ಶ್ರಾವಣ

ಶ್ರಾವಣ

ಜಿಟಿ ಜಿಟಿ ಮಳೆಯು
ಶುರುವಾಯ್ತು
ಶ್ರಾವಣ ಮಾಸಕೆ
ಕಳೆಯಾಯ್ತು….
ಹೊಲದಲಿ ಬೆಳೆಗೆ
ಹಸಿರಾಯ್ತು
ಅಂಗಳದ ಬೀದಿಗೆ
ನೀರಾಯ್ತು …

ಅಪ್ಪನು ಮಾಡಿದ
ಕಾಗದ ದೋಣಿ
ಹಿಡಿದು ಬಂದೆನು
ಅಂಗಳಕೆ ಓಡಿ
ದೋಣಿಯಲೆರಡು
ಹರಳನು ಹಾಕಿ
ಹರಿಯುವ ನೀರಲಿ
ತೇಲಲು ನೂಕಿ
ಓಡುವ ದೋಣಿಯ
ಬೆನ್ನನು ಹತ್ತಿ
ನೀರು-ಕೆಸರು ಮೈಮೆತ್ತಿ

ಬಂದಿತು ಹಬ್ಬವು
ನಾಗರಪಂಚಮಿ
ಬಗೆಬಗೆ ಉಂಡಿಯ
ರುಚಿಯಲ್ಲಿ
ಹುತ್ತಿನ ಮಣ್ಣಿನ
ಹಾವಿನ ಮೂರುತಿ
ಕುಳಿತಿತು ಮನೆಯ
ಜಗುಲಿಯಲಿ…..

ಹುತ್ತಿಗೂ ಮೂರ್ತಿಗೂ
ಹಾಲನು ಎರೆಯುತ
ಕೊಬ್ಫರಿ ಬಟ್ಟಲ ಕೈಯೊಳು
ಗಿರಿಗಿರಿ ತಿರುಗುತ
ಗಿಡದಲಿ ಕಟ್ಟಿದ
ಜೋಕಾಲಿ
ಜೀಕಲು ಬಂದೆನು
ಓಡೋಡಿ…..

ಊರ ದೇವರಿಗೆ
ಹಬ್ಬ ಉತ್ಸವ
ಮಠದ ಅಂಗಳದಿ
ಪುರಾಣ ಪ್ರವಚನ
ಶ್ರಾವಣ ಮಾಸದಿ
ಹಬ್ಬವು ದಿನವೂ
ನೆಲ-ಮುಗಿಲೆಲ್ಲಕೂ
ಸಂಭ್ರಮವು…..

-ಕೆ. ಶಶಿಕಾಂತ
ಲಿಂಗಸೂಗೂರ

Don`t copy text!