಿಲ್‌ ಯುದ್ಧದ ರೋಚಕ ಸುದ್ದಿ ಬರುತ್ತಿದ್ದಾಗಲೇ ತಾನೂ ಯೋಧ ಆಗಲೇಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಅಕ್ಕನ ಮದುವೆಯ ದಿನವಿಡೀ ಇವರು ನಾಪತ್ತೆಯಾಗಿದ್ದರು. ಸಂಜೆ ಬಂದಾಗಲಷ್ಟೇ ನೆಂಟರಿಷ್ಟರಿಗೆ ಗೊತ್ತಾಗಿದ್ದೇನೆಂದರೆ ಶುಭಾಂಶು ಎನ್‌ಡಿಎ (ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿ) ಪ್ರವೇಶ ಪರೀಕ್ಷೆ ಬರೆಯಲು ಹೋಗಿದ್ದರು.

ಅಲ್ಲಿ ಪಾಸಾಗಿ ಮೇಲಕ್ಕೆ ಏರುತ್ತ ಏರುತ್ತ ಈಗ ಬಾಹ್ಯಾಕಾಶವನ್ನೇ ತಲುಪಿದ್ದಾರೆ. ಈಗೇನೋ ಖಾಸಗಿ ನೌಕೆಯಲ್ಲಿನ ಅವರ ಪಯಣಕ್ಕೆಂದು ಭಾಋತ ಸರ್ಕಾರ ₹ 550 ಕೋಟಿ ಶುಲ್ಕವನ್ನು ಕಟ್ಟಿದೆ. ಆದರೆ ಇನ್ನೆರಡು ಮೂರು ವರ್ಷಗಳಲ್ಲಿ ʼಗಗನಯಾನ್‌ʼ ಯೋಜನೆಯ ಮೂಲಕ ನಮ್ಮದೇ ನೌಕೆಯ ಮೇಲೆ ಪಯಣಿಸಲೆಂದು ಆಯ್ಕೆಯಾದ ನಾಲ್ವರಲ್ಲಿ ಇವರೇ ಅನುಭವಿ ಗಗನಯಾನಿ ಆಗಲಿದ್ದಾರೆ. ಈ ಪಯಣವನ್ನು ಅವರು ಸುರಕ್ಷಿತ ಮುಗಿಸಿ ಬರಲಿ ಎಂದು ಹಾರೈಸೋಣ.

ಈಗ ಮತ್ತೆ ಐಎಸ್‌ಎಸ್‌ಗೆ ಮತ್ತೆ ಬನ್ನಿ. ಬಾಹ್ಯಾಕಾಶ ನಿಲ್ದಾಣದ ಆ ಏಕಾಂತವಾಸದ ನಡುವೆ ಯಾತ್ರಿಗಳಿಗೆ ಮನರಂಜನೆಯೂ ಬೇಕಲ್ಲ? (ನೆನಪಿಡಿ ಅಲ್ಲಿ ನಾಲ್ಕು ಮಂದಿ ಎದುರಾಬದುರಾ ಕೂತು ಇಸ್ಪೀಟ್‌ ಆಡಲು ಸಾಧ್ಯವಿಲ್ಲ) ಆದರೆ ಇತರ ರಂಜನೀಯ ಕತೆಗಳೂ ಬೇಜಾನ್‌ ಇವೆ:

ಸ್ಕಾಟ್‌ ಕೆಲ್ಲಿ ಮತ್ತು ಮಾರ್ಕ್‌ ಕೆಲ್ಲಿ ಎಂಬಿಬ್ಬರು ಅವಳಿ ಜವಳಿ ಗಗನಯಾತ್ರಿಗಳ ಕತೆ ಕೇಳಿ: ಐಎಸ್‌ಎಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಸ್ಕಾಟ್‌ನ ಜನ್ಮದಿನದ ಉಡುಗೊರೆಯಾಗಿ ನೆಲದಲ್ಲಿದ್ದ ಅಣ್ಣ ಮಾರ್ಕ್‌ ಸ್ಕಾಟ್‌ 2016ರಲ್ಲಿ ಒಂದಿಡೀ ಗೊರಿಲ್ಲಾ ಛದ್ಮವೇಷವನ್ನೇ ಮೇಲಕ್ಕೆ ಕಳ್ಳಸಾಗಣೆ ಮಾಡಿ ಕಳಿಸಿದ. ಐಎಸ್‌ಎಸ್‌ನಲ್ಲಿದ್ದ ಐರೋಪ್ಯ ಬಾಹ್ಯಾಕಾಶ ಸಂಘದ ಟಿಮ್‌ ಪೀಕ್‌ ಎಂಬಾತನಿಗೆ ಇದು ಗೊತ್ತಿರಲಿಲ್ಲ. ಸ್ಕಾಟ್‌ ಮೆಲ್ಲಗೆ ಗೊರಿಲ್ಲಾ ವೇಷ ತೊಟ್ಟು ಜಿಗಿಯುತ್ತ (ಅಲ್ಲಿ ಎಲ್ಲರೂ ಜಿಗಿಯುತ್ತ, ತೇಲುತ್ತಲೇ ಚಲಿಸಬೇಕು ಅನ್ನಿ) ಬಂದಾಗ ಟಿಮ್‌ ಗಾಬರಿಯಾಗಿ ಕೂಗುತ್ತ ಚೀರುತ್ತ ಓಡಿದ್ದೂ, ಈತ ಆತನನ್ನು ಅಟ್ಟಿಸಿಕೊಂಡು ಈಜಿದ್ದೂ ಭಲೇ ತಮಾಷೆಯ ದೃಶ್ಯವಾಗಿ ಈಗಲೂ ಅದನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

ಈಗಿನ ತಂಡದ ಮುಖ್ಯಸ್ಥೆಯಾಗಿ 56ರ ಹರಯದ ಪೆಗ್ಗಿ ವಿಟ್ಸನ್‌ ಹೋಗಲಿದ್ದಾರಲ್ಲ? ಅಮೆರಿಕದ ಮಟ್ಟಿಗೆ ಅವರಷ್ಟು ದೀರ್ಘ ಕಾಲ (ಒಟ್ಟು 675 ದಿನಗಳು) ಬಾಹ್ಯಾಕಾಶದಲ್ಲಿ ಕಳೆದವರು ಬೇರೆ ಯಾರೂ ಇಲ್ಲ. ಆಕೆ ಕೂಡ 2017ರ ಉಡ್ಡಾಣದಲ್ಲಿ ತಮಾಷೆಗೆಂದು ಸರಕು ಸಾಗಿಸುವ ಮೂಟೆಯಲ್ಲಿ ಅಡಗಿ ಕೂತರು. ಇತರ ಅಮೆರಿಕನ್‌ ಸಿಬ್ಬಂದಿ ಅವರಿದ್ದ ಮೂಟೆಯನ್ನು ತಳ್ಳಿಕೊಂಡು ಐಎಸ್ಸೆಸ್‌ಗೆ ಅಂಟಿಕೊಂಡಿದ್ದ ರಷ್ಯನ್‌ ಕಕ್ಷೆಗೆ ಹೋಗಿ ಬಿಚ್ಚಿದರು. ಮೂಟೆಯಿಂದ ಹಠಾತ್ತಾಗಿ ಹಿಗ್ಗಿ ಎದ್ದ ಪೆಗ್ಗಿಯನ್ನು ನೋಡಿ ಕಕ್ಕಾಬಿಕ್ಕಿಯಾದರು.

ಕಳೆದ ವರ್ಷ ಸುನಿತಾ ಮತ್ತು ವಿಲ್ಮೋರ್‌ ಅವರನ್ನು ಭೂಮಿಗೆ ಕರೆ ತರುವ ಸಿದ್ಧತೆಗೆಂದು ಮುಚ್ಚಳ ತೆರೆದಾಗ ಅನ್ಯಲೋಕದ ಜೀವಿಯಂತೆ ಮುಖವಾಡ ಹಾಕಿದ್ದ ನಿಕ್‌ ಹೇಗ್‌ ಎಂಬಾತ ಈಜುತ್ತ ಈಚೆ ಬಂದು ವೀಕ್ಷಕರನ್ನು ತಬ್ಬಿಬ್ಬು ಮಾಡಿದ್ದ.

ಅಂಥ ಚೆಲ್ಲಾಟಗಳ ಕತೆ ಹೇಗೂ ಇರಲಿ. ಸೌರಮಂಡಲದ ಏಕೈಕ ಜೀವಂತ ಗ್ರಹವೆನಿಸಿ, ಅದೆಷ್ಟು ಕೋಟಿ ಜೀವಿಗಳನ್ನು ಪೊರೆಯುತ್ತ ತನ್ನಷ್ಟಕ್ಕೆ ಸುತ್ತುತ್ತಿರುವ ಈ ಸುಂದರ ಸಮೃದ್ಧ ಭೂಮಿಯನ್ನು ಏಕಾಂತದಲ್ಲಿ ನೋಡುವುದೇ ಒಂದು ಅಲೌಕಿಕ ಅನುಭವ ತಾನೆ? ಇಲ್ಲಿ ನಾಯಕರೆನಿಸಿದವರು ನಮ್ಮನ್ನೇ ಆಯುಧಗಳನ್ನಾಗಿ ಮಾಡಿ ಬಡಿದಾಡಿಕೊಳ್ಳುತ್ತ ಈ ಅಪೂರ್ವ ʻಗೃಹʼದ ಚಿಂದಿ ಉಡಾಯಿಸುತ್ತಿದ್ದಾರಲ್ಲ? ಆ ಎತ್ತರದಲ್ಲಿ ಯೋಗಾಸನ ಹಾಕಿ ಇದನ್ನೆಲ್ಲ ನೋಡುವ ವಿಷಾದ ಯೋಗ ಹೇಗಿರುತ್ತದೊ.

 

ನಾಗೇಶ್ ಹೆಗಡೆ 

 

(ನಾಗೇಶ್ ಹೆಗಡೆ ಬ್ಲಾಗ್ ನಿಂದ ಆಯ್ಕೆ ಮಾಡಲದ ಬರಹ )

Don`t copy text!