ಮಹಿಳಾ ವಿಶ್ವಕಪ್ ಕ್ರಿಕೆಟ್ ನ ವಿಶ್ವ ಚಾಂಪಿಯನ್ ಪಟ್ಟ… ಭಾರತದ ಪಾಲಿಗೆ

ಮಹಿಳಾ ವಿಶ್ವಕಪ್ ಕ್ರಿಕೆಟ್ ನ ವಿಶ್ವ ಚಾಂಪಿಯನ್ ಪಟ್ಟ… ಭಾರತದ ಪಾಲಿಗೆ

 

ಅನಿರೀಕ್ಷಿತವಾಗಿ ಕೈಗೆ ಸಿಕ್ಕ ಆ ಕ್ಯಾಚ್ ಕೈಯಿಂದ ತಪ್ಪೇಹೋಯಿತು ಎಂಬ ಹಂತದಲ್ಲಿ ಹಿಡಿದು, ಮತ್ತೆ ತಪ್ಪಿ ಅಂತಿಮವಾಗಿ ಅದನ್ನು ಹಿಡಿದು ನೆಲದ ಮೇಲೆ ಅಂಗಾತ ಮಲಗಿದ ಕ್ರಿಕೆಟ್ ಪಟುವಿನ ಮುಖದಲ್ಲಿ ತೃಪ್ತಿ ಇದ್ದರೆ ಧಾವಂತದಿಂದ ಆಕೆಯ ಬಳಿ ಬಂದ ಇನ್ನಿಬ್ಬರು ಮಹಿಳಾ ಕ್ರೀಡಾಪಟುಗಳು ಸಮಾಧಾನದ ನಿಟ್ಟುಸಿರು ಬಿಟ್ಟು ಆಕೆಯ ಎದೆಯ ಮೇಲೊರಗಿದರು. ಇದೊಂದು ಭರವಸೆ ಸಾಕಿತ್ತು. ಭಾರತದ ಕ್ರಿಕೆಟ ನ ಇತಿಹಾಸದಲ್ಲಿಯೇ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ ಈ ಅವಿಸ್ಮರಣೀಯ ಘಟನೆ ಮುಂದಿನ ಎಲ್ಲ ಯಶಸ್ಸಿಗೆ ಭದ್ರ ಬುನಾದಿಯನ್ನು ಹಾಕಿತು.

ಮುಂಬೈಯ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನವಂಬರ್ 2ರ ಭಾನುವಾರ ಮಧ್ಯಾಹ್ನ ಭಾರತ ಮತ್ತು ಸೌತ್ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಆರಂಭದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್ ಅನ್ನು ಆಯ್ಕೆ ಮಾಡಿಕೊಂಡಿತು. ಭಾರತ ಕ್ರಿಕೆಟ್ನ ಮಹಿಳಾ ತಂಡ ಆಕರ್ಷಕವಾದ ಆಟವನ್ನು ಪ್ರದರ್ಶಿಸಿ 298 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ದೀಪ್ತಿ ಶರ್ಮಾ ಹಾಗೂ ಶೆಫಾಲಿ ವರ್ಮ ಅವರ ಆಲ್ರೌಂಡ್ ಆಟದಿಂದ ಹಾಗೂ ತಂಡದ ಒಟ್ಟು ಸಂಘಟಿತ ಪ್ರಯತ್ನದಿಂದಾಗಿ ಯಶಸ್ವಿಯಾಗಿತ್ತು. ಜಯದ ಹಾದಿಗೆ 299 ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಉತ್ತಮವಾಗಿ ಕಾರ್ಯಾರಂಭ ಮಾಡಿತು, ಆದರೆ ಹತ್ತನೇ ಓವರ ನಲ್ಲಿ ಬ್ರಿಡ್ಸ್ ರನ್ನು ಔಟ್ ಮಾಡುವುದರೊಂದಿಗೆ ಭಾರತಕ್ಕೆ ಯಶಸ್ಸಿನ ಸಂಭ್ರಮದ ಮೊದಲ ಹಾದಿ ತೆರೆದುಕೊಂಡಿತು. ನಂತರವೂ ಒಂದೆರಡು ಬಾರಿ ನಿಧಾನವಾಗಿ ಹಿಂದೇಟು ಹಾಕಿ ಮತ್ತೆ ಕುದುರಿಕೊಂಡ ಆಟದಲ್ಲಿ ಇನ್ನೇನು ಎರಡೂ ತಂಡಗಳು ಸಮಬಲ ಸಾಧಿಸುತ್ತಿದೆ ಎಂದು ಅಂದುಕೊಳ್ಳುವಷ್ಟರಲ್ಲಿ, ಒಂದರ ಹಿಂದೊಂದರಂತೆ ವಿಕೆಟ್ಗಳನ್ನು ಕಳೆದುಕೊಂಡ ಸೌತ್ ಆಫ್ರಿಕಾ 30 ಓವರ್ ನ ಹೊತ್ತಿಗೆ ಕೇವಲ ಇನ್ನೂರರ ಆಸುಪಾಸು ರನ್ ಕಲೆ ಹಾಕಿತು. ಅಂತಿಮವಾಗಿ 55ನೇ ಓವರಿನಲ್ಲಿ ದಕ್ಷಿಣ ಆಫ್ರಿಕಾದ 10ನೇ ವಿಕೆಟ್ ಅನ್ನು ನಾಯಕಿ ಹರ್ಮನ ಪ್ರೀತ್ ಪಡೆದು ಸಂಭ್ರಮಿಸುವ ಮೂಲಕ ವಿಶ್ವಕಪ್ ವಿಜಯವನ್ನು ತಮ್ಮ ತಂಡದ ಮುಡಿಗೇರಿಸಿಕೊಂಡರು. ಭಾರತ ದೇಶದ ಮಹಿಳಾ ಕ್ರಿಕೆಟ್ ತಂಡವು 52 ರನ್ ಗಳ ಅಂತರದ ವಿಜಯವನ್ನು ಸಾಧಿಸಿ ವಿಶ್ವಕಪ್ ಏಕದಿನ ಪಂದ್ಯಾವಳಿಯಲ್ಲಿ ಜಯ ಪಡೆದು ವಿಶ್ವಕಪ್ ಎತ್ತಿ ಹಿಡಿದರು.

ಎಲ್ಲಾ ಕ್ರೀಡಾಳುಗಳ ಕಣ್ಣುಗಳಲ್ಲಿ ಆನಂದ ಭಾಷ್ಪ ಇದ್ದರೆ ಹೃದಯ ತುಂಬಿ ಬಂದಿತ್ತು. ಇಷ್ಟು ವರ್ಷಗಳ ಶ್ರಮ ಸಾರ್ಥಕವಾದ ಗಳಿಗೆ ಅವರೆಲ್ಲರಲ್ಲೂ ಸಂಭ್ರಮವನ್ನು ಉಂಟು ಮಾಡಿತ್ತು. ಇನ್ನು ಪ್ರೇಕ್ಷಕರಂತೂ ಅಮೋಘವಾಗಿ ಭಾರತೀಯ ಯುವತಿಯರನ್ನು ಬೆಂಬಲಿಸಿದರು.

ಪಂದ್ಯಾವಳಿಯ ಮಧ್ಯದಲ್ಲಿ ರಿಲಯನ್ಸ್ ಸಂಸ್ಥೆಯ
ನೀತಾ ಅಂಬಾನಿ ಅವರನ್ನು ವಿಶ್ವಕಪ್ ಕ್ರಿಕೆಟ್ನ ಈ ಮಹಿಳಾ ಪಂದ್ಯಾವಳಿಯ ಕುರಿತು ಪ್ರಶ್ನಿಸಿದಾಗ ಇದರಲ್ಲಿ ಭಾರತ ತಂಡ ಜಯ ಸಾಧಿಸಿದರೆ ಆಗಬಹುದಾದ ಮಹತ್ವದ ಬದಲಾವಣೆಗಳ ಕುರಿತು ಕೇಳಿದಾಗ ನೀತಾ ಅಂಬಾನಿ ಹೇಳಿದ ಮಾತು ಮಾರ್ಮಿಕವಾಗಿತ್ತು.

ಹೆಣ್ಣು ಮಕ್ಕಳು ತಮ್ಮ ಬದುಕಿನ ನಿರ್ಧಾರಗಳನ್ನು ಕೈಗೊಳ್ಳಲು ಈ ಜಯದ ಅವಶ್ಯಕತೆ ಇತ್ತು. ಇಡೀ ರಾಷ್ಟ್ರ ನಿಮ್ಮ ಈ ಜಯದ ಕಾರಣ ಸಂತಸದಿಂದ ಉಬ್ಬಿ ಹೋಗಿದೆ. ನಿಮ್ಮ ಛಲ, ಬದ್ಧತೆ ಮತ್ತು ನಿರಂತರ ಪರಿಶ್ರಮಕ್ಕೆ ಕೊನೆಗೂ ಫಲ ದೊರೆತಿದೆ. ನಿಮ್ಮ ಧೈರ್ಯ, ದೃಢ ನಂಬಿಕೆ ಮತ್ತು ಆತ್ಮ ವಿಶ್ವಾಸ ಇಡೀ ಭಾರತದ ಎಲ್ಲಾ ಮಹಿಳೆಯರಲ್ಲಿ ಹೊಸದೊಂದು ಭರವಸೆಯನ್ನು ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತದ ಮಹಿಳಾ ತಂಡದವರು ಇದಕ್ಕೂ ಮುನ್ನ ಎರಡು ಬಾರಿ ಫೈನಲ್ ಪ್ರವೇಶಿಸಿದ್ದರೂ ಕೂಡ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ, ಆದರೆ ಈ ಬಾರಿ ತವರಿನ ಮೈದಾನದಲ್ಲಿ ಟ್ರೋಫಿಯನ್ನು ಪಡೆಯಲೇಬೇಕು ಎಂಬ ಹರ್ಮನ್ ಪ್ರೀತ್ ಕೌರ್ ತಂಡದ ದಿಟ್ಟ ಹೋರಾಟ ಮತ್ತು ಸಾಂಘಿಕ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರೆಯಿತು. ಮಹಿಳಾ ವಿಶ್ವಕಪ್ ಗೆದ್ದ ಎಲ್ಲ ಮಹಿಳಾ ಕ್ರೀಡಾಪಟುಗಳಿಗೆ ದೇಶಾದ್ಯಂತ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

ಭಾರತದ ಪ್ರಧಾನಿ ಟೂರ್ನಿಯಲ್ಲಿ ಸಂಘಟಿತ ಪ್ರದರ್ಶನ ತೋರಿದ ನಮ್ಮ ಆಟಗಾರ್ತಿಯರಿಗೆ ಅಭಿನಂದನೆಗಳನ್ನು ಹೇಳುತ್ತಾ “ಈ ಐತಿಹಾಸಿಕ ವಿಜಯವು ದೇಶದ ಭವಿಷ್ಯದ ಚಾಂಪಿಯನ್ಗಳಿಗೆ ಸ್ಪೂರ್ತಿ ತುಂಬಲಿದೆ” ಎಂದು ಸಂತಸ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಕೋಟ್ಯಾಂತರ ಭಾರತೀಯರು ಕಂಡ ಕನಸು ನನಸಾಯಿತು ಎಂದು ಅವರು ಹೇಳಿದರು.

2005 ಮತ್ತು 2017ರ ಟೂರ್ನಿಗಳ ಫೈನಲ್ ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿ ಯಾವುದೇ ರೀತಿಯ ತಪ್ಪಿಗೆ ಅವಕಾಶ ನೀಡದೆ ನಿಖರವಾಗಿ ತಮ್ಮ ಗುರಿಯನ್ನು ಬೆನ್ನಟ್ಟಿದ್ದು ಸಾರ್ಥಕವಾಗಿದೆ ಎಂದು ನಾಯಕಿ ಹರ್ಮನ್ ಅವರು ಹೇಳಿದರು.
ಕನಸು ನನಸಾದ ಈ ಕ್ಷಣ ತಮ್ಮ ಬದುಕಿನ ಮಹತ್ವದ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನುದ್ದೇಶಿಸಿ ಬಹುದೊಡ್ಡ ವಿಜಯದ ಹಿಂದೆ ತಮ್ಮ ತಂಡದ ಎಲ್ಲ ಸದಸ್ಯರ ಬೆಂಬಲ ಮತ್ತು ಪ್ರೋತ್ಸಾಹ ಇದೆ ಎಂದು ಹರ್ಮನ್ ಹೇಳಿದರು.

ಭಾರತ ಕ್ರಿಕೆಟ್ ತಂಡದ ಪುರುಷರ ವಿಭಾಗದ ಕ್ಯಾಪ್ಟನ್ ಆಗಿದ್ದ ರೋಹಿತ್ ಶರ್ಮಾ ಮಾತನಾಡಿ ಇಂದು ಭಾರತ ದೇಶದ ಪ್ರತಿ ಗಲ್ಲಿಯಲ್ಲಿ ಕ್ರಿಕೆಟ್ ಅಲ್ಲ…. ಪ್ರೇರಣೆ ಸ್ಪುರಿಸುತ್ತಿದೆ ಭಾರತದ ಪುತ್ರಿಯರು ಕ್ರಿಕೆಟ್ನ ವರ್ಲ್ಡ್ ಕಪ್ ಗೆದ್ದು ಹೊಸ ಕಥೆಯನ್ನು ಬರೆದಿದ್ದಾರೆ… ಅವರೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

ಈ ಹಿಂದೆ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ
” ವಿಮನ್ ಇನ್ ಬ್ಲೂ” ಖ್ಯಾತಿಯ ಮಿಥಾಲಿ ರಾಜ್
ಕಳೆದ ಎರಡು ದಶಕಗಳಿಂದ ತಾನು ಕಂಡ ಕನಸು ಇಂದು ನನಸಾಗಿದೆ. ನಿಮ್ಮ ಶ್ರಮ, ತ್ಯಾಗ ಮತ್ತು ಗುರಿ ಇಂದು ಸಾರ್ಥಕವಾಗಿದೆ ನೀವು ಕೇವಲ ವಿಶ್ವಕಪ್ ಮಾತ್ರ ಗೆದ್ದಿಲ್ಲ ಬದಲಾಗಿ ಪ್ರತಿಯೊಬ್ಬ ಭಾರತೀಯನ ಹೃದಯದ ಮಿಡಿತವನ್ನು ನಿಮ್ಮ ಗೆಲುವಿಗಾಗಿ ಕಾತರದಿಂದ ಕಾಯುವಂತೆ ಮಾಡಲು ಯಶಸ್ವಿಯಾಗಿದ್ದೀರಿ ಅವರ ಮನಸ್ಸನ್ನು ಗೆದ್ದಿರುವ ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

ಕಳೆದ ಎರಡು ದಶಕಗಳಿಂದ ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಕ್ರಿಯವಾಗಿದ್ದ ಜೂಲನ್ ಗೋಸ್ವಾಮಿ, ಮಿಥಾಲಿ ರಾಜ್ ಹಾಗೂ ಅಂಜುಮ್ ಚೋಪ್ರಾ ಅವರ ಕೈಗೆ ವರ್ಲ್ಡ್ ಕಪ್ ಟ್ರೋಫಿಯನ್ನು ಹಸ್ತಾಂತರಿಸಿ ತಮಗೆ ಕ್ರಿಕೆಟ್ ನಲ್ಲಿ ದಾರಿ ತೋರಿದ ಆ ಮಾಜಿ ಮಹಿಳಾ ಕ್ರಿಕೆಟ್ಟಿಗರೊಂದಿಗೆ, ಹಾಲಿ ವಿಶ್ವ ಚಾಂಪಿಯನ್ ಮಹಿಳಾ ಕ್ರೀಡಾ ಪಟುಗಳು ಸಂಭ್ರಮಿಸಿದರು.

ಭರವಸೆಯ ನಾಳೆಗಳಿಗೆ ಮುನ್ನುಡಿ ಬರೆದ ವಿಶ್ವ ಚಾಂಪಿಯನ್ನರಿಗೆ ಶುಭ ಹಾರೈಸುತ್ತಾ

 

ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ, ಗದಗ್

Don`t copy text!